ಬಿಜೆಪಿಗೆ ಉತ್ತರ ಪ್ರದೇಶದ ಜನತೆ ಬಹುಮತ ಸಿಕ್ಕಿದೆ: ಮೋದಿ
ಕಾಶಿ ವಿಶ್ವನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ 10 ಕಿ.ಮೀ. ದೂರದ ರೋಡ್ ಶೋನಲ್ಲಿ ಪಾಲ್ಗೊಂಡ ನಂತರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ.
ವಾರಣಾಸಿ, ಮಾರ್ಚ್ 4: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಪ್ರಮುಖ ಧಾರ್ಮಿಕ ಸ್ಥಳವಾದ ವಾರಣಾಸಿಯಲ್ಲಿ ಆಯೋಜಿಸಲಾದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶಧ ಜನತೆ ಈಗಾಗಲೇ ಬಿಜೆಪಿಗೆ ತಮ್ಮ ಬಹುಮತ ಕೊಟ್ಟಿದ್ದಾರೆಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ, ಮಹಿಳೆಯರ ಸುರಕ್ಷತೆಯೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿರಲಿದೆ ಎಂದು ಆಶ್ವಾಸನೆ ನೀಡಿದರು. ಅಲ್ಲದೆ, ಸಣ್ಣ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆಯಿತ್ತರು.
ಇದೇ ವೇಳೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ಧ ಹರಿಹಾಯ್ದ ಅವರು, ಅಖಿಲೇಶ್ ಅವರು ಭ್ರಷ್ಚಾಚಾರಿಗಳನ್ನು, ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆಂದು ಆಪಾದಿಸಿದರು. ಅತ್ಯಾಚಾರದ ಆರೋಪಿಯಾದ ಸಮಾಜವಾದಿ ಪಕ್ಷದ ಶಾಸಕ ಪ್ರಜಾಪತಿಯವರ ರಕ್ಷಣೆಗೆ ನಿಂತಿದ್ದಾರೆಂದು ಆರೋಪಿಸಿದರು.
ಉತ್ತಮ ಸರ್ಕಾರ ನೀಡುವ ಇರಾದೆ ಸಮಾಜವಾದಿ ಪಕ್ಷಕ್ಕೆ ಇಲ್ಲವೇ ಇಲ್ಲ ಎಂದೂ ಅವರು ಇದೇ ವೇಳೆ ತಿಳಿಸಿದರು.
ಆ ನಿಮಿತ್ತ ಆಯೋಜಿಸಲಾಗಿದ್ದ ರೋಡ್ ಶೋನಲ್ಲಿ ಭಾಗವಹಿಸಿದ ಅವರನ್ನು ನೋಡಲು ಲಕ್ಷಾಂತರ ಜನರು ರೋಡ್ ಶೋ ಸಾಗುವ ಹಾದಿಯ ಇಕ್ಕೆಲಗಳಲ್ಲಿಯೂ ಮುಗಿಬಿದ್ದಿದ್ದರು. ಪ್ರಧಾನಿ ಮೋದಿಯ ಮೇಲೆ ಹೂಮಳೆ ಸುರಿಸಿದರು. ಜನರ ಈ ಪ್ರೀತಿ ವಿಶ್ವಾಸಕ್ಕೆ ಸಂತುಷ್ಟಗೊಂಡ ಮೋದಿ ಕೂಡ ಜನರತ್ತ ಕೈಬೀಸಿ ತಮ್ಮ ಹರ್ಷ ವ್ಯಕ್ತಪಡಿಸಿದರು.
ಶುಕ್ರವಾರ ಬೆಳಗ್ಗೆಯೇ ಆಗಮಿಸಿದ್ದ ಮೋದಿಯವರು, ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ ಸುಮಾರು ಒಂದು ಗಂಟೆಯ ವಿಶ್ರಾಂತಿ ಪಡೆದರು. ಆನಂತರ, ಪುರಾಣ ಪ್ರಸಿದ್ಧ ಕಾಶಿ ವಿಶ್ವನಾಥೇಶ್ವರ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಆನಂತರವೇ ರೋಡ್ ಶೋನಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ಜವೂನ್ ಪುರದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಅವರು ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.