ಮೋದಿ ಮಾತಿಗೆ ಬೆಲೆಕೊಟ್ಟು ವಿಲೀನಕ್ಕೆ ಒಪ್ಪಿಕೊಂಡೆ: ಓಪಿಎಸ್
ಚೆನ್ನೈ, ಫೆ 18: ದಿವಂಗತ ಮುಖ್ಯಮಂತ್ರಿ ಜಯಲಲಿತಾ ನಿಧನದ ನಂತರ ಮನೆಯೊಂದು ಊರೆಲ್ಲಾ ಬಾಗಿಲಾಗಿದ್ದ ಎಐಎಡಿಎಂಕೆ ಪಕ್ಷವನ್ನು ಪ್ರಧಾನಿ ಮೋದಿಯವರ ಮಾತಿಗೆ ಬೆಲೆಕೊಟ್ಟು ಮತ್ತೆ ವಿಲೀನ ಮಾಡಿಕೊಳ್ಳಲು ಒಪ್ಪಿಕೊಂಡೆ ಎಂದು ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಹೇಳಿದ್ದಾರೆ.
ಎರಡು ಬಣವಾಗಿ ಪಕ್ಷದ ಕಿಚ್ಚಾಟ ನಿರ್ಣಾಯಕ ಹಂತ ತಲುಪಿದ್ದಾಗ, ಪ್ರಧಾನಿ ಮೋದಿ ನಿಮ್ಮ ಪಕ್ಷವನ್ನು ಈ ಕೂಡಲೇ ಎಐಎಡಿಎಂಕೆ ಜೊತೆ ವಿಲೀನಗೊಳಿಸಿ ಎಂದು ಸೂಚಿಸಿದ್ದರು. ಅವರ ಮಾತಿಗೆ ಬೆಲೆಕೊಟ್ಟು ವಿಲೀನಕ್ಕೆ ಒಪ್ಪಿಕೊಂಡು, ಆದರೆ ಸರಕಾರದ ಭಾಗವಾಗುವುದಿಲ್ಲ ಎಂದಿದ್ದೆ.
ಆದರೆ, ನಿಮ್ಮಂತಹ ಅನುಭವಿ ನಾಯಕರ ಅವಶ್ಯಕತೆ ರಾಜ್ಯಕ್ಕಿದೆ. ನೀವು ಕೂಡಾ ಸರಕಾರದ ಭಾಗವಾಗಬೇಕೆಂದು ಮೋದಿ ಹೇಳಿದ್ದರು. ಹಾಗಾಗಿ, ನಮ್ಮ ಪಕ್ಷವನ್ನು ವಿಲೀನಗೊಳಿಸಿ, ಉಪಮುಖ್ಯಮಂತ್ರಿ ಆಗಿದ್ದೇನೆಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.
ಥೇಣಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪನ್ನೀರ್ ಸೆಲ್ವಂ, ಹೋದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಧಾನಿಯವರ ಭೇಟಿಗೆ ಹೋಗಿದ್ದೆ. ನನ್ನ ಜೊತೆ ಮಾತನಾಡುತ್ತಾ, ಜಯಲಲಿತಾ ನಿಮ್ಮ ಬಗ್ಗೆ ತುಂಬಾ ಗೌರವದ ಮಾತನ್ನಾಡುತ್ತಿದ್ದರು ಎಂದು ಮೋದಿ ಹೇಳಿದ್ದರು ಎಂದು ಓಪಿಎಸ್ ಅಂದು ನಡೆದ ಮಾತುಕತೆಯ ಬಗ್ಗೆ ವಿವರಿಸಿದ್ದಾರೆ.
ಪಳನಿಸ್ವಾಮಿ ಸರಕಾರದ ಭಾಗವಾದ ನಂತರ, ಶಶಿಕಲಾ ಬಣ ಓಪಿಎಸ್ ಅವರ ವಿಶ್ವಾಸಾರ್ಹತೆಯ ಬಗ್ಗೆ ಮಾತನ್ನಾಡಿತ್ತು. ಈ ಬಗ್ಗೆ ಪ್ರಸ್ತಾವಿಸಿದ ಪನ್ನೀರ್ ಸೆಲ್ವಂ, ಪಕ್ಷದ ಮೇಲಿನ ನಿಯತ್ತಿನ ಬಗ್ಗೆ ಯಾರೂ ನನಗೆ ಸರ್ಟಿಫಿಕೇಟ್ ನೀಡಬೇಕಾಗಿಲ್ಲ ಎಂದು ಓಪಿಎಸ್ ಹೇಳಿದ್ದಾರೆ.
ಎರಡು ಬಣಗಳು (ಇಪಿಎಸ್, ಓಪಿಎಸ್) ಒಂದಾದ ನಂತರ ನಡೆದ ಚೆನ್ನೈ ನಗರದ ಆರ್ ಕೆ ನಗರ ಅಸೆಂಬ್ಲಿ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಸೋಲು ಅನುಭವಿಸಿತ್ತು.