ದಿನವನ್ನು ಕಠಿಣ ವಿಷಯಗಳಿಂದಲೇ ಆರಂಭಿಸಿ, ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಇಂದು ನಡೆಯುತ್ತಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಮೊದಲು ನಾನು ಮುಖ್ಯಮಂತ್ರಿಯಾಗಿದ್ದೆ, ಬಳಿಕ ಪ್ರಧಾನಿಯಾಗಿದ್ದೇನೆ ನನಗೆ ಸಾಕಷ್ಟು ಕರ್ತವ್ಯಗಳಿವೆ. ಹಾಗೆಯೇ ಸಾಕಷ್ಟು ವಿಷಯಗಳನ್ನು ಓದಬೇಕು, ಹಲವು ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು.
ಆಗ ನಾನು ಏನು ಮಾಡುತ್ತಿದ್ದೆ ಎಂದರೆ, ಮೊದಲು ಕಷ್ಟದ ಕೆಲಸ ಯಾವುದಿತ್ತು ಅಥವಾ ನನಗೆ ಅರ್ಥವಾಗದ ವಿಷಯ ಯಾವುದಿತ್ತು ಅದನ್ನು ಮೊದಲು ಅರ್ಥ ಮಾಡಿಕೊಳ್ಳಲು ಆರಂಭಿಸುತ್ತಿದ್ದೆ. ಹಾಗೆಯೇ ನೀವು ನಿಮ್ಮ ದಿನವನ್ನು ಕಠಿಣ ವಿಷಯಗಳಿಂದ ಆರಂಭಿಸಿ, ಗೆಲುವು ನಿಮ್ಮದಾಗಲಿದೆ ಎಂದು ಹೇಳಿದರು.
ಏ.7 ರಂದು ಪರೀಕ್ಷಾ ಪೇ ಚರ್ಚಾ: ಪ್ರಧಾನಿ ಮೋದಿ ಜತೆ ಸಂವಾದದಲ್ಲಿ ಪಾಲಕರಿಗೂ ಅವಕಾಶ
ಯಾರು ಜೀವನದಲ್ಲಿ ಸಫಲತೆಯನ್ನು ಕಂಡಿರುತ್ತಾರೋ ಅವರು ಎಲ್ಲಾ ವಿಷಯಗಳಲ್ಲಿ ಪಾರಂಗತರಾಗಿರುತ್ತಾರೆ ಎಂಬುದು ಸುಳ್ಳು, ಆದರೆ ಯಾವುದೋ ಒಂದು ವಿಷಯದಲ್ಲಿ ಅವರು ಎಲ್ಲರಿಗಿಂತಾ ಹೆಚ್ಚು ಹಿಡಿತ ಸಾಧಿಸಿರುತ್ತಾರೆ ಎಂದರು.
ನಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಒಂದು ದಾರಿಯನ್ನು ಕಂಡುಕೊಳ್ಳಬೇಕು. ನೀವು ಸಮಯವನ್ನು ಸದ್ಬಳಕೆ ಮಾಡಿಕೊಂಡರೆ ಜೀವನದ ಮೌಲ್ಯ ಅರ್ಥವಾಗುತ್ತದೆ.
ಖಾಲಿ ಸಮಯವು ಖಜಾನೆಯಿದ್ದಂತೆ, ಅದನ್ನು ಸೌಭಾಗ್ಯವೆಂದು ಭಾವಿಸಿ, ಹಾಗೆಯೇ ಆ ಸಮಯವನ್ನು ಯಾವ ವಿಷಯಗಳಿಗಾಗಿ ವಿನಿಯೋಗಿಸಬೇಕು ಎಂಬುದನ್ನು ಕೂಡ ಆಲೋಚಿಸಬೇಕು ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಹಾಗೂ ಪಾಲಕರು ಕೂಡ ಪಾಲ್ಗೊಂಡಿದ್ದರು.