ರೈತರಿಗೆ ನೆರವು: ರಾಜ್ಯದ ಟ್ರಸ್ಟ್ ಕೊಡುಗೆ ಶ್ಲಾಘಿಸಿದ ಮೋದಿ
Recommended Video
ನವದೆಹಲಿ, ಜೂನ್ 25: ಆಕಾಶವಾಣಿಯಲ್ಲಿ ಭಾನುವಾರ 'ಮನ್ ಕಿ ಬಾತ್'ನ 45ನೇ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕುರಿತು ಮಾತನಾಡುವ ವೇಳೆ ಕೃಷಿ ಕ್ಷೇತ್ರಕ್ಕೆ ಬೆಂಗಳೂರಿನ ಟ್ರಸ್ಟ್ ಒಂದು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡುವ ವಿಚಾರದ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು, ಕೃಷಿ ಕ್ಷೇತ್ರಕ್ಕೆ ರೈತರಷ್ಟೇ ಅಲ್ಲದೆ, ಕೃಷಿ ಕ್ಷೇತ್ರದಿಂದ ಹೊರಗಿರುವವರೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಮನ್ ಕೀ ಬಾತ್: ರಶೀದ್ ಖಾನ್, ಸ್ಕೈಡೈವರ್ ಗಳಿಗೆ ಪ್ರಧಾನಿ ಮೆಚ್ಚುಗೆ
ದೇಶದ ವಿವಿಧ ಭಾಗಗಳಲ್ಲಿ ಅನೇಕ ವ್ಯಕ್ತಿಗಳು, ಸಂಸ್ಥೆಗಳು ಕೃಷಿ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಅಂತಹವುಗಳಲ್ಲಿ ಬೆಂಗಳೂರಿನ 'ಸಹಜ ಸಮೃದ್ಧ ಟ್ರಸ್ಟ್' ಕೂಡ ಒಂದು ಎಂದು ಮೋದಿ ಸ್ಮರಿಸಿದರು.
ಎಂಜಿನಿಯರ್ಗಳು, ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಸೇರಿ ರೈತರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ. ರೈತರು ಒಂದೇ ಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು, ತರಕಾರಿ-ಹೊಸ ತಳಿಗಳನ್ನು ಬೆಳೆಯಲು ಸಹಾಯ ಮಾಡುತ್ತಿದ್ದಾರೆ.
ತಾವೇ ರೈತರ ಬಳಿಗೆ ಹೋಗಿ ಅವರ ಉತ್ಪನ್ನಗಳನ್ನು ಖರೀದಿಸುವ ಜತೆಗೆ, ತಮ್ಮ ಗ್ರಾಹಕರನ್ನು ತಾವೇ ಕಂಡುಕೊಂಡಿದ್ದಾರೆ. ಇದರಿಂದ ರೈತರ ಉತ್ಪನ್ನಗಳು ಮಾರುಕಟ್ಟೆಯನ್ನು ತಲುಪುವುದು ಸುಲಭವಾಗುತ್ತಿದೆ.
ಕಾಲಕಾಲಕ್ಕೆ ಗುಣಮಟ್ಟದ ಬೀಜಗಳನ್ನು ಪೂರೈಸುವ 'ಸೀಡ್ ಬ್ಯಾಂಕ್' ಸ್ಥಾಪಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ಮಹಿಳೆಯರೇ ನಿಭಾಯಿಸುತ್ತಿರುವುದು ವಿಶೇಷ. ಅಲ್ಲದೆ, ರೈತರಿಗೆ ಕೃಷಿ ಕುರಿತು ಈ ಟ್ರಸ್ಟ್ ತರಬೇತಿ ನೀಡುತ್ತಿದೆ ಎಂದು ಮೋದಿ ಹೇಳಿದರು.
ವಿವಿಧ ವಲಯಗಳ ಖ್ಯಾತನಾಮರು ಟ್ರಸ್ಟಿಗಳಾಗಿರುವ ಸಹಜ ಸಮೃದ್ಧ ಟ್ರಸ್ಟ್ ಸುಮಾರು 18 ವರ್ಷಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಾವಯವ ಕೃಷಿ, ಕಿರುಧಾನ್ಯಗಳ ಬೆಳೆಗಳಿಗೆ ಉತ್ತೇಜನ ನೀಡುತ್ತಿರುವ ಟ್ರಸ್ಟ್, ಅವುಗಳನ್ನು ಮಾರುಕಟ್ಟೆಗೆ ತಲುಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ.
ರೈತರಿಗೆ ತರಬೇತಿ ನೀಡುವುದರ ಜತೆಗೆ ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳ ಕೃಷಿ ಕುರಿತು ಅನೇಕ ಕೃತಿಗಳನ್ನು ಹೊರತಂದಿದೆ.