ಕಾಲ ಬಂತಮ್ಮ: ಇದು ಮನೆ ಮನೆಗೆ ತೆರಳಿ ಕೊವಿಡ್-19 ಲಸಿಕೆ ನೀಡುವ ಕಾಲ ಎಂದ ಪ್ರಧಾನಿ!
ನವದೆಹಲಿ, ನವೆಂಬರ್ 3: ಭಾರತದಲ್ಲಿ ಕೊರೊನಾವೈರಸ್ ಲಸಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಲಸಿಕೆ ವಿತರಣೆ ಅಭಿಯಾನ ನಡೆಸುವಂತೆ ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ದೇಶದಲ್ಲಿ ಜಿಲ್ಲಾವಾರು ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಬುಧವಾರ ಆನ್ ಲೈನ್ ಸಭೆ ನಡೆಸಿದ ಪ್ರಧಾನಿ ಮೋದಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ಸ್ಥಳೀಯ ಮತ್ತು ಪ್ರಾದೇಶಿಕ ನಾಯಕರ ನೆರವಿನೊಂದಿಗೆ ಕೊವಿಡ್-19 ಲಸಿಕೆ ಬಗ್ಗೆ ಜನರಲ್ಲಿ ಮೂಡಿರುವ ಅಪನಂಬಿಕೆ ಮತ್ತು ಭಯವನ್ನು ಹೋಗಲಾಡಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಕರ್ನಾಟಕದಲ್ಲಿ ದೀಪಾವಳಿ ಆಚರಣೆಗೆ ಸರ್ಕಾರದ ಕೊವಿಡ್-19 ಮಾರ್ಗಸೂಚಿ
ಸೂಕ್ಷ್ಮ ತಂತ್ರಗಳಿಗೆ ಒತ್ತು ನೀಡಿದ ಪ್ರಧಾನಿ ಮೋದಿ, ಜಿಲ್ಲಾಧಿಕಾರಿಗಳು ಲಸಿಕೆ ವಿತರಣೆ ವೇಗವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕು. ತಮ್ಮ ಜಿಲ್ಲೆಯಲ್ಲಿನ ಒಟ್ಟು ಜನಸಂಖ್ಯೆಯ ಶೇ.100ರಷ್ಟು ಅರ್ಹ ಫಲಾನುಭವಿಗಳಿಗೆ ಮೊದಲ ಡೋಸ್ ಅನ್ನು ನೀಡಬೇಕು. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಭೌಗೋಳಿಕತೆ ಮತ್ತು ಸಂಪನ್ಮೂಲ ಸೇರಿದಂತೆ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿವೆ ಎಂಬುದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಲಸಿಕೆ ವಿತರಣೆಗೆ ವಿಭಿನ್ನ ಕಾರ್ಯತಂತ್ರ
"ನೀವು ಬಯಸುವುದಾದರೆ, ನಿಮ್ಮ ಜಿಲ್ಲೆಗಳಲ್ಲಿ ಪ್ರತಿಯೊಂದು ನಗರ, ಪಟ್ಟಣ, ಹಳ್ಳಿಗಳಿಗೆ ವಿಭಿನ್ನ ಕಾರ್ಯತಂತ್ರಗಳನ್ನು ರೂಪಿಸಿರಿ. ಆಯಾ ಪ್ರದೇಶವನ್ನು ಅವಲಂಬಿಸಿ 20-25 ಜನರ ತಂಡವನ್ನು ರಚಿಸಿರಿ. ಆ ಮೂಲಕ ನೀವು ರಚಿಸಿದ ತಂಡಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸಲು ಪ್ರಯತ್ನಿಸಿ. ಇಲ್ಲಿಯವರೆಗೆ ನೀವು ಜನರನ್ನು ಲಸಿಕೆ ಕೇಂದ್ರಗಳಿಗೆ ಕರೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೀರಿ, ಈಗ ಮನೆ-ಮನೆಗೆ ಲಸಿಕೆಗಾಗಿ ಪ್ರತಿ ಮನೆಯನ್ನು ತಲುಪುವ ಸಮಯ ಬಂದಿದೆ," ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.
ಆಶಾ ಕಾರ್ಯಕರ್ತರ ಕಾರ್ಯಕ್ಕೆ ಪ್ರಧಾನಿ ಪ್ರಶಂಸೆ
ಕೊವಿಡ್-19 ಲಸಿಕೆಗಳನ್ನು ವಿತರಿಸುವುದಕ್ಕಾಗಿ ದೂರದ ಸ್ಥಳಗಳಿಗೆ ತಲುಪಲು ಮೈಲುಗಳಷ್ಟು ನಡೆದಾಡಿದ ಆಡಳಿತ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರ ಕೆಲಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು. "ಆದರೆ ನಾವು 1 ಬಿಲಿಯನ್ (ಡೋಸ್) ನಂತರ ಸಡಿಲಗೊಂಡರೆ, ಹೊಸ ಬಿಕ್ಕಟ್ಟು ಸೃಷ್ಟಿಯಾಗಬಹುದು. ರೋಗಗಳು ಮತ್ತು ಶತ್ರುಗಳ ವಿರುದ್ಧ ಕೊನೆಯವರೆಗೂ ಹೋರಾಡಬೇಕು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತಪ್ಪು ಗ್ರಹಿಕೆ ಮತ್ತು ವದಂತಿಗಳು ದೊಡ್ಡ ಸವಾಲು
ಕೋವಿಡ್ -19 ಲಸಿಕೆ ಅಭಿಯಾನಕ್ಕೆ ವದಂತಿಗಳು ಮತ್ತು ತಪ್ಪುಗ್ರಹಿಕೆಗಳೇ ದೊಡ್ಡ ಸವಾಲಾಗಿದೆ. "ಜನರಲ್ಲಿ ಜಾಗೃತಿ ಮೂಡಿಸುವುದೇ ಇದಕ್ಕೆ ಪರಿಹಾರವಾಗಿದೆ. ನೀವು ಸ್ಥಳೀಯ ಧಾರ್ಮಿಕ ಮುಖಂಡರ ಸಹಾಯವನ್ನು ತೆಗೆದುಕೊಳ್ಳಬಹುದು. ನೀವು ಈ ನಾಯಕರನ್ನು ಒಳಗೊಂಡ ಕಿರು ವೀಡಿಯೊಗಳನ್ನು ಮಾಡಬಹುದು. ಅವುಗಳನ್ನು ಪ್ರತಿ ಮನೆಗೆ ಪ್ರಸಾರ ಮಾಡಬಹುದು," ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. "ಕೆಲವು ದಿನಗಳ ಹಿಂದೆ, ನಾನು ವ್ಯಾಟಿಕನ್ನಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದೆನು. ಲಸಿಕೆ ಕುರಿತು ಧಾರ್ಮಿಕ ಮುಖಂಡರ ಸಂದೇಶವನ್ನು ಸಾರ್ವಜನಿಕರಿಗೆ ಕೊಂಡೊಯ್ಯಲು ನಾವು ವಿಶೇಷ ಒತ್ತು ನೀಡಬೇಕಾಗಿದೆ," ಎಂದು ಹೇಳಿದರು.
ಮೊದಲ ಡೋಸ್ ಜೊತೆ 2ನೇ ಡೋಸ್ ವಿತರಣೆಗೆ ಆದ್ಯತೆ
ಕೊರೊನಾವೈರಸ್ ಸೋಂಕಿನ ಮೊದಲ ಡೋಸ್ ಲಸಿಕೆ ಜೊತೆಗೆ ಎರಡನೇ ಡೋಸ್ ನೀಡುವುದರ ಬಗ್ಗೆಯೂ ವಿಶೇಷ ಲಕ್ಷ್ಯ ವಹಿಸಬೇಕು. "ಏಕೆಂದರೆ ಸೋಂಕಿನ ಪ್ರಕರಣ ಕಡಿಮೆಯಾಗಲು ಶುರು ಆದಾಗ ಕೆಲವೊಮ್ಮೆ ಜನರಲ್ಲಿ ತುರ್ತು ಸೋಂಕು ನಿಯಂತ್ರಣಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ನಾವು ತುರ್ತಿನಲ್ಲಿ ಏನೋ ಲಸಿಕೆ ಹಾಕುತ್ತೇನೆ ಎಂದ ಭಾವನೆ ಜನರಲ್ಲಿ ಮೂಡುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
48 ಜಿಲ್ಲೆಗಳು ಕೊವಿಡ್-19 ಲಸಿಕೆ ವಿತರಣೆಯಲ್ಲಿ ಹಿನ್ನಡೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಭಾರತದ 48 ಜಿಲ್ಲೆಗಳು ಕೊವಿಡ್-19 ಲಸಿಕೆ ವಿತರಣೆಯಲ್ಲಿ ಹಿಂದುಳಿದಿವೆ ಎಂದು ಗುರುತಿಸಲಾಗಿದೆ. ಮೊದಲ ಡೋಸ್ ವಿತರಣೆಯಲ್ಲಿ ಇನ್ನೂ ಶೇಕಡಾ 50ಕ್ಕಿಂತ ಕಡಿಮೆ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಮಣಿಪುರ ಮತ್ತು ನಾಗಾಲ್ಯಾಂಡ್ನ ತಲಾ ಎಂಟು ಜಿಲ್ಲೆಗಳು ಸೇರಿದಂತೆ 48 ಜಿಲ್ಲೆಗಳ ಪೈಕಿ 27 ಈಶಾನ್ಯ ರಾಜ್ಯಗಳಲ್ಲಿ ಇರುವುದು ಸ್ಪಷ್ಟವಾಗಿದೆ. ಎಲ್ಲಾ ರಾಜ್ಯಗಳ ಪೈಕಿ ಜಾರ್ಖಂಡ್ ಹೆಚ್ಚು ಜಿಲ್ಲೆಗಳನ್ನು ಹೊಂದಿದ್ದು, ಈ ರಾಜ್ಯದ 9 ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಅರ್ಹ ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
Recommended Video