ಸಂಪುಟ ಪುನಾರಚನೆ ವದಂತಿ ನಡುವೆ ಸಚಿವರೊಂದಿಗೆ ಮೋದಿ ಸರಣಿ ಸಭೆ
ನವದೆಹಲಿ, ಜೂನ್ 12: ಕಳೆದ ಎರಡು ವರ್ಷಗಳಲ್ಲಾಗಿರುವ ಕಾರ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ಕೇಂದ್ರ ಸಚಿವರೊಂದಿಗೆ ವೈಯಕ್ತಿಕ ಸಭೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಪ್ರಧಾನಿ ನಿವಾಸದಲ್ಲಿ ಉನ್ನತ ಮಟ್ಟದ ಸರಣಿ ಸಭೆಗಳು ನಡೆಯುತ್ತಿದ್ದು, ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆಯ ಸೂಚನೆಯನ್ನೂ ನೀಡಿವೆ.
ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಯೋಗಿ ಆದಿತ್ಯಾನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೊಳಗೊಂಡು ಪ್ರಧಾನಿ ಸರಣಿ ಸಭೆಗಳನ್ನು ನಡೆಸಿದ್ದಾರೆ. 2019ರ ಮೇನಲ್ಲಿ ಎರಡನೇ ಬಾರಿಗೆ ಸರ್ಕಾರ ರಚನೆಯಾಗಿದ್ದು, ಇಲ್ಲಿಯವರೆಗಿನ ಕಾರ್ಯಗಳ ಕುರಿತು ಪುನರಾವಲೋಕನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಸಂಪುಟ ಪುನಾರಚನೆಯ ಮಾತುಗಳೂ ಕೇಳಿಬಂದಿವೆ.
ಸಚಿವರೊಂದಿಗೆ ನಡೆಸಿದ ಬಹುತೇಕ ಎಲ್ಲಾ ಸಭೆಗಳು ಐದು ಗಂಟೆಗಳಿಗಿಂತ ಹೆಚ್ಚು ಅವಧಿ ನಡೆದಿದ್ದು, ಕೊರೊನಾ ಎರಡನೇ ಅಲೆ ನಿರ್ವಹಣೆ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ. ಏಳು ಸಚಿವಾಲಯಗಳು ಕೊರೊನಾ ಸೋಂಕಿನ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳ ಕುರಿತು ವಿವರಿಸಿವೆ.
47ನೇ ಜಿ7 ಶೃಂಗದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ ಮೋದಿ
ಗ್ರಾಮೀಣಾಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಬುಡಕಟ್ಟು ವ್ಯವಹಾರಗಳು, ನಗರಾಭಿವೃದ್ಧಿ, ಸಂಸ್ಕೃತಿ, ನಾಗರಿಕ ವಿಮಾನಯಾನ, ರೈಲ್ವೆ, ಜಲ್ ಶಕ್ತಿ, ಪೆಟ್ರೋಲಿಯಂ, ಸ್ಟೀಲ್ ಮತ್ತು ಪರಿಸರ, ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಸಚಿವರು ಹಾಗೂ ರಾಜ್ಯ ಸಚಿವರ ಜೊತೆ ಸಭೆ ನಡೆದಿದೆ ಎನ್ನಲಾಗಿದೆ.
ಸಚಿವಾಲಯಗಳು ಆರಂಭಿಸಬಹುದಾದ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಇನ್ನಷ್ಟು ದಿನ ಸಭೆ ಮುಂದುವರೆಯುವುದಾಗಿ ತಿಳಿದುಬಂದಿದೆ.