ಅಕ್ಬರ್ ಮೇಲಿನ ಆರೋಪದ ಬಗ್ಗೆ ಮೋದಿ ಮೌನ ಮುರಿಯಲಿ: ಕಾಂಗ್ರೆಸ್
ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಶೋಷಣೆ ಆರೋಪದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನ ಗಮನ ಸೆಳೆಯುವಂಥಿದ್ದು, ಅದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಭಾನುವಾರ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕಳೆದ ಹದಿನೈದು ದಿನಗಳಿಂದ ಮೀ ಟೂ ಅಭಿಯಾನ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಅವರ ಹಳೆಯ ಸಹೋದ್ಯೋಗಿಗಳು ಹಲವು ಲೈಂಗಿಕ ಶೋಷಣೆ ಆರೋಪಗಳನ್ನು ಮಾಡಿದ್ದಾರೆ. ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಲೈಂಗಿಕ ಶೋಷಣೆ ಮಾಡಿದ ಬಗ್ಗೆ ಆರೋಪಿಸಿದ್ದಾರೆ.
ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಶೋಷಣೆ ಆರೋಪ, ಅಂತರ ಕಾಯ್ದುಕೊಂಡ ಸರಕಾರ
ಕಾಂಗ್ರೆಸ್ ನ ಆನಂದ್ ಶರ್ಮಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಈ ವಿವಾದದ ಬಗ್ಗೆ ಮೌನವಾಗಿ ಇರುವುದೇಕೆ ಮತ್ತು ಸರಕಾರದ ಮುಖ್ಯಸ್ಥರಾದವರು ಇಂಥ ವಿವಾದಗಳು ಬಂದಾಗ ಮಾತನಾಡಬೇಕು ಎಂದಿದ್ದಾರೆ.
"ಈ ವಿವಾದದ ಬಗ್ಗೆ ಮಾತನಾಡಬೇಕಾ ಅನ್ನೋದನ್ನು ಪ್ರಧಾನಿಗಳು ನಿರ್ಧರಿಸಬೇಕು. ಈಗ ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಆಧಾರದಲ್ಲಿ ದೇಶದ ಜನರು ಅವರ ಬಗ್ಗೆ ತೀರ್ಮಾನಕ್ಕೆ ಬರುತ್ತಾರೆ. ಈ ವರೆಗೆ ಅವರ ಮೌನ ಎದ್ದು ಕಾಣುವಂತಿದೆ. ಇದು ಸರಕಾರದ ನೈತಿಕತೆಯ ಪ್ರಶ್ನೆ ಮಾತ್ರವಲ್ಲ, ಪ್ರಧಾನಿಗಳ ವೈಯಕ್ತಿಕ ನೈತಿಕತೆ ಪ್ರಶ್ನೆಯೂ ಹೌದು. ಮತ್ತು ಪ್ರಧಾನಿ ಹುದ್ದೆಯ ಘನತೆಗೂ ಸಂಬಂಧಿಸಿದ ವಿಚಾರ ಇದು" ಎಂದು ಆನಂದ್ ಶರ್ಮಾ ಹೇಳಿದ್ದಾರೆ.
ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ
ಬೇಟಿ ಬಚಾವೋ, ಬೇಟಿ ಪಡಾವೋ ಅಂತೆಲ್ಲ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರ ಘನತೆ ಬಗ್ಗೆ ಮಾತನಾಡ ಬೇಕಾದ ಸಂದರ್ಭದಲ್ಲಿ ಮೌನವಾಗಿದ್ದಾರೆ. ಅವರ ಮೌನವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈ ವಿವಾದದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸರಕಾರದ ಮುಖ್ಯಸ್ಥರಾಗಿ ಹೇಳಲೇಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.