ಕೇದಾರನಾಥ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಉತ್ತರಾಖಂಡ್, ಅಕ್ಟೋಬರ್ 20: ಕೇದಾರನಾಥ ದೇವಸ್ಥಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಈ ವೇಳೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.
ಬಳಿಕ ಕೇದರನಾಥದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮೋದಿ, "ದೀಪಾವಳಿಯ ಮರುದಿನ ನಾನು ಕೇದಾರನಾಥದಲ್ಲಿರುವುದಕ್ಕೆ ಸಂತಸ ಪಡುತ್ತೇನೆ. ಇವತ್ತು ಗುಜರಾತಿಗಳಿಗೆ ಹೊಸ ವರ್ಷಾರಂಭ. ಈ ಸಂದರ್ಭದಲ್ಲಿ ನಾನು ಜಗತ್ತಿನಾದ್ಯಂತ ಹೊಸ ವರ್ಷಾರಂಭವನ್ನು ಆಚರಣೆ ಮಾಡುವವರಿಗೆ ಶುಭಾಷಯಗಳನ್ನು ಕೋರುತ್ತೇನೆ," ಎಂದು ಹೇಳಿದರು.
ಜನ ಸೇವೆಯೇ ಜನಾರ್ಧನ ಸೇವೆ ಎಂದು ಹೇಳಿದ ಪ್ರಧಾನಿ ಮೋದಿ, "2022ಕ್ಕೆ ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬಲಿದೆ. ಈ ಹಿನ್ನಲೆಯಲ್ಲಿ ಇವತ್ತು ಕೇದಾರನಾಥದ ನೆಲದಲ್ಲಿ ನಿಂತು ನಾನು ಅಭಿವೃದ್ಧಿ ಹೊಂದಿದ ಭಾರತದ ಕನಸ್ಸನ್ನು ನನಸಾಗಿಸಲು ನಾನು ಭೋಲೇ ಬಾಬಾ ಆಶೀರ್ವಾದವನ್ನು ಬೇಡುತ್ತೇನೆ," ಎಂದು ಹೇಳಿದರು
"2013ರಲ್ಲಿ ಸಂಭವಿಸಿದ ಪ್ರವಾಹ ನಮ್ಮನ್ನೆಲ್ಲಾ ಬೇಸರಗೊಳ್ಳುವಂತೆ ಮಾಡಿತ್ತು. ಆ ಸಂದರ್ಭದಲ್ಲಿ ನಾನು ಪ್ರಧಾನಿಯಾಗಿರಲಿಲ್ಲ; ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಆಗ ನಾನು ಸಂತ್ರಸ್ತರಿಗೆ ನನ್ನಿಂದ ಸಾಧ್ಯವಿರುವ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೆ," ಎಂದು ಪ್ರಧಾನಿ ನೆನಪಿಸಿಕೊಂಡರು.
ಮಾದರಿ ತೀರ್ಥ ಕ್ಷೇತ್ರವೆಂದರೆ ಹೇಗಿರಬೇಕು ಎಂಬುದನ್ನು ಕೇದಾರನಾಥ ಅಭಿವೃದ್ಧಿಯ ಮೂಲಕ ನಾವು ತೋರಿಸಲು ಹೊರಟಿದ್ದೇವೆ. ಭಕ್ತರಿಗೆ ಸ್ನೇಹಿಯಾಗಿರುವ, ಅರ್ಚಕರಿಗೆ ಅನುಕೂಲವಾಗಿರುವಂತೆ ಕೇದರನಾಥ ದೇವಸ್ಥಾನ ಅಭಿವೃದ್ಧಿಪಡಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು.
"ನಾವು ಕೇದಾರನಾಥದಲ್ಲಿ ಗುಣಮಟ್ಟದಲ್ಲಿ ಮೂಲಸೌಕರ್ಯ ನಿರ್ಮಿಸಲಿದ್ದೇವೆ. ಇದು ಅತ್ಯಾಧುನಿಕವಾಗಿರಲಿದೆ. ಆದರೆ ಸಾಂಪ್ರದಾಯಿಕ ಮೌಲ್ಯಗಳನ್ನು ಬಿಟ್ಟು ಕೊಡುತ್ತಿಲ್ಲ. ಹಾಗೂ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿ ಮಾಡುವುದಿಲ್ಲ ಎಂಬ ಭರವಸೆ ನೀಡುತ್ತೇನೆ," ಎಂಬುದಾಗಿ ಪ್ರಧಾನಿ ಹೇಳಿದರು.
ಇದೇ ವೇಳೆ ಅವರು ಹಿಮಾಲಯಕ್ಕೆ ಬಂದು ವಿಶಿಷ್ಟ ಅನುಭವಗಳನ್ನು ಪಡೆಯುವಂತೆ ದೇಶದ ಜನತೆಗೆ ಕರೆ ನೀಡಿದರು.