ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್!
ನವದೆಹಲಿ, ಮಾರ್ಚ್.24: ಭಾರತಕ್ಕೆ ಭಾರತವೇ ಕೊರೊನಾ ವೈರಸ್ ಭೀತಿಯಿಂದಾಗಿ ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಮುಂದಿನ 21 ದಿನಗಳವರೆಗೂ ಸ್ತಬ್ಧಗೊಳ್ಳಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿ ಮಾತನಾಡಿದ ಪ್ರಧಾನಿ, ಒಂದು ಕುಟುಂಬದಿಂದ ಹಿಡಿದು ಒಂದು ದೇಶವನ್ನು ರಕ್ಷಿಸಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಕರೆ ನೀಡಿದ್ದಾರೆ.
Coronavirus Live: ಮಧ್ಯರಾತ್ರಿಯಿಂದ 21 ದಿನ ಭಾರತ ಲಾಕ್ಡೌನ್
ಮನೆಯಲ್ಲಿರಿ.. ಮನೆಯಲ್ಲಿರಿ.. ಮನೆಯಲ್ಲೇ ಇರಿ. ಇದು ನಾನು ಪ್ರಧಾನಮಂತ್ರಿ ಅಲ್ಲ, ನಿಮ್ಮ ಮನೆಯ ಸದಸ್ಯನಾಗಿ ಹೇಳುತ್ತಿದ್ದೇನೆ ಎಂದ ನರೇಂದ್ರ ಮೋದಿ, ಮಹಾಮಾರಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದಿಂದ 15 ಸಾವಿರ ಕೋಟಿ ರೂಪಾಯಿ ಘೋಷಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು:
- ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಮುಂದಿನ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
- 21 ದಿನಗಳ ಲಾಕ್ ಡೌನ್ ತುಂಬಾ ಸುದೀರ್ಘವಾಗಿದೆ. ಆದರೂ ನಿಮ್ಮ ಕುಟುಂಬ ಮತ್ತು ದೇಶವನ್ನು ರಕ್ಷಿಸುವ ದೃಷ್ಟಿಯಿಂದ ಅತ್ಯವಶ್ಯವಾಗಿದೆ.
- ಮನೆಯಲ್ಲಿರಿ.. ಮನೆಯಲ್ಲಿರಿ.. ಮನೆಯಲ್ಲೇ ಇರಿ. ಇದು ನಾನು ಪ್ರಧಾನಮಂತ್ರಿ ಅಲ್ಲ, ನಿಮ್ಮ ಮನೆಯ ಸದಸ್ಯನಾಗಿ ಹೇಳುತ್ತಿದ್ದೇನೆ ಎಂದು ನರೇಂದ್ರ ಮೋದಿ.
- ಮಹಾಮಾರಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದಿಂದ 15 ಸಾವಿರ ಕೋಟಿ ರೂಪಾಯಿ ಘೋಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
- ವೈದ್ಯರ ಸಲಹೆ ಸೂಚನೆ ಇಲ್ಲದೇ ಯಾವುದೇ ರೀತಿಯ ಔಷಧಿಗಳನ್ನು ಸೇವಿಸಬೇಡಿ ಎಂದು ಪ್ರಜೆಗಳಿಗೆ ಮನವಿ ಮಾಡಿಕೊಂಡ ಪ್ರಧಾನಮಂತ್ರಿ
- ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಮಾಡುವುದಕ್ಕೂ ಆಗುವುದಿಲ್ಲ. ಏಕೆಂದರೆ ನೋಡುವುದಕ್ಕೆ ಅವರು ಅಷ್ಟೊಂದು ಆರೋಗ್ಯವಂತರಾಗಿ ಕಾಣುತ್ತಾರೆ. ಆದರೆ ನಿಮ್ಮೊಡನೆಯೇ ನಿಮ್ಮಂತೆಯೇ ಸೋಂಕಿತರು ಇರುತ್ತಾರೆ. ಇದು ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಅಪಾಯಕಾರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಸಿದರು.
- ಇಟಲಿಯಾಗಲಿ, ಚೀನಾ, ಅಮೆರಿಕಾ ಆಗಲಿ, ಅಲ್ಲಿನ ವೈದ್ಯಕೀಯ ತಂತ್ರಜ್ಞಾನ ಮತ್ತು ವೈದ್ಯಕೀಯ ವ್ಯವಸ್ಥೆ ಇಡೀ ವಿಶ್ವದಲ್ಲೇ ಅತ್ಯಾಧುನಿಕವಾಗಿವೆ. ಹೀಗಿದ್ದರೂ ಆ ದೇಶಗಳಲ್ಲಿ ಸೋಂಕನ್ನು ನಿಯಂತ್ರಿಸಲು ಆಗುತ್ತಿಲ್ಲ.
- ಆ ದೇಶಗಳಲ್ಲಿ ಪ್ರಜೆಗಳು ಸರ್ಕಾರದ ನಿಯಮಗಳನ್ನು ಶೇ.100ರಷ್ಟು ಪಾಲನೆ ಮಾಡುತ್ತಾರೆ. ಹೀಗಾಗಿ ಸಾಂಕ್ರಾಮಿಕ ಸೋಂಕನ್ನು ಒಂದು ಹಂತದವರೆಗೂ ನಿಯಂತ್ರಣಕ್ಕೆ ತಂದಿದ್ದಾರೆ. ನಾವೂ ಕೂಡಾ ಅದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು.
- ಮೊದಲ ಒಂದು ಲಕ್ಷ ಜನರಿಗೆ ಸೋಂಕು ತಗಲುವುದಕ್ಕೆ 67 ದಿನಗಳು ಬೇಕಾಯಿತು. ಈ ಸಂಖ್ಯೆ 2 ಲಕ್ಷ ತಲುಪಲು 11 ದಿನ ಸಾಕಾಯಿತು, ಅಲ್ಲಿಂದ 4 ದಿನಗಳಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷಕ್ಕೆ ಏರಿಕೆಯಾಗಿದೆ. ಇಷ್ಟೊಂದು ವೇಗವಾಗಿ ಸೋಂಕು ಜನರಿಂದ ಜನರಿಗೆ ಹರಡುತ್ತಿದೆ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ನೀಡಿದ ವರದಿ ಬಗ್ಗೆ ಪ್ರಧಾನಿಮಂತ್ರಿ ಉಲ್ಲೇಖಿಸಿದರು.
- ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ನಾವು ನಮ್ಮ ಜವಾಬ್ದಾರಿಯನ್ನು ತೋರಬೇಕಿದೆ. ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ನಮ್ಮ ಕರ್ತವ್ಯವನ್ನು ನಿಭಾಯಿಸಬೇಕಿದೆ ಎಂದು ಪ್ರಧಾನಿ ಕರೆ ನೀಡಿದ್ದಾರೆ.
- ಒಂದು ಜೀವವನ್ನು ಉಳಿಸಲು ವೈದ್ಯರು, ನರ್ಸ್ ಗಳು, ಆಂಬುಲೆನ್ಸ್ ಚಾಲಕರು, ವಾರ್ಡ್ ಬಾಯ್ ಗಳು ಮತ್ತೊಬ್ಬರ ಸೇವೆಗಾಗಿ ಶ್ರಮಿಸುತ್ತಿದ್ದಾರೆ. ಆ ಜನರಿಗಾಗಿ ಪ್ರಾರ್ಥಿಸೋಣ.
- ದೇಶಕ್ಕಾಗಿ 24 ಗಂಟೆಗಳ ಕಾಲ ದುಡಿಯುವ ಮಾಧ್ಯಮ ಪ್ರತಿನಿಧಿಗಳು, ಪೊಲೀಸರು ಶ್ರಮಿಸುತ್ತಿದ್ದು, ಅಂಥವರ ಬಗ್ಗೆಯೂ ಸ್ವಲ್ಪ ಯೋಚಿಸಿರಿ.
- ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸ್ವಯಂಸೇವಕರು ಬಡವರಿಗೋಸ್ಕರ ಅನೇಕರು ಮುಂದೆ ಬರುತ್ತಿದ್ದಾರೆ. ಎಲ್ಲರ ಜೊತೆಗೆ ಸೇರಿಕೊಂಡು ಜೀವನವನ್ನು ಕಾಪಾಡುವ ಅವಶ್ಯಕತೆ ಇದೆ.
- ಕೊರೊನಾ ವೈರಸ್ ಮುಕ್ತ ದೇಶ ನಿರ್ಮಾಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಅಸ್ತ್ರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.