ಸೋನಿಯಾ, ಸಿಂಗ್ರನ್ನು ಚಹಾಕ್ಕೆ ಆಹ್ವಾನಿಸಿದ ಮೋದಿ
ನವದೆಹಲಿ, ನವೆಂಬರ್, 27: ಸರಕು ಮತ್ತು ಸೇವಾ ತೆರಿಗೆ ಮಸೂದೆ(ಜಿಎಸ್ ಟಿ) ಕುರಿತಂತೆ ಚರ್ಚೆ ಮಾಡಲು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಿದ್ದಾರೆ. ಚಹಾ ಕುಡಿಯುತ್ತ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದ ಮೇಲೆ ಇದು ಸೋನಿಯಾ ಮತ್ತು ಮೋದಿ ನಡುವಣ ಪ್ರಪ್ರಥಮ ಖಾಸಗಿ ಭೇಟಿಯಾಗಲಿದೆ. ಆದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಈ ಚರ್ಚೆಗೆ ಆಹ್ವಾನ ನೀಡಲಾಗಿಲ್ಲ.[2014ರ ಲೋಕಸಭಾ ಚುನಾವಣಾ ಫಲಿತಾಂಶದ ಅಂಕಿ ಅಂಶ]
ಈ ಬಗ್ಗೆ ಮಾಹಿತಿ ನೀಡಿರುವ ಸಂಸದೀಯ ವ್ಯವಹಾರ ಸಚಿವ ವೆಂಕಯ್ಯ ನಾಯ್ಡು, ಬಿಲ್ ಕುರಿತಂತೆ ಸಮಗ್ರ ಚರ್ಚೆ ಮತ್ತು ಒಂದು ತೀರ್ಮಾನಕ್ಕೆ ಬರಲು ಈ ಭೇಟಿ ಮಹತ್ವದ್ದಾಗಲಿದೆ ಎಂದು ಹೇಳಿದ್ದಾರೆ.
ಮೊದಲಿನಿಂದಲೂ ಕಾಂಗ್ರೆಸ್ ಬಿಲ್ ಬಗ್ಗೆ ವಿರೊಧ ವ್ಯಕ್ತಪಡಿಸುತ್ತಲೇ ಬಂದಿದೆ. ಬೆಂಗಳೂರಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಬಿಲ್ ಕುರಿತಾಗಿ ಕಾಂಗ್ರೆಸ್ ಪಕ್ಷದ ದೃಷ್ಟಿಕೋನವೇ ಬೇರೆಯಿದೆ ಎಂದು ಹೇಳಿದ್ದರು. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಪ್ರಜಾಪ್ರಭುತ್ವ ಮಾದರಿಯಲ್ಲಿ ಮಸೂದೆ ಮಂಡನೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ಜನರ ಮತ್ತು ವಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ಈಗ ಚರ್ಚೆಗೆ ಆಹ್ವಾನ ನೀಡುತ್ತಿದೆ. ಕಾಯಿದೆ ಬಗ್ಗೆ ಜನರಲ್ಲಿ ಎದ್ದಿರುವ ಗೊಂದಲಗಳೇ ಇಂಥ ಆಹ್ವಾನಕ್ಕೆ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.