ಯಾರನ್ನೂ ಬಿಡುವುದಿಲ್ಲ, ಪ್ರತಿ ಭಾರತೀಯನಿಗೂ ಲಸಿಕೆ ಸಿಗಲಿದೆ: ಪ್ರಧಾನಿ ಮೋದಿ
ನವದೆಹಲಿ, ಅಕ್ಟೋಬರ್ 29: ಲಸಿಕೆ ಲಭ್ಯವಾದ ಬಳಿಕ ಪ್ರತಿಯೊಬ್ಬ ಭಾರತೀಯರಿಗೂ ಲಸಿಕೆ ನೀಡಲಾಗುವುದು, ಯಾರೊಬ್ಬರನ್ನೂ ಹೊರತಾಗಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಲಸಿಕೆ ನಿರ್ವಹಣೆ ಹಾಗೂ ಅದಕ್ಕೆ ಸೂಕ್ತ ರೂಪುರೇಷೆ ಸಿದ್ಧಪಡಿಸಲು ರಾಷ್ಟ್ರೀಯ ಪರಿಣತರ ಗುಂಪನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
'ದೇಶದ ಎಲ್ಲರಿಗೂ ನಾನು ಭರವಸೆ ನೀಡಲು ಬಯಸುತ್ತೇನೆ. ಒಮ್ಮೆ ಲಸಿಕೆ ಲಭ್ಯವಾದ ಬಳಿಕ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು. ಯಾರನ್ನೂ ಇದರಿಂದ ಬಿಡುವುದಿಲ್ಲ' ಎಂದು 'ಎಕನಾಮಿಕ್ಸ್ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ ಮೋದಿ ತಿಳಿಸಿದ್ದಾರೆ.
ಕೊವಿಡ್ 19 ಲಸಿಕೆ ಯಾವಾಗ ಲಭ್ಯ: ಅದಾರ್ ಪೂನಾವಾಲಾ ಹೇಳಿದ್ದೇನು?
'ಆರಂಭದಲ್ಲಿ ನಾವು ಅತಿ ಹೆಚ್ಚು ಅಪಾಯಕ್ಕೆ ಸಿಲುಕುವಂತಹವರನ್ನು ಮತ್ತು ಮುಂಚೂಣಿ ಸೇವಕರನ್ನು ರಕ್ಷಿಸುವುದರ ಬಗ್ಗೆ ಗಮನಹರಿಸುತ್ತೇವೆ. ಇದಕ್ಕೆ ಸೂಕ್ತ ರೀತಿಯಲ್ಲಿ ರೂಪುರೇಷೆಯನ್ನು ರಚಿಸಲು ಲಸಿಕೆ ನಿರ್ವಹಣೆಗಾಗಿ ರಾಷ್ಟ್ರೀಯ ಪರಿಣತರ ತಂಡವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
'ಲಸಿಕೆಗಳನ್ನು ದಾಸ್ತಾನು ಮಾಡಲು ದೇಶದಾದ್ಯಂತ 28,000ಕ್ಕೂ ಅಧಿಕ ಶೈತ್ಯ ಸರಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರತಿ ಹಳ್ಳಿ ಹಳ್ಳಿಗೂ ಕೋವಿಡ್ ಲಸಿಕೆ ಹಂಚಿಕೆಯಾಗುವಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಲಸಿಕೆ ವಿತರಣೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ಅದಕ್ಕಾಗಿಯೇ ಇರುವ ತಂಡ ವ್ಯವಸ್ಥಿತ ಹಾಗೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಲಿದೆ' ಎಂದಿದ್ದಾರೆ.
ಕೋವಿಡ್-19 ಚಿಕಿತ್ಸೆಗೆ ರೆಮ್ಡೆಸಿವಿರ್ ಪರಿಣಾಮಕಾರಿ: ಡಾ. ಮಂಜುನಾಥ್
'ಆದರೆ ಕೊರೊನಾ ವೈರಸ್ ಲಸಿಕೆ ಸಿದ್ಧಪಡಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಪ್ರಯೋಗಗಳನ್ನು ನಡೆಸಲಾಗುತ್ತಿದೆ. ನಾಗರಿಕರಿಗೆ ಯಾವ ರೀತಿ ಕೋವಿಡ್ ಲಸಿಕೆಗಳನ್ನು ವಿತರಣೆ ಮಾಡಬಹುದು ಎಂಬ ಬಗ್ಗೆ ಪರಿಣತರ ತಂಡ ಮಾರ್ಗದರ್ಶನ ಮಾಡಲಿದೆ' ಎಂದು ತಿಳಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದರೆ ಬಿಹಾರದ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು ಎಂಬ ಬಿಜೆಪಿಯ ಪ್ರಣಾಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು.