ಕೋವಿಡ್ ನಿರ್ವಹಣೆಯಲ್ಲಿ ಮೋದಿ ವೈಫಲ್ಯ: ಮಹತ್ವದ ಬದಲಾವಣೆಗೆ RSS ಸೂಚನೆ?
ಮಾರ್ಚ್ ತಿಂಗಳ ವೇಳೆ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆಯ ಸುಳಿವು ಸಿಕ್ಕಿತ್ತು. ಜೊತೆಗೆ, ಕೊರೊನಾ ತಾಂತ್ರಿಕ ಸಮಿತಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು. ಆದಾಗ್ಯೂ, ನಾವು ಬಹುತೇಕ ಕೊರೊನಾದ ವಿರುದ್ದದ ಹೋರಾಟದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ನಡೆದಿದ್ದೇ ಬೇರೆ..
ಮೊದಲನೇ ಅಲೆ ಇಡೀ ದೇಶಕ್ಕೆ ಪಾಠ ಕಲಿಸಿದ್ದರೂ ಕೇಂದ್ರ ಸರಕಾರ ಇದರಿಂದ ಯಾವುದೇ ಪಾಠವನ್ನು ಕಲಿಯಲಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ. ಪರಿಸ್ಥಿತಿ ಕೈಮೀರಿ ಹೋದ ನಂತರ, ಕೈಚೆಲ್ಲಿ ಕೂತಿರುವ ಕೇಂದ್ರ ಸರಕಾರದ ಕಾರ್ಯವೈಖರಿಯ ಬಗ್ಗೆ ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರೀ ಅಸಮಾಧಾನವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿಗೆ ಮೇ 17ರ ನಂತರ ಕಾದಿದೆ ಗಂಡಾಂತರ: ತಜ್ಞರ ಎಚ್ಚರಿಕೆ
ಸಂಘಟನೆ ಮತ್ತು ಖುದ್ದು ಪಕ್ಷದ ಕೆಲವು ಮುಖಂಡರೂ ಕೋವಿಡ್ ನಿರ್ವಹಣೆಯ ವಿಚಾರದಲ್ಲಿ ಮೋದಿ ಸರಕಾರದ ವಿರುದ್ದ ಅತೃಪ್ತಿಯನ್ನು ಹೊಂದಿದ್ದಾರೆ. ಕೊರೊನಾ ಕಳಪೆ ನಿರ್ವಹಣೆಯಿಂದ ಪಕ್ಷಕ್ಕೆ ಮತ್ತು ಪಕ್ಷದ ಮುಖಂಡರ ಇಮೇಜಿಗೆ ದೊಡ್ಡಮಟ್ಟದ ಹಾನಿಯಾಗುತ್ತಿರುವುದು ಹೌದು ಎನ್ನುವುದನ್ನು ಸ್ವಪಕ್ಷೀಯರೇ ಒಪ್ಪಿಕೊಳ್ಳುತ್ತಿದ್ದಾರೆ.
ರಾಜಗುರು ನುಡಿದ ಕೊರೊನಾ ಭವಿಷ್ಯ: ಕೊಟ್ಟ ಎಚ್ಚರಿಕೆ ಫಲಿಸಲಿಲ್ಲ, ಮೋದಿ ಇತ್ತ ಬರಲಿಲ್ಲ
ಇಂತಹ ಸಮಯದಲ್ಲಿ ಮೋದಿ ಸರಕಾರದಲ್ಲಿ ಮಹತ್ವದ ಬದಲಾವಣೆ ಮಾಡುವ ಇಂಗಿತವನ್ನು ಸಂಘಟನೆ ಹೊಂದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎನ್ನುವುದು ಸದ್ಯಕ್ಕೆ ಅಸ್ಪಷ್ಟವಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ ವಿರುದ್ದ ಜನರು ಸಿಟ್ಟಾಗಿದ್ದಾರೆ
ಪ್ರಮುಖವಾಗಿ, ಬಡವರು ಮತ್ತು ಮಧ್ಯಮ ವರ್ಗದವರು ಕೋವಿಡ್ನಿಂದ ತುಂಬಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೊರೊನಾ ನಿರ್ವಹಣೆ ಸರಿಯಾದ ದಾರಿಯಲ್ಲಿ ಸಾಗದೇ ಇದ್ದಿದ್ದರಿಂದಲೇ ಈಗ, ವೈರಸ್ ಹಳ್ಳಿ ಹಳ್ಳಿಗಳಿಗೂ ದಾಂಗುಡಿ ಇಡುತ್ತಿದೆ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಇದು ವ್ಯಾಪಕವಾಗಿ ಹರಡುತ್ತಿದೆ. ಸಹಜವಾಗಿ, ಸಿಎಂ ಯೋಗಿ ಆದಿತ್ಯನಾಥ್ ವಿರುದ್ದ ಜನರು ಸಿಟ್ಟಾಗಿದ್ದಾರೆ. ಅದಕ್ಕೆ ಉದಾಹರಣೆ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ. (ಚಿತ್ರ:ಪಿಟಿಐ)
ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆ ಮುಂದಿನ ವರ್ಷ ನಡೆಯಬೇಕಿದೆ
ಸರಕಾರದ ವೈಫಲ್ಯದಿಂದಾಗಿ ಕುಟುಂಬದಲ್ಲಿ ಏನಾದರೂ ಕೊರೊನಾ ಸಾವು ನೋವು ಸಂಭವಿಸಿದರೆ ಕುಟುಂಬದವರ ಸಿಟ್ಟು ನೇರವಾಗಿ ತಟ್ಟುವುದು ಸರಕಾರಕ್ಕೆ ಎನ್ನುವುದನ್ನು ಅರಿತಿರುವ ಆರ್ ಎಸ್ ಎಸ್, ಪ್ರಮುಖ ಬದಲಾವಣೆಯ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷ ಇದೆಯಾದರೂ, ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆ ಮುಂದಿನ ವರ್ಷ ನಡೆಯಬೇಕಿದೆ.
ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಆಗಲೇ ಬೇಕಿದೆ
ಸಂಘಟನೆಯ ಜೊತೆಗೆ ಪಕ್ಷದ ಹಲವು ಮುಖಂಡರು ಕೂಡಾ ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಆಗಲೇ ಬೇಕಿದೆ. ಹಾಗಿದ್ದಾಗ ಮಾತ್ರ, ಸ್ವಲ್ಪವಾದರೂ ಡ್ಯಾಮೇಜ್ ಕಂಟ್ರೋಲ್ ಮಾಡಬಹುದು ಎನ್ನುವ ನಿಲುವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಸರಕಾರದ ಸಾಧನೆ ಏನೇನೂ ಇಲ್ಲ ಎನ್ನುವುದನ್ನು ಪಕ್ಷದ ಮುಖಂಡರು ಒಪ್ಪಿಕೊಳ್ಳುತ್ತಾರೆ.
ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸಭೆ
ಕೊರೊನಾ ಹಾವಳಿ ಇದ್ದಾಗಲೂ, ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ಲಕ್ಷಲಕ್ಷ ಜನರನ್ನು ಸೇರಿಸಿಕೊಂಡು ಸಾರ್ವಜನಿಕ ಸಭೆ ನಡೆಸಿದ್ದು ಪಕ್ಷದ ಇಮೇಜಿಗೆ ಧಕ್ಕೆ ತಂದಿದೆ ಎನ್ನುವುದನ್ನು ಪಕ್ಷದ ಮತ್ತು ಸಂಘಟನೆಯ ಪ್ರಮುಖರು ಅಭಿಪ್ರಾಯ ಪಡುತ್ತಿದ್ದಾರೆ. ಮಾಸ್ಕ್ ಧರಿಸಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪಕ್ಷದ ಮುಖಂಡರ ಸಭೆ, ರೋಡ್ ಶೋ ಮುಂದಿಟ್ಟುಕೊಂಡು ಅಂತರಾಷ್ಟ್ರೀಯ ಮಾಧ್ಯಮಗಳೂ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. (ಚಿತ್ರ:ಪಿಟಿಐ)
ಲಸಿಕೆ ಅಭಿಯಾನವನ್ನು ಗುರಿ ತಲುಪಿಸುವಲ್ಲೂ ಮೋದಿ ಸರಕಾರ ವೈಫಲ್ಯ
ಲಸಿಕೆ ಅಭಿಯಾನವನ್ನು ಗುರಿ ತಲುಪಿಸುವಲ್ಲೂ ಮೋದಿ ಸರಕಾರ ವೈಫಲ್ಯವನ್ನು ಕಂಡಿದೆ, ಆಕ್ಸಿಜನ್ ಸರಬರಾಜಿನಲ್ಲೂ ಎಡವಿದೆ. ಮೋದಿ ಕ್ಯಾಬಿನೆಟ್ನಲ್ಲಿ ಹೊಂದಾಣಿಕೆಯ ಕೊರತೆಯಿದೆ. ಕೊರೊನಾ ಎರಡನೇ ಅಲೆಗೆ ಕೇಂದ್ರ ಸರಕಾರ ಸಿದ್ದತೆಯನ್ನು ನಡೆಸಿರಲಿಲ್ಲ ಎನ್ನುವ ಕೇಂದ್ರ ಸಚಿವರ (ಹೆಸರು ಉಲ್ಲೇಖಿಸದ) ಹೇಳಿಕೆಯನ್ನು ಕೆಲವು ಮಾಧ್ಯಮಗಳು ಉಲ್ಲೇಖಿಸಿವೆ. (ಚಿತ್ರ:ಪಿಟಿಐ)
ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆ ಇಲ್ಲದಿಲ್ಲ
ಈ ಎಲ್ಲಾ ಅಂಶಗಳಿಂದಾಗಿ ಬಿಜೆಪಿಯ ಮೇಲೆ ಸಾರ್ವಜನಿಕರು ಭ್ರಮನಿರಸನರಾಗಿದ್ದಾರೆ. ಹಾಗಾಗಿ, ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಕೇಂದ್ರ ಸಚಿವ ಸಂಪುಟದಲ್ಲೂ ಬದಲಾವಣೆ ಮಾಡಿ, ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎನ್ನುವ ಒತ್ತಡ ಪಕ್ಷದೊಳಗೆ ಇರುವುದರಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆ ಇಲ್ಲದಿಲ್ಲ.