ಪಾಕ್ ರಾಷ್ಟ್ರೀಯ ದಿನಕ್ಕೆ ಶುಭ ಕೋರಿ ಇಮ್ರಾನ್ ಖಾನ್ಗೆ ಮೋದಿ ಪತ್ರ
ನವದೆಹಲಿ, ಮಾರ್ಚ್ 24: ಪಾಕಿಸ್ತಾನದೊಂದಿಗೆ ಭಾರತವು 'ಹೃತ್ಪೂರ್ವಕ ಬಾಂಧವ್ಯ' ಹೊಂದಲು ಭಾರತ ಬಯಸಿದೆ. ಆದರೆ ಅದು ಸಾಧ್ಯವಾಗಲು ಭಯೋತ್ಪಾದನೆ ರಹಿತವಾದ 'ವಿಶ್ವಾಸಾರ್ಹ ಪರಿಸರ' ಬಹಳ ಅಗತ್ಯವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ದಿನದಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಜನತೆಗೆ ಶುಭಾಶಯ ಕೋರಿ ಪತ್ರ ಬರೆದಿರುವ ನರೇಂದ್ರ ಮೋದಿ, 'ನೆರೆಯ ದೇಶವಾಗಿ, ಪಾಕಿಸ್ತಾನದ ಜನತೆಯೊಂದಿಗೆ ಹೃದಯಪೂರ್ವಕ ಸಂಬಂಧ ಹೊಂದಿರಲು ಭಾರತ ಅಪೇಕ್ಷಿಸುತ್ತದೆ. ಇದಕ್ಕಾಗಿ ವಿಶ್ವಾಸಾರ್ಹತೆ, ಭಯೋತ್ಪಾದನೆ ಮತ್ತು ಹಗೆತನ ಮುಕ್ತ ಪರಿಸರ ಅತಿ ಮುಖ್ಯವಾಗಿದೆ' ಎಂದು ತಿಳಿಸಿದ್ದಾರೆ.
ಪಾಕಿಸ್ತಾನವು ಮಂಗಳವಾರ ತನ್ನ 70ನೇ ರಾಷ್ಟ್ರೀಯ ದಿನ ಆಚರಿಸಿಕೊಂಡಿದ್ದು, ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸುವ ವಿಚಾರದಲ್ಲಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಶುಭ ಹಾರೈಸಿದ್ದಾರೆ.
'ಮನುಕುಲದ ಈ ಸಂಕಷ್ಟದ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕದ ಸವಾಲನ್ನು ನಿಭಾಯಿಸುತ್ತಿರುವ ನಿಮಗೆ ಹಾಗೂ ಪಾಕಿಸ್ತಾನದ ಜನರಿಗೆ ನನ್ನ ಶುಭಾಶಯಗಳನ್ನು ತಿಳಿಸಲ ಬಯಸುತ್ತೇನೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೋವಿಡ್-19 ಸೋಂಕಿಗೆ ಒಳಗಾಗಿರುವುದು ವರದಿಯಾಗಿತ್ತು. ಆಗ ಅವರು ಬೇಗ ಗುಣಮುಖರಾಗಲಿ ಎಂದು ಮೋದಿ ಟ್ವಿಟ್ಟರ್ನಲ್ಲಿ ತಿಳಿಸಿದ್ದರು.