ಕುಲದೀಪ್ ನಯ್ಯರ್ ನಿಧನಕ್ಕೆ ಮೋದಿ, ಗಣ್ಯರ ಸಂತಾಪ
ನವದೆಹಲಿ, ಆಗಸ್ಟ್ 23: ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರ ನಿಧನಕ್ಕೆ ದೇಶದಾದ್ಯಂತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ನಯ್ಯರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ನಯ್ಯರ್ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನೈಯರ್ ಅವರಿಗೆ 95 ವರ್ಷ ವಯಸ್ಸಾಗಿತ್ತು.
ಇಂಡಿಯನ್ ಎಕ್ಸ್ ಪ್ರೆಸ್ ಮಾಜಿ ಸಂಪಾದಕ ಕುಲದೀಪ್ ನೈಯರ್ ನಿಧನ
ಪಂಜಾಬ್ ಮೂಲದ ಕುಲದೀಪ್ ಅವರು, 14 ಕ್ಕೂ ಹೆಚ್ಚು ಭಾಷೆಗಳಲ್ಲಿ 80 ಕ್ಕೂ ಹೆಚ್ಚು ಪತ್ರಿಕೆಗಳ ಸಂಪಾದಕೀಯ ಪುಟಗಳಿಗೆ ಲೇಖನ ಬರೆದ ಹೆಗ್ಗಳಿಕೆ ಗಳಿಸಿದ್ದರು. ತುರ್ತು ಪರಿಸ್ಥಿತಿಯನ್ನು ತೀವ್ರವಾಗಿ ಖಂಡಿಸಿದ್ದ ಅವರು ಆ ಸಮಯದಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು.
15 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ ಕುಲದೀಪ್ ಅವರ ನಿಧನಕ್ಕೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.
|
ಮೋದಿ ಸಂತಾಪ
"ನಮ್ಮ ಕಾಲದ ಒಬ್ಬ ಬುದ್ಧಿವಂತ ದೈತ್ಯ ಪ್ರತಿಭೆಯಲ್ಲಿ ಕುಲದೀಪ್ ನಯ್ಯರ್ ಅವರೂ ಒಬ್ಬರಾಗಿದ್ದರು. ತಮ್ಮ ಅಭಿಪ್ರಾಯಗಳ ಬಗ್ಗೆ ಪ್ರಾಮಾಣಿಕ ಮತ್ತು ನಿರ್ಭೀತರಾಗಿದ್ದ ಅವರು, ಹಲವು ದಶಕಗಳಿಂದ ತಮ್ಮ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ತುರ್ತುಪರಿಸ್ಥಿತಿಯ ವಿರುದ್ಧ ಗಟ್ಟಿಯಾಗಿ ನಿಂತ ಅವರ ನಿಲುವು, ಸಾರ್ವಜನಿಕ ಸೇವೆ ಮತ್ತು ಭಾರತದ ಅಭಿವೃದ್ಧಿಯ ಬಗೆಗಿನ ಕನಸುಗಳನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ಅವರ ನಿಧನದಿಂದ ತೀವ್ರ ನೋವಾಗಿದೆ. ಅವರಿಗೆ ನನ್ನ ಸಂತಾಪಗಳು" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
|
ನಮನ ಸಲ್ಲಿಸಿದ ರಾಮಚಂದ್ರ ಗುಹ
"ಸೈದ್ಧಾಂತಿಕ ನಿಲುವು ಏನೇ ಇದ್ದರೂ, ನಯ್ಯರ್ ಅವರಿಗೆ ಸಹಬಾಳ್ವೆಯ ಬಗೆಗಿದ್ದ ನಂಬಿಕೆ ಮತ್ತು ವೃತ್ತಿಯ ಬಗೆಗಿನ ಸಮರ್ಪಣಾಭಾವ ಎಂದಿಗೂ ಗಮನೀಯ. ತುರ್ತುಪರಿಸ್ಥಿಯ ಸಮಯದಲ್ಲಿ ಅವರು ತೋರಿದ ಧೈರ್ಯವಂತೂ ಎಂದಿಗೂ ಮರೆಯಲಾಗದು" ಎಂದು ಇತಿಹಾಸಜ್ಞ ರಾಮಚಂದ್ರ ಗುಹ ಟ್ವೀಟ್ ಮಾಡಿದ್ದಾರೆ.
|
ಶರದ್ ಯಾದವ್ ರಿಂದ ಶ್ರದ್ಧಾಂಜಲಿ
"ನಾನು ಒಬ್ಬ ಉತ್ತಮ ಮತ್ತು ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರೊಬ್ಬ ದೇಶಭಕ್ತ, ನೇರ ನಡೆಯ ಮಹಾನ್ ಮನುಷ್ಯ. ಜಾತ್ಯಾತೀತತೆಯನ್ನು ಗೆದ್ದ ನಿರ್ಭೀತ ಪತ್ರಿಕೋದ್ಯಮಿ ಅವರು. ಅವರ ನಿಧನದಿಂದ ನನಗೆ ತೀವ್ರ ನೋವಾಗಿದೆ. ನಾವು ಒಬ್ಬ ಲೇಖಕರನ್ನಷ್ಟೇ ಅಲ್ಲ, ಒಬ್ಬ ಮಾರ್ಗದರ್ಶಿಯನ್ನೂ ಕಳೆದುಕೊಂಡಿದ್ದೇವೆ" ಎಂದಿದ್ದಾರೆ ಶರದ್ ಯಾದವ್.
Array |
ವೆಂಕಯ್ಯ ನಾಯ್ಡು ನಮನ
"ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಅವರ ನಿಧನದಿಂದಾಗಿ ಭಾರತ ಒಬ್ಬ ನಿರ್ಭೀತ ಪತ್ರಕರ್ತನನ್ನು ಕಳೆದುಕೊಂಡಿದೆ. ಅವರು ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದಿದ್ದಾರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
|
ಸಾಗರಿಕಾ ಸಂತಾಪ
"ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನೀವು ಎಂದಿಗೂ ನಮ್ಮೆಲ್ಲ ನೈಜ ಸ್ಫೂರ್ತಿ ಸೆಲೆಯಾಗಿ ಬದುಕಿರುತ್ತೀರಿ" ಎಂದಿದ್ದಾರೆ ಹಿರಿಯ ಪತ್ರಕರ್ತೆ ಸಾಗರಿಕಾ ಘೋಶ್.