ಕಪ್ಪು ಹಣ ವಾಪಸ್ ತರುವಲ್ಲಿ ಮೋದಿ ಪ್ರಾಮಾಣಿಕ ಯತ್ನವಿಲ್ಲ: ಜೇಠ್ಮಲಾನಿ
"ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣವನ್ನು ಮರಳಿ ತರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ" ಎಂದು ಹೆಸರಾಂತ ವಕೀಲ ಹಾಗೂ ರಾಜ್ಯಸಭಾ ಸದಸ್ಯ ರಾಮ್ ಜೇಠ್ಮಲಾನಿ ಆರೋಪಿಸಿದ್ದಾರೆ.
ನಿವೃತ್ತಿ ಘೋಷಿಸಿದ ಹಿರಿಯ ವಕೀಲ ರಾಮ್ ಜೇಠ್ಮಲಾನಿ
ಇತ್ತೀಚೆಗೆ ಮೋದಿಗೆ ಬರೆದ ಪತ್ರದಲ್ಲಿ, ಕಳೆದ ಬಾರಿಯ ಲೋಕಸಭೆ ಚುನಾವಣೆಯನ್ನು ಅಂಥ ಬಹುಮತದಿಂದ ಗೆಲ್ಲಲು ಕಾರಣವಾಗಿದ್ದು 90 ಲಕ್ಷ ಕೋಟಿ ರುಪಾಯಿ ಕಪ್ಪು ಹಣವನ್ನು ವಾಪಸ್ ಭಾರತಕ್ಕೆ ತರುವುದಾಗಿ ಜನರಿಗೆ ನೀಡಿದ ಭರವಸೆಯಿಂದ ಎಂದು ಅವರು ಹೇಳಿದ್ದಾರೆ.
ಕಳೆದ ವಾರವಷ್ಟೇ ಜೇಠ್ಮಲಾನಿ ತಮ್ಮ ವಕೀಲಿಕೆ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಕಪ್ಪು ಹಣದ ವಿರುದ್ಧ ಹೋರಾಡಲು ಪ್ರಧಾನಿ ಯಾವುದೇ ರೀತಿ ನೆರವು ನೀಡುತ್ತಿಲ್ಲ ಎಂದು ಕೂಡ ಹೇಳಿದ್ದಾರೆ.
ಎರಡು ವರ್ಷದ ಹಿಂದೆಯೇ ಅಮಿತ್ ಶಾ ಈ ವಿಚಾರ ಬಯಲು ಮಾಡಿದ್ದಾರೆ. ಕಪ್ಪು ಹಣದ ವಾಪಸಾತಿಯ ಮಾತು ಕೇವಲ ಗಿಮಿಕ್ ಅಥವಾ ಜೋಕ್ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
2012ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದರು ಜೇಠ್ಮಲಾನಿ. ಆಗಿನಿಂದ ಜೇಠ್ಮಲಾನಿ ಅವರನ್ನು ಬಿಜೆಪಿಯಿಂದ ಹೊರ ಹಾಕಲು ಯತ್ನ ನಡೆದಿತ್ತಂತೆ. ಆದರೆ ಅಡ್ವಾಣಿ ಹಾಗೂ ಗಡ್ಕರಿ ಮಧ್ಯಪ್ರವೇಶದಿಂದ ಪ್ರಸ್ತಾವಿತ ಉಚ್ಚಾಟನೆ ಹಿಂಪಡೆಯಲಾಗಿತ್ತು. ಅದು ಮಾಧ್ಯಮಗಳಲ್ಲೂ ಬಂದಿತ್ತು. ಅದಕ್ಕೆ ಯಾರೂ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ ಎಂದಿದ್ದಾರೆ ಜೇಠ್ಮಲಾನಿ.
ಆದರೆ, ರಜಾ ದಿನ ಕಳೆಯಲು ಜೇಠ್ಮಲಾನಿ ವಿದೇಶಕ್ಕೆ ತೆರಳಿದ ವೇಳೆ ಬಿಜೆಪಿಯಿಂದ ಅವರನ್ನು ಉಚ್ಚಾಟಿಸಲಾಯಿತು. ಇದು ಕಾನೂನುಬಾಹಿರ. ಇದಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳುವ ಉದ್ದೇಶದಿಂದ ಬಿಜೆಪಿ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.