ರಾಷ್ಟ್ರೀಯ ಲಾಕ್ಡೌನ್ ನಿರ್ಧಾರ ಪ್ರಧಾನಿ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಮ್ಮಿ: 4 ಕಾರಣಗಳು
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ದೇಶದಲ್ಲಿ ಹರಡಲು ಆರಂಭಿಸಿದ ನಂತರ ಮತ್ತು ದೈನಂದಿನ ಕೇಸುಗಳ ಸಂಖ್ಯೆ ನಾಲ್ಕು ಲಕ್ಷದ ಗಡಿ ದಾಟಿದ ಸಂದರ್ಭದಲ್ಲಿ ಮತ್ತೆ ಕೇಂದ್ರ ಸರಕಾರ ರಾಷ್ಟ್ರೀಯ ಲಾಕ್ಡೌನ್ ಹೇರಬಹುದು ಎನ್ನುವ ಗುಮ್ಮ ಹರಿದಾಡಲಾರಂಭಿಸಿತು.
Recommended Video
ವಿಪರೀತವಾಗಿ ಏರುತ್ತಿದ್ದ ಮೃತ ಪಡುತ್ತಿರುವವರ ಸಂಖ್ಯೆ, ಅಲ್ಲಲ್ಲಿ ಆಕ್ಸಿಜನ್ ಕೊರತೆಗಳು, ವಿಶ್ವ ಮಟ್ಟದಲ್ಲಿ ಭಾರತದ ಆರೋಗ್ಯ ವ್ಯವಸ್ಥೆ ಸುದ್ದಿಯಾಗುತ್ತಿದ್ದ ಸಂದರ್ಭದಲ್ಲಿ ಸಂಪೂರ್ಣ ಲಾಕ್ಡೌನ್ ಬಗ್ಗೆ ಯೋಚಿಸಿ ಎಂದು ಸರ್ವೋಚ್ಚ ನ್ಯಾಯಾಲಯವೂ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.
ಡಿಸಿಗಳ ಜೊತೆ ಪ್ರಧಾನಿ ಮೋದಿ ನೇರ ಸಂವಾದ: ಇದನ್ನೇ ಹಿಂದೆ ಮಾಡಿದ್ದರೆ?
ಇನ್ನು, ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಂ ಭಾರ್ಗವ ಕೂಡಾ ಸದ್ಯದ ಪರಿಸ್ಥಿತಿಯಲ್ಲಿ ಎಂಟರಿಂದ ಹತ್ತು ವಾರ ಲಾಕ್ಡೌನ್ ಮಾಡುವುದೇ ಸೂಕ್ತ. ಇದರಿಂದ, ಕೊರೊನಾ ಚೈನ್ ಅನ್ನು ಬ್ರೇಕ್ ಮಾಡಬಹುದು ಎಂದು ಶಿಫಾರಸು ಮಾಡಿದ್ದರು.
ಭಾರತದಲ್ಲಿ ಭೀತಿ: ಒಂದೇ ದಿನ 4529 ಕೊರೊನಾ ರೋಗಿಗಳು ಸಾವು!
ಇದರ ಜೊತೆಗೆ, ಎಲ್ಲಾ ಪ್ರಮುಖ ವಿರೋಧ ಪಕ್ಷಗಳೂ ಲಾಕ್ಡೌನ್ ಹೇರುವುದೇ ಈಗ ಉಳಿದಿರುವ ದಾರಿ. "ವೈರಸ್ ವ್ಯಾಪಕವಾಗಿ ಹರಡಲು ಕೇಂದ್ರ ಸರಕಾರವೇ ಕಾರಣ. ಈಗ ದೇಶಕ್ಕೆ ಉಳಿದಿರುವ ದಾರಿ ಲಾಕ್ ಡೌನ್ ಒಂದೇ"ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಇದ್ಯಾವುದಕ್ಕೂ ಪ್ರಧಾನಿ ಮೋದಿ ಉತ್ತರಿಸಿರಲಿಲ್ಲ.
ಲಾಕ್ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಸುಪ್ರೀಂಕೋರ್ಟಿಗೆ ಸ್ಪಷ್ಟನೆ
ಲಾಕ್ಡೌನ್ ವಿಧಿಸಿದರೆ ಆಗಬಹುದಾದ ಸಾಮಾಜಿಕ, ಆರ್ಥಿಕ ಪರಿಣಾಮಗಳ ಕುರಿತು ನಮಗೆ ಅರಿವಿದೆ. ಹೀಗಾಗಿ ಲಾಕ್ಡೌನ್ ಮಾಡುವ ಮುನ್ನ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಜನರಿಗೆ ತೊಂದರೆಯಾಗದಂತೆ ಲಾಕ್ಡೌನ್ ಹೇರಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಆಕ್ಸಿಜನ್, ಔಷಧಿ ಸಮಸ್ಯೆ ತೀವ್ರಗೊಂಡಾಗ ಕಾರ್ಯಪಡೆಯನ್ನೂ ಸುಪ್ರೀಂ ರಚಿಸಿತ್ತು. ಆದರೆ, ಲಾಕ್ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ, ಸುಪ್ರೀಂಕೋರ್ಟಿಗೆ ಸ್ಪಷ್ಟನೆಯನ್ನು ನೀಡಿತ್ತು.
ರಾಜ್ಯಗಳಲ್ಲಿ, ಪ್ರಮುಖ ನಗರಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ
ನಾಲ್ಕು ಲಕ್ಷ ದಾಟುತ್ತಿದ್ದ ದೈನಂದಿನ ಕೇಸುಗಳ ಸಂಖ್ಯೆ ಈಗ 2.5ಲಕ್ಷದ ಆಸುಪಾಸಿಗೆ ಬಂದು ನಿಂತಿದೆ. ಕೋವಿಡ್ ಅಂಕಿಅಂಶಗಳನ್ನು ಸಾರ್ವಜನಿಕರು ನಂಬುವಂತಹ ಪರಿಸ್ಥಿತಿಯಲ್ಲಿ ಇದ್ದಾರೋ ಎನ್ನುವುದು ಆಮೇಲಿನ ಪ್ರಶ್ನೆಯಾದರೂ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮತ್ತು ಪ್ರಮುಖ ನಗರಗಳಲ್ಲಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ ಕಾಣುತ್ತಿದೆ. ಹಾಗಾಗಿ, ರಾಷ್ಟ್ರೀಯ ಲಾಕ್ಡೌನ್ ಹೇರುವ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಮ್ಮಿ. ಇದಕ್ಕೆ ಇನ್ನೂ ಕಾರಣವಿದೆ..
ಕೊರೊನಾ ಆರಂಭದ ದಿನಗಳಲ್ಲಿ ಖುದ್ದು ಪ್ರಧಾನಿಗಳೇ ರಾಷ್ಟ್ರೀಯ ಲಾಕ್ಡೌನ್ ಘೋಷಿಸಿದ್ದರು
ಕೊರೊನಾ ಆರಂಭದ ದಿನಗಳಲ್ಲಿ ಖುದ್ದು ಪ್ರಧಾನಿಗಳೇ ರಾಷ್ಟ್ರೀಯ ಲಾಕ್ಡೌನ್ ಘೋಷಿಸಿದ್ದರು. ಇದಾದ ನಂತರ ಕೇಂದ್ರ ಗೃಹಸಚಿವರು ಇದನ್ನು ಪ್ರಕಟಿಸಲು ಆರಂಭಿಸಿದರು, ನಂತರ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಗಳ ಸರದಿ, ಕೊನೆಗೆ ಲಾಕ್ಡೌನ್ ಘೋಷಿಸುವ ನಿರ್ಧಾರವನ್ನು ಆಯಾಯ ರಾಜ್ಯಗಳ ವಿವೇಚನೆಗೆ ಕೇಂದ್ರ ಬಿಟ್ಟು ಕೈತೊಳೆದುಕೊಂಡಿತ್ತು. ಹಾಗಾಗಿ, ರಾಷ್ಟ್ರೀಯ ಲಾಕ್ಡೌನ್ ಸಾಧ್ಯತೆ ಕಮ್ಮಿಗೆ ಇದೂ ಒಂದು ಕಾರಣ.
ಪ್ರಧಾನಿಗಳು ಹಲವು ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ನೇರ ಸಂವಾದ ನಡೆಸಿದರು
ಮಂಗಳವಾರ (ಮೇ 18) ಪ್ರಧಾನಿಗಳು ಹಲವು ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ನೇರ ಸಂವಾದ ನಡೆಸಿದರು. ಕೊರೊನಾ ವಿರುದ್ದ ಹೋರಾಡಲು ನೀವೇ ಕಮಾಂಡರುಗಳು, ಜಿಲ್ಲೆ ಗೆದ್ದರೆ ದೇಶ ಗೆದ್ದಂತೆ ಎಂದು ಹೇಳುವ ಮೂಲಕ, ಆಯಾಯ ಜಿಲ್ಲೆಗಳಲ್ಲಿ ಲಾಕ್ಡೌನ್ ಹೇರಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ಜಿಲ್ಲಾಡಳಿತದ ಹೆಗಲಿಗೆ ಪ್ರಧಾನಿ ವರ್ಗಾಯಿಸಿದರು. ಹಾಗಾಗಿ, ರಾಷ್ಟ್ರೀಯ ಲಾಕ್ಡೌನ್ ಹೇರಿಕೆ ಇರಲಾರದು ಎನ್ನುವುದಕ್ಕೆ ಇದೂ ಒಂದು ಕಾರಣವಾಗಬಹುದು.
ಲಾಕ್ಡೌನ್ ಎನ್ನುವುದನ್ನು ಕಟ್ಟಕಡೆಯ ಅಸ್ತ್ರವನ್ನಾಗಿ ಮಾತ್ರ ಬಳಸಿ
ಇನ್ನು, ಆರಂಭದ ರಾಷ್ಟ್ರೀಯ ಲಾಕ್ಡೌನ್ ನಂತರ ಕೇಂದ್ರ ಸರಕಾರ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಪ್ರಕಟಿಸಿತೇ ವಿನಃ ಮತ್ತೆ ಲಾಕ್ಡೌನ್ ವಿಚಾರವನ್ನು ಪ್ರಸ್ತಾವನೆಯನ್ನು ಮಾಡಲಿಲ್ಲ. ಕೊರೊನಾ ಜೊತೆಜೊತೆ ಆರ್ಥಿಕ ಚಟುವಟಿಕೆಯೂ ಸಾಗುತ್ತಿರಬೇಕು ಎನ್ನುವುದನ್ನು ಕೇಂದ್ರ ಸರಕಾರ ಪ್ರತಿಪಾದಿಸಿತು. ಲಾಕ್ಡೌನ್ ಎನ್ನುವುದನ್ನು ಕಟ್ಟಕಡೆಯ ಅಸ್ತ್ರವನ್ನಾಗಿ ಮಾತ್ರ ಬಳಸಿ ಎಂದು ಪ್ರಧಾನಿ ಮೋದಿ ಹೇಳುತ್ತಲೇ ಬರುತ್ತಿದ್ದಾರೆ. ಹಾಗಾಗಿ, ಸದ್ಯದ ಮಟ್ಟಿಗೆ ರಾಷ್ಟ್ರೀಯ ಲಾಕ್ಡೌನ್ ಸಾಧ್ಯತೆ ತೀರಾ ಕಮ್ಮಿ.