ಗೋಬ್ಯಾಕ್ ಎಂದವರಿಗೆ 'ಪಂಚೆ, ಶಲ್ಯ' ದಲ್ಲೇ ಉತ್ತರ ಕೊಟ್ಟ ಪ್ರಧಾನಿ ಮೋದಿ
'ಮೋದಿ ಗೋಬ್ಯಾಕ್', 'ಸ್ಯಾಡಿಸ್ಟ್ ಮೋದಿ ಗೋಬ್ಯಾಕ್' ಎಂದು ವ್ಯವಸ್ಥಿತವಾಗಿ ಸಾಮಾಜಿಕ ತಾಣದಲ್ಲಿ ಟ್ರೆಂಡ್ ಮಾಡಿದವರ ಸಿಟ್ಟೇನಿದ್ದರೂ ಮೋದಿಯ ಮೇಲೆ, ಭಾರತದ ಪ್ರಧಾನಿಯ ಮೇಲೆ ಆಗರಬಾರದಾಗಿತ್ತು.
ಈ ಹಿಂದೆ ಹಲವು ಬಾರಿ ಮೋದಿ ತಮಿಳುನಾಡಿಗೆ ಭೇಟಿ ನೀಡಿದಾಗಲೂ, 'ಗೋಬ್ಯಾಕ್' ಟ್ರೆಂಡ್ ಆಗಿತ್ತು.. ಆಗಲಿ.. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಹೋರಾಟ ಕಾನೂನುಬದ್ದ. ಅದಕ್ಕೆ ಯಾರಿಂದಲೂ ತಕರಾರು ಎತ್ತಲು ಸಾಧ್ಯವಿಲ್ಲ.
ಆದರೆ, ಮಹಾಬಲಿಪುರಂನಲ್ಲಿ ಭಾರತ-ಚೀನಾ ಜಂಟಿ ಐತಿಹಾಸಿಕ ಅನೌಪಚಾರಿಕ ಸಭೆಯ ವೇಳೆ ನಮ್ಮ ದೇಶದ ಪ್ರಧಾನಿಗೆ, ನಮ್ಮ ನೆಲದಲ್ಲೇ ಗೋ ಬ್ಯಾಕ್ ಅಂದಿದ್ದು ಸರೀನಾ ಎನ್ನುವುದಿಲ್ಲಿ ಪ್ರಶ್ನೆ. ಗೋಬ್ಯಾಕ್ ಅನ್ನು ಚೀನೀ ಭಾಷೆಯಲ್ಲೂ ಟ್ರೆಂಡ್ ಮಾಡಿರುವ ಹಿಂದಿನ ಔಚಿತ್ಯವಾದರೂ ಏನು?
'ಗೋಬ್ಯಾಕ್ ಮೋದಿ' ಟ್ರೆಂಡಿಂಗ್ ಹಿಂದಿನ ಕಠೋರ ಸತ್ಯ ಬಯಲು
ದ್ರಾವಿಡರು ಮತ್ತು ಪೆರಿಯಾರ್ ತತ್ವವನ್ನು ನಂಬುವವರು, ಮೋದಿಯನ್ನು ವಿರೋಧಿಸಲು ಕಾರಣವಿದೆ. ಅದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಭಾರತಕ್ಕೆ ಯಾವಾಗಲೂ ಮುಗ್ಗಲಮುಳ್ಳಿನಂತಿರುವ ದೇಶದ ಅಧ್ಯಕ್ಷರು ನಮ್ಮ ದೇಶಕ್ಕೆ ಬಂದಾಗ, ಏನೇ ದ್ವೇಷಗಳಿದ್ದರೂ, ಒಗ್ಗಟ್ಟು ಪ್ರದರ್ಶಿಸುವಲ್ಲಿ ತಮಿಳರು (ಎಲ್ಲರೂ ಅಲ್ಲ) ವಿಫಲರಾಗಿದ್ದಂತೂ ಹೌದು. ಆದರೆ, ಇವರ ಆಕ್ರೋಶಕ್ಕೆ ಪ್ರಧಾನಿ ನಡೆದುಕೊಂಡ ರೀತಿ, ಮೆಚ್ಚುವಂತದ್ದು.
'ಮೋದಿ ಗೋಬ್ಯಾಕ್' ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ಆಗಿತ್ತು
ಶುಕ್ರವಾರ (ಅ 11) ನರೇಂದ್ರ ಮೋದಿ ಚೆನ್ನೈ ವಿಮಾನನಿಲ್ದಾಣಕ್ಕೆ ಬರುವ ಮುನ್ನವೇ 'ಮೋದಿ ಗೋಬ್ಯಾಕ್' ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ಆಗಿತ್ತು. ಬೇಸರದ ಸಂಗತಿಯೆಂದರೆ, ಕೆಲವೊಂದು ಗ್ರೂಪ್ ಗಳು ಅದನ್ನು ಚೀನೀ ಭಾಷೆಯಲ್ಲೂ ಟ್ರೆಂಡ್ ಮಾಡಿಬಿಟ್ಟರು. ವಿಶ್ವಮಟ್ಟದಲ್ಲೂ ಒಂದು ಹಂತದಲ್ಲಿ ಇದು ಟ್ರೆಂಡ್ ಆಯಿತು. ಇದು, ಅತ್ಯಂತ ಸ್ಪಷ್ಟವಾಗಿ ನಮ್ಮೊಳಗಿನ ಹುಳುಕನ್ನು ನಾವೇ ವಿಶ್ವಕ್ಕೆ ಪರಿಚಯಿಸಿದಂತಾಯಿತು.
ಗೋಬ್ಯಾಕ್ ಅನ್ನುತ್ತಿದ್ದವರು, ಒಮ್ಮೆ ತಲೆತಗ್ಗಿಸುವಂತೆ ಮಾಡಿತು
'ಗೋಬ್ಯಾಕ್ ಮೋದಿ' ಹ್ಯಾಷ್ ಟ್ಯಾಗ್ ನಲ್ಲಿ ಬಳಸಿದಂತಹ ಪದಗಳು, ಚಿತ್ರಗಳು ನಿಜಕ್ಕೂ, ದೇಶದ ಪ್ರಧಾನಿಗೊಬ್ಬರಿಗೆ ಕೊಡುವ ಗೌರವವೇ ಇದು ಎಂದು ಆತ್ಮಾವಲೋಕನ ಮಾಡುವಂತಿತ್ತು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣದ ಪ್ರಧಾನಿ, ಎಂದಿನ ತಮ್ಮ ಸ್ಟೈಲಿನಲ್ಲೇ ಬಂದಿಳಿದರು. ಜೊತೆಗೆ, ಚೀನಾದ ಅಧ್ಯಕ್ಷರನ್ನು ಅವರು ಬರಮಾಡಿಕೊಂಡ ಶೈಲಿ, ಗೋಬ್ಯಾಕ್ ಅನ್ನುತ್ತಿದ್ದವರು, ಒಮ್ಮೆ ತಲೆತಗ್ಗಿಸುವಂತೆ ಮಾಡಿತು.
ಮಹಾಬಲಿಪುರಂ ಬೀಚ್ನಲ್ಲಿ ಕಸ ಹೆಕ್ಕಿದ ಮೋದಿ: ವೈರಲ್ ವಿಡಿಯೋ
ಹ್ಯೂಸ್ಟನ್ ನಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮ
ತಮ್ಮ ವಿದೇಶ ಪ್ರವಾಸಗಳಲ್ಲಿ ಮೋದಿ ಹಲವು ಬಾರಿ ತಮಿಳು ಕವಿಗಳು, ಸಂತರನ್ನು ಉಲ್ಲೇಖಿಸಿ ಹೆಮ್ಮೆಯ ಮಾತನ್ನಾಡಿದ್ದಾರೆ. ಅದಕ್ಕೆ, ಇತ್ತೀಚೆಗೆ ಅಮೆರಿಕಾದ ಹ್ಯೂಸ್ಟನ್ ನಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮ ಒಂದು ಉದಾಹರಣೆ. ಚೀನಾದ ಅಧ್ಯಕ್ಷರನ್ನು ತಮಿಳುನಾಡಿನ ಸಾಂಪ್ರದಾಯಿಕ ಪಂಚೆ, ಜರಿಶಲ್ಯ, ತೊಟ್ಟುಕೊಂಡು ಮೋದಿ ಬರಮಾಡಿಕೊಂಡರು.
ಹಿಂದಿ ಭಾಷೆ ಹೇರಿಕೆ
ಮೋದಿಯ ಮೇಲೆ ಹಲವು ಕಾರಣಕ್ಕೆ ದಕ್ಷಿಣಭಾರತದ ಜನತೆಗೆ ಬೇಸರವಿದೆ. ಅದರಲ್ಲಿ, ಹಿಂದಿ ಭಾಷೆ ಹೇರಿಕೆ ಮಾಡಲು ಮುಂದಾಗಿರುವುದು ಕೂಡಾ ಒಂದು. ಇದನ್ನು ವಿರೋಧಿಸುತ್ತಿರುವವರಲ್ಲಿ ತಮಿಳುನಾಡು, ಕರ್ನಾಟಕಕ್ಕಿಂತಲೂ ಒಂದು ಕೈಮೇಲು. ದೆಹಲಿಯಲ್ಲಿ ತಮಿಳುನಾಡು ರೈತರು ಹೋರಾಟ ಮಾಡುತ್ತಿದ್ದಾಗ ಕೇಂದ್ರ ಸರಕಾರ ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಸಿಟ್ಟೂ ಇದೆ.
ಇಷ್ಟವಿದೆಯೋ, ಇಲ್ಲವೋ, ಮೋದಿ, ಈ ದೇಶದ ಚುನಾಯಿತ ಪ್ರಧಾನಿ.
ಇನ್ನು ತೂತುಕುಡಿಯಲ್ಲಿರುವ ಸ್ಟರ್ಲೈಟ್ ಕಾಪ್ಪರ್ ಕಾರ್ಖಾನೆಯ ವಿಚಾರದಲ್ಲೂ ಕೇಂದ್ರದ ಅಣತಿಯಂತೆ, ತಮಿಳುನಾಡು ಸರಕಾರ ಕೆಲಸ ಮಾಡಿತು ಎನ್ನುವ ಸಿಟ್ಟೂ ಆಭಾಗದ ಜನರಿಗಿದೆ. ಆದರೆ, ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಪರವಾಗಿ ನಿಂತಿರುವ ಚೀನಾದ ಅಧ್ಯಕ್ಷರು, ನಮ್ಮ ದೇಶಕ್ಕೆ ಬಂದಾಗ, ಒಗ್ಗಟ್ಟು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಂತೂ ಹೌದು. ಯಾಕೆಂದರೆ, ಇಷ್ಟವಿದೆಯೋ, ಇಲ್ಲವೋ, ಮೋದಿ, ಈ ದೇಶದ ಚುನಾಯಿತ ಪ್ರಧಾನಿ.