ರೈತರ ಖಾತೆಗೆ ಕಾಸು ಹಾಕುವುದು ಯಾವಾಗ ಕೇಂದ್ರ ಸರ್ಕಾರ?; ಇಲ್ಲಿದೆ ಮಾಹಿತಿ
ನವದೆಹಲಿ, ಮೇ 16: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಜಾರಿಗೊಳಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಇದೇ ತಿಂಗಳಿನಲ್ಲಿ 2000 ರೂಪಾಯಿ ಹಣ ಜಮೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದೇಶದ ಅರ್ಹ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ 2000 ರೂಪಾಯಿ ನೆರೆವು ಪಡೆಯುತ್ತಾರೆ. ದೇಶದಾದ್ಯಂತ 12.5 ಕೋಟಿ ರೈತರು ಪಿಎಂ ಕಿಸಾನ್ ನಿಧಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗೆ ಹೆಸರು ನೋಂದಾಯಿಸಿಕೊಂಡಿರುವ ರೈತರ ಬ್ಯಾಂಕ್ ಖಾತೆಗೆ 11ನೇ ಕಂತು ಜಮೆ ಮಾಡಲಾಗುತ್ತದೆ.
ಪಿಎಂ ಕಿಸಾನ್ ಯೋಜನೆಯಡಿ ಕರ್ನಾಟಕದ 34.26 ಲಕ್ಷ ರೈತರ ಖಾತೆಗೆ ತಲಾ 2,000 ರೂಪಾಯಿ
ಕೇಂದ್ರ ಸರ್ಕಾರದಿಂದ 11ನೇ ಕಂತಿನ ಹಣವನ್ನು ಜಮೆ ಮಾಡುವುದಕ್ಕೂ ಪೂರ್ವದಲ್ಲಿ ಇ-ಕೆವೈಸಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಮೊದಲು ಇ-ಕೆವೈಸಿಗೆ ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು, ಆದರೆ ಈಗ ಅದನ್ನು ಮೇ 31ಕ್ಕೆ ವಿಸ್ತರಿಸಲಾಗಿದೆ. ಇ-ಕೆವೈಸಿ ನೋಂದಣಿ ಮಾಡಿಕೊಳ್ಳುವುದು ಹೇಗೆ?, ಕೇಂದ್ರ ಸರ್ಕಾರವು 11ನೇ ಕಂತಿನ ಹಣವನ್ನು ಯಾವಾಗ ಜಮೆ ಮಾಡುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಎಂದರೇನು?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ದೇಶಾದ್ಯಂತ ಬಡತನದ ಅಂಚಿನಲ್ಲಿರುವ ಕೋಟ್ಯಂತರ ಬಡ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯ ಭಾಗವಾಗಿ ಅರ್ಹ ರೈತರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷದಲ್ಲಿ ಒಟ್ಟು 6000 ರೂಪಾಯಿ ಪಡೆದುಕೊಳ್ಳುತ್ತಾರೆ. ಪ್ರತಿ ನಾಲ್ಕು ತಿಂಗಳಗೆ ಒಂದು ಬಾರಿ ಕೇಂದ್ರ ಸರ್ಕಾರದಿಂದಲೇ ರೈತರ ಬ್ಯಾಂಕ್ ಖಾತೆಗೆ 2000 ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ. 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ದೇಶಾದ್ಯಂತ ಕೆಲವು ವಿನಾಯಿತಿಗಳಡಿ ಕೃಷಿಯೋಗ್ಯ ಭೂಮಿಯೊಂದಿಗೆ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲ ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ.
ರೈತರ ಖಾತೆಗೆ ಜಮಾ ಆಗುವುದು ಯಾವಾಗ 11ನೇ ಕಂತು?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರೈತರ ಖಾತೆಗೆ ಹಣ ಜಮಾ ಆಗುವುದು ಕೊಂಚ ತಡವಾಗಿದೆ. ಕಳೆದ ವರ್ಷ ಏಪ್ರಿಲ್-ಜುಲೈ ತಿಂಗಳ ಕಂತು ಮೇ 15ರ ಹೊತ್ತಿಗೆ ಜಮಾ ಆಗಿತ್ತು. ಆದರೆ ಈ ಬಾರಿ ಕಂತಿನ ಮೊತ್ತವು ಮೇ 31ರೊಳಗೆ ರೈತರ ಖಾತೆಗೆ ಜಮಾ ಆಗಬಹುದು ಎಂದು ವರದಿಯಾಗಿದೆ. ಒಂದು ಹಣಕಾಸು ವರ್ಷದಲ್ಲಿ, ಪಿಎಂ ಕಿಸಾನ್ ಕಂತು ಮೂರು ಬಾರಿ ಸಿಗುತ್ತದೆ. ಏಪ್ರಿಲ್ನಿಂದ ಜುಲೈ ವೇಳೆಯಲ್ಲಿ ಮೊದಲ ಕಂತು, ಆಗಸ್ಟ್ನಿಂದ ನವೆಂಬರ್ವರೆಗೆ ಎರಡನೇ ಕಂತು ಹಾಗೂ ಡಿಸೆಂಬರ್ ನಿಂದ ಮಾರ್ಚ್ವರೆಗೆ ಮೂರನೇ ಕಂತಿನ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.
ಅರ್ಹ ರೈತರು ಇ-ಕೆವೈಸಿ ಮಾಡಿಸಲು ಸರ್ಕಾರದ ಆದೇಶ
ದೇಶದಲ್ಲಿ ಮೇ 31ರೊಳಗೆ ಅರ್ಹ ಫಲಾನುಭವಿಗಳಿಗೆ 11ನೇ ಕಂತಿನ ಹಣವನ್ನು ನೀಡಲಾಗುವುದರ ಬಗ್ಗೆ ಕೇಂದ್ರ ಸರ್ಕಾರ ಸುಳಿವು ನೀಡಿದೆ. ಈ ಹಿನ್ನೆಲೆ ಇ-ಕೆವೈಸಿ ನೋಂದಣಿಗೆ ಮೇ 15ರ ಬದಲಿಗೆ ಮೇ 31ರ ಗಡುವು ವಿಧಿಸಲಾಗಿದೆ. ಆದರೆ ಅಷ್ಟರೊಳಗೆ ಇ-ಕೆವೈಸಿ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ರೈತರು ಖಾತೆ ಜೊತೆಗೆ ಇ-ಕೆವೈಸಿ ಮಾಡಿಸುವುದು ಹೇಗೆ?
* ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ ಗೆ ಭೇಟಿ ನೀಡಿ
* ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
* ಫಾರ್ಮರ್ಸ್ ಕಾರ್ನರ್ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ
* ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ
* ಆಧಾರ್ Ekyc ಯ ಪುಟ ತೆರೆಯಲಿದೆ
* ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
* ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು
* ಬಳಿಕ search ಬಟನ್ ಕ್ಲಿಕ್ ಮಾಡಬೇಕು
* ಅದರ ನಂತರ, ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
* ಬಳಿಕ Get OTP ಅನ್ನು ಕ್ಲಿಕ್ ಮಾಡಿ
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ
* ಒಟಿಪಿಯನ್ನು ನಮೂದಿಸಿ, Submit ಮಾಡಿ
* ನೀವು Submit ಬಟನ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ