ಬಸವೇಶ್ವರ ಜಯಂತಿಯಂದು ಕರ್ನಾಟಕ ರಾಜಕಾರಣ, ಮೋದಿಯ ಮಾತುಗಳು
ಇಂದು ಬಸವೇಶ್ವರ ಜಯಂತಿ. ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದು, ಲಂಡನ್ ನ ಸಂಸತ್ ಆವರಣದಲ್ಲಿರುವ ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸುವ ಮೂಲಕ ಜಯಂತಿ ಆಚರಿಸಿದ್ದಾರೆ. ಅಂದಹಾಗೆ, ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಮುಂಚೂಣಿಯಲ್ಲಿರುವ ನರೇಂದ್ರ ಮೋದಿ ಅವರ ಈ ನಡೆ ಬಗ್ಗೆಯೂ ರಾಜಕೀಯ ವಿಶ್ಲೇಷಣೆ ನಡೆಯುತ್ತಿದೆ.
"ಬಸವೇಶ್ವರ ಜಯಂತಿಯಂದು ಅವರಿಗೆ ತಲೆ ಬಾಗಿದ್ದೇನೆ. ಇತಿಹಾಸ ಹಾಗೂ ಸಂಸ್ಕೃತಿಯಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಸಾಮಾಜಿಕ ಸೌಹಾರ್ದತೆ, ಭ್ರಾತೃತ್ವ, ಒಗ್ಗಟ್ಟು ಇವೆಲ್ಲಕ್ಕೂ ಒತ್ತು ನೀಡಿದವರು. ಯಾವಾಗಲೂ ನಮಗೆ ಸ್ಫೂರ್ತಿ. ಭಗವಾನ್ ಬಸವೇಶ್ವರರು ನಮ್ಮ ಸಮಾಜವನ್ನು ಒಗ್ಗೂಡಿಸಿದವರು ಮತ್ತು ಜ್ಞಾನಕ್ಕೆ ಪ್ರಾಮುಖ್ಯ ನೀಡಿದವರು" ಎಂದು ಬಸವೇಶ್ವರ ಜಯಂತಿ ಬಗ್ಗೆ ಟ್ವೀಟ್ ಮಾಡಿದ್ದಾರೆ.
'ಬಸವಣ್ಣಗೆ ಹಾರ ಹಾಕಬಾರದೆಂದು ಹೇಳಲು ಶೋಭಾ ಯಾರು?'
ಒಂದು ಕಡೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಲಿಂಗಾಯತ- ವೀರಶೈವ ಎಂದು ಜಾತಿ ಒಡೆಯಲು ಹೊರಟಿರುವ ಕರ್ನಾಟಕದ ಮುಖ್ಯಮಂತ್ರಿಗೆ ಬಸವೇಶ್ವರರ ವಿಗ್ರಹಕ್ಕೆ ಮಾಲೆ ಹಾಕಲು ಬಿಡಬಾರದು ಎಂಬ ಹೇಳಿಕೆ ನೀಡಿ, ಕೆಂಡದಂಥ ವಿವಾದಕ್ಕೆ ಒಂದಿಷ್ಟು ಗಾಳಿ ತೂರಿದ್ದರು.
ಇದನ್ನೇ ಚುನಾವಣೆ ಸೂಕ್ಷ್ಮ ಎಂಬಂತೆ, ಬಿಜೆಪಿ ಜತೆಗೆ ಗಟ್ಟಿಯಾಗಿ ನಿಂತಿದ್ದ ಲಿಂಗಾಯತ ಸಮುದಾಯವನ್ನು ಒಡೆದು ಹಾಕುವ ತಂತ್ರ ಸಿದ್ದರಾಮಯ್ಯ ಅವರದು. ಶತಾಯಗತಾಯ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತಪ್ಪಿಸಿಬೇಕು, ಬಿಜೆಪಿಯನ್ನು ಸೋಲಿಸಬೇಕು ಎಂಬುದು ಲೆಕ್ಕಾಚಾರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.