ವಿದೇಶಿ ಬಂಡವಾಳಕ್ಕೆ ಮನೆ ಬಾಗಿಲು ತೆರೆದಿಟ್ಟ ಮೋದಿ
ನವದೆಹಲಿ, ಜುಲೈ 14: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿದೇಶಿ ನೇರ ಹೂಡಿಕೆ (ಎಫ್ಡಿಐ) ನೀತಿಯನ್ನು ಮರು ಪರಿಶೀಲನೆ ನಡೆಸಲಿದ್ದಾರೆ. ಸಾಗರೋತ್ತರ ಒಳಹರಿವುಗಳಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವ ಉದ್ದೇಶದಿಂದಾಗಿ ಈ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಮತ್ತಷ್ಟು ಸುಗಮಗೊಳಿಸಲು ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಉದ್ದೇಶಿತ ಬದಲಾವಣೆಗಳ ಕುರಿತು ಇಂದು ನಡೆಯಲಿರುವ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ವಿವರಣೆಯನ್ನು ನೀಡಲಿದೆ.
ಅರುಣ್ ಜೇಟ್ಲಿ ಉಪಸ್ಥಿತಿ
ಇಂದು ನಡೆಯಲಿರುವ ಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ (ಡಿಐಪಿಪಿ) ಕಾರ್ಯದರ್ಶಿ ರಮೇಶ್ ಅಭಿಷೇಕ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಯಮ ಸಡಿಲ
ನಿರ್ಮಾಣ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸರಕಾರ ಎಫ್ಡಿಐ ನಿಯಮಗಳನ್ನು ಸಡಿಲಿಸುವ ಸಾಧ್ಯತೆ ಇದೆ. ಮುದ್ರಣ ಮಾಧ್ಯಮ, ನಿರ್ಮಾಣ, ಏಕ ಬ್ರಾಂಡ್ ಮತ್ತು ಬಹು ಬ್ರಾಂಡ್ ಚಿಲ್ಲರೆ ವಹಿವಾಟಿನ ನಿಯಮಗಳನ್ನೂ ಸರಾಗಗೊಳಿಸುವ ಪ್ರಸ್ತಾವನೆಯನ್ನು ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ನಿರ್ಮಾಣ ವಲಯಕ್ಕೆ ಬಂಪರ್
ನಿರ್ಮಾಣ ವಲಯದಲ್ಲಿಯೂ ಎಫ್ಟಿಐ ನಿಯಮಗಳನ್ನು ಒಂದಷ್ಟು ಸಡಿಲಗೊಳಿಸುವ ಸಾಧ್ಯತೆಗಳಿವೆ. ಅಭಿವೃದ್ಧಿ ಹೊಂದದ ಪ್ಲಾಟ್ಗಳಿಗೂ ಭಾರತೀಯ ಕಂಪನಿಯೊಂದು ವಿದೇಶಿ ಹೂಡಿಕೆ ಸೆಳೆಯಲು ಅವಕಾಶ ಸಿಗಲಿದೆ. ಪ್ರಸ್ತುತ ನೀತಿಯ ಪ್ರಕಾರ, ವಿವಿಧ ಶರತ್ತುಗಳ ಮೇಲೆ ನಿರ್ಮಾಣ ವಲಯದಲ್ಲಿ 100% ರಷ್ಟು ಎಫ್ಡಿಐಗೆ ಅವಕಾಶವಿದೆ. ಆದರೆ ಭಾರತೀಯ ಹೂಡಿಕೆದಾರರಿಗೆ ಕೇವಲ ಅಭಿವೃದ್ಧಿ ಹೊಂದಿರುವ ಪ್ಲಾಟ್ಗಳನ್ನು ಮಾರಾಟ ಮಾಡಲು ಮಾತ್ರ ಅವಕಾಶ ಇತ್ತು.
'ಮೇಡ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಮಣೆ
ಎಫ್ಟಿಐ ನಿಯಮಗಳನ್ನು ಬದಲಾವಣೆ ಮಾಡುವಾಗ ಸರ್ಕಾರವು ಕೆಲವು ನಿರ್ಬಂಧಗಳನ್ನು ವಿಧಿಸಬಹುದು ಎಂದು ಮೂಲಗಳು ತಿಳಿಸಿವೆ. 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ವಿದೇಶಿ ಚಿಲ್ಲರೆ ವ್ಯಾಪಾರಿಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ.
ಎಫ್ಡಿಐ ವಿರೋಧಿಸಿದ್ದ ಬಿಜೆಪಿ
ಪ್ರಸಕ್ತ ಎಫ್ಡಿಐ ನೀತಿಯಲ್ಲಿ ಭಾರತೀಯ ಚಿಲ್ಲರೆ ಮಾರಾಟ ಕಂಪೆನಿಗಳಲ್ಲಿ ವಿದೇಶಿ ಹೂಡಿಕೆದಾರರಿಗೆ ಶೇ 51 ರಷ್ಟು ಪಾಲನ್ನು ಹೊಂದಲು ಅವಕಾಶ ನೀಡಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಚಿಲ್ಲರೆ ಮಾರಾಟದಲ್ಲಿ ವಿದೇಶಿ ಹೂಡಿಕೆಯನ್ನು ವಿರೋಧಿಸಿದ್ದ ಬಿಜೆಪಿ ಸರಕಾರ ಇದೀಗ ಏನು ತೀರ್ಮಾನ ತೆಗೆದುಕೋಳ್ಳುತ್ತದೆಯೋ ಗೊತ್ತಿಲ್ಲ.
ಸ್ವಯಂಚಾಲಿತ ಮಾರ್ಗದ ಮೂಲಕ ಏಕ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಶೇ. 100 ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡುವುದನ್ನು ಹೆಚ್ಚಿನ ಸಂಖ್ಯೆಯ ಜಾಗತಿಕ ಹೂಡಿಕೆದಾರರು ಬಯಸುತ್ತಿದ್ದಾರೆ. ಸದ್ಯ ಈ ವಲಯದಲ್ಲಿ ಶೇಕಡ 49 ರವರೆಗೆ ಎಫ್ಡಿಐಗೆ ಅನುಮತಿ ಇದೆ.
ಆಹಾರ ನೀತಿಯಲ್ಲಿ ಬದಲಾವಣೆ
ಕೇಂದ್ರ ಆಹಾರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಆಹಾರ ನೀತಿಯಲ್ಲಿ ಬದಲಾವಣೆಗೆ ಉದ್ದೇಶಿಸಿದ್ದಾರೆ. ಭಾರತದಲ್ಲಿ ಸಂಸ್ಕರಿಸಿದ ಮತ್ತು ತಯಾರಿಸಿದ ಆಹಾರ ಪದಾರ್ಥಗಳೊಂದಿಗೆ ಆಹಾರ ಪದಾರ್ಥಗಳಲ್ಲದ ವಸ್ತುಗಳನ್ನು ಮಾರಾಟ ಮಾಡಲು ವಿದೇಶಿಗರಿಗೆ ಅನುಮತಿ ನೀಡುವುದು ಅವರ ಉದ್ದೇಶವಾಗಿದೆ.
ಈ ಎಲ್ಲಾ ಕ್ರಮಗಳು ವಿದೇಶಿ ಸ್ಪರ್ಧಿಗಳಿಗೆ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಎಫ್ಡಿಐ ನೀತಿಯಲ್ಲಿ ಬದಲಾವಣೆಗೆ ಕೇಂದ್ರ ಮುಂದಾಗಿದೆ.
ಬಜೆಟ್ ನಿರ್ಣಯದಂತೆ ಬದಲಾವಣೆ
ಹಣಕಾಸು ಮಂತ್ರಿ ಅರುಣ್ ಜೇಟ್ಲಿ 2017-18ರ ಬಜೆಟ್ ನಲ್ಲಿ ಘೋಷಿಸಿದ ನಿರ್ಧಾರಗಳನ್ವಯ ಈ ಬದಲಾವಣೆಗಳನ್ನು ಮಾಡಲಾಗುತ್ತದೆ. ಸರ್ಕಾರ ಕಳೆದ ವರ್ಷವಷ್ಟೇ ರಕ್ಷಣೆ, ನಾಗರಿಕ ವಿಮಾನಯಾನ, ನಿರ್ಮಾಣ ಮತ್ತು ಅಭಿವೃದ್ಧಿ, ಖಾಸಗಿ ಭದ್ರತಾ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮತ್ತು ಸುದ್ದಿ ಪ್ರಸಾರ ಸೇರಿದಂತೆ ಹನ್ನೆರಡು ವಲಯಗಳಲ್ಲಿ ಎಫ್ಡಿಐ ನಿಯಮಗಳನ್ನು ಸಡಿಲಿಸಿತ್ತು.
ರೂಪಾಯಿ ಬಲವರ್ಧನೆಗೆ ಸಹಕಾರಿ
ವಿದೇಶಿ ಹೂಡಿಕೆಗಳನ್ನು ಭಾರತಕ್ಕೆ ನಿರ್ಣಾಯಕವೆಂದು ಪರಿಗಣಿಸಲಾಗಿದ್ದು, ದೇಶದ ಬೆಳವಣಿಗೆಯನ್ನು ಹೆಚ್ಚಿಸಲು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಹೆದ್ದಾರಿಗಳಂತಹ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 1 ಟ್ರಿಲಿಯನ್ ಡಾಲರ್ನಷ್ಟು ಅಗತ್ಯವಿದೆ. ಇಷ್ಟು ದೊಡ್ಡ ಮೊತ್ತದ ಹಣ ಎಫ್ಟಿಐ ಮೂಲಕ ದಕ್ಕುತ್ತದೆ ಎಂಬುದು ಸರಕಾರದ ಚಿಂತನೆಯಾಗಿದೆ.
ಇತರ ಜಾಗತಿಕ ಕರೆನ್ಸಿಗಳ ವಿರುದ್ಧ ಅದರಲ್ಲೂ ವಿಶೇಷವಾಗಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಬಲಪಡಿಸಲು ಎಫ್ಡಿಐ ಸಹಾಯ ಮಾಡಲಿದೆ ಎಂದು ನರೇಂದ್ರ ಮೋದಿ ಸರಕಾರ ಅಂದುಕೊಂಡಿದೆ.