ಅಫ್ಘಾನ್ ಬಿಕ್ಕಟ್ಟಿನ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಚರ್ಚೆ
ಕಾಬೂಲ್, ಆಗಸ್ಟ್ 24: ಅಫ್ಘಾನಿಸ್ತಾನದಲ್ಲಿ 10 ದಿನಗಳ ಹಿಂದೆಯಿದ್ದ ಪರಿಸ್ಥಿತಿ ಇಂದು ಇಲ್ಲ. ಆಗಸ್ಟ್ 15ರಂದು ತಾಲಿಬಾನ್ ಉಗ್ರ ಸಂಘಟನೆಯು ದೇಶವನ್ನು ಆಕ್ರಮಿಸಿದ್ದೇ ತಡ ಇಡೀ ದೇಶದ ಚಿತ್ರಣವೇ ಬದಲಾಗಿದೆ. ಪ್ರಜೆಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಫ್ಘಾನ್ನರು ದೇಶ ತೊರೆದು ಹೋಗುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ತನ್ನ ಸ್ನೇಹಿತರಾಗಿರುವ ರಷ್ಯಾದ ಅಧ್ಯಕ್ಷ ಪುಟಿನ್ ಜೊತೆ ವಿವರ ಹಾಗೂ ಉಪಯುಕ್ತವಾದ ಚರ್ಚಿಸಿದ್ದೇನೆ. ಅಭಿಪ್ರಾಯ ವಿನಿಮಯ ಮಾಡಿಕೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಫ್ಘಾನ್ ಜನರಿಗೆ ಬೆಂಬಲ ನೀಡುವಂತೆ ಬ್ರಿಟನ್ ಪ್ರಧಾನಿ ಕರೆ
"ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ನನ್ನ ಸ್ನೇಹಿತ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಉಪಯುಕ್ತ ಹಾಗೂ ವಿವರವಾಗಿ ಚರ್ಚಿಸಲಾಗಿದೆ. ಕೋವಿಡ್ -19 ವಿರುದ್ಧ ಭಾರತ-ರಷ್ಯಾ ಸಹಕಾರ ಸೇರಿದಂತೆ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಸಮಸ್ಯೆಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಪ್ರಮುಖ ವಿಷಯಗಳ ಕುರಿತು ನಿಕಟ ಸಮಾಲೋಚನೆಗಳನ್ನು ಮುಂದುವರಿಸಲು ನಾವು ಒಪ್ಪಿಕೊಂಡಿದ್ದೇವೆ," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Had a detailed and useful exchange of views with my friend President Putin on recent developments in Afghanistan. We also discussed issues on the bilateral agenda, including India-Russia cooperation against COVID-19. We agreed to continue close consultations on important issues.
— Narendra Modi (@narendramodi) August 24, 2021
ಅಫ್ಘನ್ನರಿಗೆ ನೆರವು ನೀಡುವಂತೆ ಬೋರಿಸ್ ಜಾನ್ಸನ್ ಕರೆ:
ಜಗತ್ತು ಅಂದುಕೊಂಡಿದ್ದಕ್ಕಿಂತ ವೇಗವಾದ ಗತಿಯಲ್ಲಿ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಕಬ್ಜ ಮಾಡಿಕೊಂಡಿದ್ದಾರೆ. ಅಮೆರಕಾ ಸೇನೆ ವಾಪಸ್ ತೆಗೆದುಕೊಳ್ಳುವ ಆಗಸ್ಟ್ 31ರ ಗಡುವು ವಿಸ್ತರಣೆಗೆ ತಾಲಿಬಾನ್ ನಿರಾಕರಿಸಿದ ಹಿನ್ನೆಲೆ ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಜಿ-7 ರಾಷ್ಟ್ರಗಳ ಸಭೆ ಕರೆದಿದ್ದರು. ಸೋಮವಾರ ಬ್ರಿಟನ್, ಅಮೆರಿಕಾ, ಫ್ರಾನ್ಸ್, ಇಟಲಿ, ಜರ್ಮನಿ, ಜಪಾನ್, ಕೆನಡಾ ರಾಷ್ಟ್ರಗಳ ಸಭೆ ಕುರಿತು ಮಾತನಾಡಿದ ಬೋರಿಸ್, 'ನಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಇದರ ಜೊತೆಗೆ 20 ವರ್ಷಗಳಲ್ಲಿ ನಮಗೆ ನೆರವು ನೀಡಿದ ಅಫ್ಘಾನ್ನರಿಗೂ ಸಹಾಯ ಮಾಡಬೇಕಿದೆ. ಹೀಗಾಗಿ ನಾನು ತುರ್ತು ಸಭೆ ಕರೆದಿದ್ದು, ಅಫ್ಘಾನ್ ಜನರ ಸುರಕ್ಷತೆ ಹಾಗೂ ಹಕ್ಕುಗಳ ರಕ್ಷಣೆಗೆ ನಾವು ಬದ್ಧರಾಗಿಬೇಕು' ಎಂದಿದ್ದಾರೆ.
ಅಫ್ಘಾನ್ ಸ್ಥಿತಿ ಬಗ್ಗೆ ಚರ್ಚೆಗೆ ಸರ್ವಪಕ್ಷ ಸಭೆ:
"ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು, ದೇಶದ ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೆಚ್ಚಿನ ವಿವರಗಳನ್ನು ನೀಡುತ್ತಾರೆ" ಎಂದು ಶ್ರೀ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಇದಲ್ಲದೇ, "ಅಫ್ಘಾನಿಸ್ತಾನ ಬಿಕ್ಕಟ್ಟು ಮತ್ತು ಅಲ್ಲಿನ ಬೆಳವಣಿಗೆಗಳ ಕುರಿತು ದೇಶದ ನಾಯಕರನ್ನು ಉದ್ದೇಶಿಸಿ ಕೇಂದ್ರ ವಿದೇಶಾಂತ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಲಿದ್ದಾರೆ. ಆಗಸ್ಟ್ 26ರ ಬೆಳಗ್ಗೆ 11 ಗಂಟೆಗೆ ಮುಖ್ಯ ಸಮಿತಿಯ ಕೊಠಡಿಯಲ್ಲಿ ನಡೆಯುವ ಸರ್ವಪಕ್ಷ ಸಭೆಯಲ್ಲಿ ಹಾಜರಾಗಬೇಕೆಂದು ಆಹ್ವಾನಿಸುತ್ತೇವೆ," ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಅಫ್ಘಾನ್ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ್ದು ಹೇಗೆ?:
ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಅದಾಗಿ 10 ದಿನದಲ್ಲಿ ದೇಶದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮ ಕ್ರೌರ್ಯ ಪ್ರದರ್ಶಿಸುತ್ತಿದ್ದಾರೆ. ತಾಲಿಬಾನ್ ಉಗ್ರರ ಮುಷ್ಠಿಯಲ್ಲಿ ಸಿಲುಕಿರುವ ಪ್ರಜೆಗಳು ಪ್ರತಿನಿತ್ಯ ಭಯದ ನೆರಳಿನಲ್ಲೇ ಬದುಕುತ್ತಿದ್ದು, ದೇಶ ತೊರೆಯುವುದಕ್ಕಾಗಿ ಹವಣಿಸುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಧಿಕಾರ ಕಳೆದುಕೊಂಡಿದ್ದ ತಾಲಿಬಾನ್:
ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.
Recommended Video