ಉತ್ತರ ಪ್ರದೇಶದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ
ಮಘರ್, ಜೂನ್ 28: 'ಒಂದು ಕಾಲದಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದವರೇ, ತುರ್ತು ಪರಿಸ್ಥಿತಿ ಹೇರಿದ್ದವರ ಜೊತೆ ಇಂದು ಒಂದಾಗಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳನ್ನು ಲೇವಡಿ ಮಾಡಿದರು.
2019 ರ ಲೋಕಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸುತ್ತಿರುವ ಮೋದಿ, ಇಂದು ಉತ್ತರ ಪ್ರದೇಶದ ಮಘರ್ ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು.
'ಸರ್ಜಿಕಲ್ ಸ್ಟ್ರೈಕ್ ನಿಜ, ಆದರೆ 56 ಇಂಚಿನ ಎದೆ ಇದರ ಲಾಭ ಪಡೆಯಬಾರದು!'
"ಎರಡು ದಿನದ ಹಿಂದೆ ನಾವು ತುರ್ತುಪರಿಸ್ಥಿಯ 43 ನೇ ವರ್ಷವನ್ನು ಕರಾಳದಿನವೆಂದು ಆಚರಿಸಿದ್ದೇವೆ. ಅಧಿಕಾರ ದಾಹದಿಂದ ಅಂದು ತುರ್ತುಪರಿಸ್ಥಿತಿ ಹೇರಿದವರ ಪರವಾಗಿಯೇ ಕೆಲವರು ನಿಂತಿದ್ದಾರೆ. ಅವರೆಲ್ಲ ಒಂದು ಕಾಲದಲ್ಲಿ ತುರ್ತು ಪರಿಸ್ಥಿಯನ್ನು ವಿರೋಧಿಸಿದ್ದವು! ಅವರಿಗೆ ಈ ಸಮಾಜದ ಕಲ್ಯಾಣ ಬೇಕಿಲ್ಲ. ಅವರಿಗೆ ಬೇಕಿರುವುದು ತಮ್ಮ ಮತ್ತು ತಮ್ಮ ಕುಟುಂಬದ ಕಲ್ಯಾಣ ಅಷ್ಟೆ" ಎಂದು ಅವರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಇಲ್ಲಿ ಕೆಲವು ಪಕ್ಷಗಳಿವೆ. ಅವಕ್ಕೆ ನಿಜಕ್ಕೂ ಶಾಂತಿ ಬೇಕಿಲ್ಲ, ಅಭಿವೃದ್ಧಿಬೇಕಿಲ್ಲ. ಬದಲಾಗಿ ಧಂಗೆಗಳು ಬೇಕು! ಧಂಗೆಗಳಾದರೆ ಅವರು ರಾಜಕೀಯವಾಗಿ ಲಾಭ ಪಡೆಯಬಹುದು ಎಂಬುದು ಅವರ ಲೆಕ್ಕಾಚಾರ. ಅಂಥ ಜನರನ್ನು ಬುಡದಲ್ಲೇ ಹೊಸಕಿಹಾಕಬೇಕು(ಪಾಠ ಕಲಿಸಬೇಕು). ಸಂತ ಕಬೀರ, ಮಹಾತ್ಮಾ ಗಾಂಧಿ ಮತ್ತು ಬಾಬಾ ಅಂಬೇಡ್ಕರ್ ಅವರ ಈ ದೇಶದ ಘನತೆ ಅವರಿಗೆ ಗೊತ್ತಿಲ್ಲ" ಎಂದು ಮೋದಿ ಹೇಳಿದರು.
2019 ರ ಲೋಕಸಭಾ ಚುನಾವಣೆ ಎನ್ ಡಿಎ ಪಾಲಿಗೆ ಅತ್ಯಂತ ಮಹತ್ವದ್ದು. ಅದರಲ್ಲೂ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳು(80) ಇರುವುದರಿಂದ ಮೋದಿ ಈಗಿನಿಂದಲೇ ಪ್ರಚಾರಕ್ಕೆ ನಾಂದಿ ಹಾಡಿದ್ದಾರೆ.