ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ ಹಿಂದೆ ಬಿಜೆಪಿ ಲೆಕ್ಕಾಚಾರ?
ನವದೆಹಲಿ, ನವೆಂಬರ್ 25: ಪಂಚರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಕ್ಷ ತನ್ನದೇ ಆದ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಅದೇ ನಿಟ್ಟಿನಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 2022ರ ಮಾರ್ಚ್ ವರೆಗೂ ವಿಸ್ತರಿಸಲಾಗಿದೆ.
ನವದೆಹಲಿಯಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಯೋಜನೆ ಅವಧಿ ವಿಸ್ತರಣೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕುಟುಂಬ ಪ್ರತಿಯೊಬ್ಬ ಸದಸ್ಯರಿಗೆ 5 ಕೆಜಿ ಆಹಾರ ಧಾನ್ಯವನ್ನು ನೀಡಲಾಗುತ್ತದೆ. ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಘೋಷಿಸಲಾಗಿತ್ತು. ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 2.60 ಲಕ್ಷ ಕೋಟಿ ರೂಪಾಯಿ ಹೊರೆಯಾಗಿತ್ತು.
ದೀಪಾವಳಿವರೆಗೆ 'ಗರೀಬ್ ಕಲ್ಯಾಣ' ಯೋಜನೆ ವಿಸ್ತರಣೆ: ಮೋದಿ
ಕಳೆದ ಡಿಸೆಂಬರ್ 2021 ರಿಂದ ಮಾರ್ಚ್ 2022 ರವರೆಗಿನ ಐದನೇ ಹಂತದಲ್ಲಿ 53,344 ಕೋಟಿ ರೂಪಾಯಿ ಮಾತ್ರ ಖರ್ಚಾಗಿತ್ತು. ಕಳೆದ ಏಪ್ರಿಲ್ 2020ರಲ್ಲಿ ಮೊದಲ ಬಾರಿಗೆ COVID-19 ಪರಿಹಾರ ಪ್ಯಾಕೇಜ್ನಲ್ಲಿ ಯೋಜನೆಯನ್ನು ಆರಂಭಿಸಲಾಗಿದ್ದು, ಈವರೆಗೂ ಮೂರು ಬಾರಿ ವಿಸ್ತರಿಸಲಾಗಿತ್ತು. ಅದರಂತೆ ನವೆಂಬರ್ನಲ್ಲಿ ಯೋಜನೆಯನ್ನು ಮುಕ್ತಾಯಗೊಳಿಸಲು ಈ ಮೊದಲು ನಿರ್ಧರಿಸಲಾಗಿತ್ತು.
ಮಾರ್ಚ್ ತಿಂಗಳವರೆಗೂ ಯೋಜನೆ ವಿಸ್ತರಣೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಯ ಮಧ್ಯ ಬಡ ಕುಟುಂಬಗಳಿಗೆ ಇನ್ನೂ ಆಹಾರ ಭದ್ರತೆಯ ಬೆಂಬಲದ ಅಗತ್ಯವಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ತನ್ನ ಉಚಿತ ಪಡಿತರ ಯೋಜನೆಯಾದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅನ್ನು ಇನ್ನೂ ನಾಲ್ಕು ತಿಂಗಳವರೆಗೆ ಮಾರ್ಚ್ 2022 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. 80 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಸಬ್ಸಿಡಿ ಆಧಾರದ ಮೇಲೆ ಐದು ಕೆಜಿ ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಜೊತೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ಅಥವಾ ಗೋಧಿಯನ್ನು ನೀಡಲು ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ಆಹಾರ ಪೂರೈಕೆಗೆ ಒತ್ತು ನೀಡುವ ಬಗ್ಗೆ ಸಚಿವರ ಸ್ಪಷ್ಟನೆ
"ಕಳೆದ 20 ತಿಂಗಳ ಅವಧಿಯಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಊಟವಿಲ್ಲದೇ ಬಳಲುತ್ತಿರುವುದನ್ನು ನಾವು ಕಂಡಿದ್ದೇವೆ. ಅದು ಕೇವಲ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಜಾಗತಿಕ ಮಟ್ಟದಲ್ಲೂ ಸಹ ಅಂಥದ್ದೇ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ. ಬಡ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಅವರಿಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ," ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ದೇಶದ ಆರ್ಥಿಕತೆಯು ಮತ್ತೆ ಹಳಿಗೆ ಮರಳಿರುವಂತೆ ಕಂಡು ಬರುತ್ತಿದೆ. ಇದೇ ವೇಳೆ COVID-19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ಬಯಸುತ್ತಾರೆ. ಆದ್ದರಿಂದ ಮುಂದಿನ ನಾಲ್ಕು ತಿಂಗಳವರೆಗೆ ಅಂಥವರಿಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ," ಎಂದು ಸಚಿವರು ಹೇಳಿದ್ದಾರೆ.
PMGKAY ವಿಸ್ತರಣೆ ಏಕಪಕ್ಷೀಯ ನಿರ್ಧಾರವಲ್ಲ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ವಿಸ್ತರಿಸುವಂತೆ ಹಲವು ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಆಹಾರ ಸಚಿವಾಲಯ ಈ ವಿಷಯದಲ್ಲಿ ನೇರವಾಗಿ ಯಾವುದೇ ಮನವಿ ಅನ್ನು ಸ್ವೀಕರಿಸಿಲ್ಲ. ಈ ಯೋಜನೆಯನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯೊಂದನ್ನೇ ಗಮನದಲ್ಲಿಟ್ಟುಕೊಂಡು ವಿಸ್ತರಿಸಿಲ್ಲ ಎಂದು ಹೇಳಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ಐದನೇ ಹಂತದಲ್ಲಿದ್ದು, ಡಿಸೆಂಬರ್ 2021 ರಿಂದ ಮಾರ್ಚ್ 2022 ರವರೆಗೆ ಅಂದಾಜು 53,345 ಕೋಟಿ ರೂಪಾಯಿ ಸಬ್ಸಿಡಿ ಒಳಗೊಂಡಿರುತ್ತದೆ. ಒಟ್ಟು 163 ಲಕ್ಷ ಟನ್ ಧಾನ್ಯವನ್ನು ನೀಡಲಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇನ್ನು ಮೊದಲ ನಾಲ್ಕು ಹಂತಗಳಲ್ಲಿ ಈಗಾಗಲೇ ಸುಮಾರು 600 ಲಕ್ಷ ಟನ್ಗಳಷ್ಟು ಧಾನ್ಯವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದ್ದು, ಸುಮಾರು 2.07 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಿದೆ.
ಇಂಧನ ಬೆಲೆ ಇಳಿಕೆಗೆ ಉಪ ಚುನಾವಣೆ ಪರೋಕ್ಷ ಕಾರಣ?
ದೇಶದಲ್ಲಿ ಮುಂಬರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗಳ ಮೇಲೆ ಭಾರತೀಯ ಜನತಾ ಪಕ್ಷ ಕಣ್ಣಿಟ್ಟಿದೆ. ಇದರ ನಡುವೆ ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶದಿಂದ ಬಿಜೆಪಿಗೆ ದೊಡ್ಡ ಪೆಟ್ಟು ಬಿದ್ದಿದೆ. ಮಧ್ಯಪ್ರದೇಶ ಹೊರತುಪಡಿಸಿ ದೊಡ್ಡ ಉಪಚುನಾವಣೆಯಲ್ಲಿ ಬಿಜೆಪಿಯು ತೀವ್ರ ಮುಖಭಂಗ ಅನುಭವಿಸಿತು. ಉಪ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕೇಂದ್ರ ಸರ್ಕಾರ ಹಲವು ಮಹತ್ವದ ಘೋಷಣೆಗಳನ್ನು ಹೊರಡಿಸಿತು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದ್ದು, ಮೊದಲನೇ ಪ್ರಮುಖ ಹೆಜ್ಜೆಯಾಗಿತ್ತು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಮೂರು ಕಾಯ್ದೆಗಳನ್ನು ರದ್ದುಗೊಳಿಸುವ ಒಂದು ಮಸೂದೆಗೆ ಅಂಗೀಕಾರವನ್ನು ಪಡೆದುಕೊಳ್ಳಲಾಯಿತು.
ಪಂಚರಾಜ್ಯ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ
2022ರ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲಿದೆ. ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ನಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಜ್ಜಾಗಿ ನಿಂತಿದೆ. ಈ ಪಂಚರಾಜ್ಯ ಚುನಾವಣೆಗಳ ಪೈಕಿ ಬಲು ನಿರ್ಣಾಯಕ ಎನಿಸಿರುವ ಉತ್ತರ ಪ್ರದೇಶದಲ್ಲಿ ಬಹುಕೋನ ಸ್ಪರ್ಧೆ ನಡೆಯುವ ಸಾಧ್ಯತೆಗಳಿವೆ.
Recommended Video