ಕೋರ್ಟ್ಗಳಲ್ಲಿ ಸ್ಥಳೀಯ ಭಾಷೆ ಬಳಕೆಗೆ ಪ್ರಧಾನಿ ಮೋದಿ ಕರೆ
ನವದೆಹಲಿ, ಏ. 30: ಶಾಸಕಾಂಗ ಮತ್ತು ನ್ಯಾಯಾಂಗದ ಧ್ಯೇಯೋದ್ದೇಶಗಳ ಸಮಾಗಮವಾದರೆ ದೇಶದಲ್ಲಿ ನ್ಯಾಯ ನೀಡಿಕೆ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಲು ನೆರವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ಶನಿವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಜಂಟಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೋರ್ಟ್ಗಳಲ್ಲಿ ಸ್ಥಳೀಯ ಭಾಷೆ ಬಳಕೆ ಮಾಡುವಂತೆ ನ್ಯಾಯಾಂಗಕ್ಕೆ ಮನವಿ ಮಾಡಿದರು.
"ಕೋರ್ಟ್ಗಳಲ್ಲಿ ಸ್ಥಳೀಯ ಭಾಷೆ ಬಳಕೆಗೆ ಉತ್ತೇಜನ ನೀಡುವುದು ಅಗತ್ಯ ಇದೆ. ಇದರಿಂದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಾಮಾನ್ಯ ನಾಗರಿಕರಿಗೆ ವಿಶ್ವಾಸ ಹೆಚ್ಚುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.
ನರೇಂದ್ರ ಮೋದಿಗೆ ನೊಬೆಲ್ ಪುರಸ್ಕಾರ ಸಿಗಬೇಕು: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮುಖ್ಯಸ್ಥರ ಒತ್ತಾಯ
ಹಾಗೆಯೇ, ನ್ಯಾಯಾಂಗ ಮತ್ತು ಶಾಸಕಾಂಗದ ಪಾತ್ರದ ಬಗ್ಗೆ ಮಾತನಾಡಿದ ಅವರು, ನ್ಯಾಯಾಂಗವು ಸಂವಿಧಾನದ ರಕ್ಷಕವಾದರೆ, ಶಾಸಕಾಂಗವು ಜನರ ಆಶೋತ್ತರಗಳನ್ನ ಪ್ರತಿನಿಧಿಸುವ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.
"ನಮ್ಮ ದೇಶದಲ್ಲಿ ನ್ಯಾಯಾಂಗದ ಪಾತ್ರವು ಸಂವಿಧಾನದ ರಕ್ಷಕ ಸ್ಥಾನದ್ದಾಗಿದೆ. ಶಾಸಕಾಂಗವು ಜನರ ಆಶೋತ್ತರಗಳನ್ನ ಪ್ರತಿನಿಧಿಸುತ್ತದೆ. ಈ ಎರಡು ಅಂಗಗಳು ಸಮಾಗಮಗೊಂಡರೆ ನಿಗದಿತ ಸಮಯದೊಳಗೆ ಪರಿಣಾಮಕಾರಿಯಾದ ನ್ಯಾಯ ನೀಡಿಕೆ ವ್ಯವಸ್ಥೆಗೆ ಎಡೆ ಮಾಡಿಕೊಡಲು ಸಹಾಯವಾಗುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.
ಇದೇ ವೇಳೆ ನ್ಯಾಯಾಂಗ ಮತ್ತು ಕಾರ್ಯಾಂಗ ನಡುವಿನ ಸಂಬಂಧದ ಬಗ್ಗೆಯೂ ಮಾತನಾಡಿದ ಪ್ರಧಾನಿ, 75 ವರ್ಷಗಳ ಸ್ವಾತಂತ್ರ್ಯದ ಅನುಭವವು ನ್ಯಾಯಾಂಗ ಮತ್ತು ಕಾರ್ಯಾಂಗದ ಪಾತ್ರ ಮತ್ತು ಜವಾಬ್ದಾರಿಗಳನ್ನ ಸ್ಪಷ್ಟಗೊಳಿಸಿದೆ. ಈ ಎರಡು ಅಂಗಳ ನಡುವಿನ ಸಂಬಂಧವು ದೇಶಕ್ಕೆ ದಿಗ್ದರ್ಶನನ ಕೊಡುವ ಮಟ್ಟಕ್ಕೆ ಬೆಳೆದಿವೆ ಎಂದರು.
ಹಾಗೆಯೇ, ನಾಗರಿಕರ ಅನುಕೂಲದ ದೃಷ್ಟಿಯಿಂದ ನ್ಯಾಯಾಂಗ ವ್ಯವಸ್ಥೆಯಲ್ಲೂ ಡಿಜಿಟಲೀಕರಣದ ಅಗತ್ಯತೆ ಇದೆ ಎಂದರು. "ತಂತ್ರಜ್ಞಾನವು ನಾಗರಿಕರನ್ನ ಬಲಪಡಿಸುವ ಒಂದು ಪ್ರಮುಖ ಸಾಧನವಾಗಿದೆ. ಅದೇ ರೀತಿ ನಮ್ಮ ನ್ಯಾಯಾಂಗ ಸೌಕರ್ಯ ವ್ಯವಸ್ಥೆ ಕೂಡ ಡಿಜಿಟಲ್ ಆಗಬೇಕು. ತಂತ್ರಜ್ಞಾನ ಸ್ನೇಹಿ ಮಾನವ ಸಂಪನ್ಮೂಲವು ಡಿಜಿಟಲ್ ಇಂಡಿಯಾ ಮೂಲಕ ದೇಶದ ಪ್ರಗತಿಗೆ ನೆರವಾಗುತ್ತಿದೆ. ಬ್ಲಾಕ್ಚೈನ್, ಸೈಬರ್ ಸೆಕ್ಯೂರಿಟಿ, ರೋಬೋಟಿಕ್ಸ್, ಕೃತಕ ಬುದ್ಧಮತ್ತೆ (AI - Artificial Intelligence) ಇತ್ಯಾದಿ ತಾಂತ್ರಿಕ ವಿಚಾರಗಳನ್ನ ಕಾಲೇಜುಗಳಲ್ಲಿ ಕಲಿಸಲಾಗುತ್ತಿದೆ" ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಸಭೆಯಲ್ಲಿ ಕೇಜ್ರಿವಾಲ್ ಅಸಭ್ಯ ವರ್ತನೆ ತೋರಿದ್ದಕ್ಕೆ ಬಿಜೆಪಿ ಖಂಡನೆ
ಭಾರತದಲ್ಲಿ ಶೇ. 40 ಡಿಜಿಟಲ್ ವಹಿವಾಟು:
ಡಿಜಿಟಲೀಕರಣದ ಮಹತ್ವದ ಬಗ್ಗೆ ಮಾತನಾಡಿದ ಅವರು, ದೇಶದ ಸಣ್ಣಪುಟ್ಟ ಪಟ್ಟಣಗಳು ಮತ್ತು ಗ್ರಾಮಗಳಲ್ಲೂ ಈಗ ಆನ್ಲೈನ್ ಮೂಲಕ ಹಣದ ಪಾವತಿ ಕಾರ್ಯವಾಗುತ್ತಿದೆ ಎಂದರು.
"ಇಂದು ಡಿಜಿಟಲ್ ವಹಿವಾಟುಗಳು ಸಣ್ಣ ಪಟ್ಟಣ ಮತ್ತು ಗ್ರಾಮಗಳಲ್ಲೂ ಸಾಮಾನ್ಯವಾಗಿ ಹೋಗಿದೆ. ಕಳೆದ ವರ್ಷ ಇಡೀ ವಿಶ್ವದಲ್ಲಿ ನಡೆದ ಡಿಜಿಟಲ್ ವಹಿವಾಟುಗಳ ಪೈಕಿ ಶೇ. 40ರಷ್ಟು ಭಾಗ ಭಾರತದಲ್ಲೇ ನಡೆದಿವೆ" ಎಂದು ಮೋದಿ ಒತ್ತಿಹೇಳಿದರು.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಭಾರತೀಯ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಅರುಣಾಚಲಪ್ರದೇಶ ಮುಖ್ಯಮಂತ್ರಿ ಪ್ರೇಮ ಖಂಡು, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಾಂಗ್ಮ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಈ ಜಂಟಿ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ಜಂಟಿ ಸಮಾವೇಶವು ದೇಶದ ನ್ಯಾಯಾಂಗ ಮತ್ತು ಕಾರ್ಯಾಂಗ ಒಟ್ಟುಗೂಡಿ ನ್ಯಾಯಾಂಗ ವ್ಯವಸ್ಥೆಯ ಸವಾಲುಗಳನ್ನ ಎದುರಿಸುವ ಮಾರ್ಗೋಪಾಯಗಳನ್ನ ಕಂಡುಕೊಳ್ಳಲು ಸಹಾಯಕವಾಗುತ್ತದೆ ಎಂಬುದು ಪ್ರಧಾನಿ ಕಾರ್ಯಾಲಯದ ಅನಿಸಿಕೆ.
(ಒನ್ಇಂಡಿಯಾ ಸುದ್ದಿ)