'ಪ್ರಗ್ಯಾ ವಿಚಾರದಲ್ಲಿ ಪಿಎಂ ಮನಸ್ಸು ಬದಲಾಯಿಸಿದ್ದಾರೆಯೇ?' - ಕಾಂಗ್ರೆಸ್ ಟೀಕೆ
ನವದೆಹಲಿ, ಜೂ. 18: ಸೋಮವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಸಂಸದರೊಂದಿಗೆ ನಡೆಸಲಿರುವ ಆನ್ಲೈನ್ ಯೋಗ ಅಧಿವೇಶನವು ವಿರೋಧ ಪಕ್ಷದ ಕಾಂಗ್ರೆಸ್ನಿಂದ ತೀವ್ರ ಟೀಕೆಗೆ ಒಳಗಾಗಿದೆ. ಈ ವಿವಾದಾತ್ಮಕ ಸಂಸದೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ "ಮನಸ್ಸು ಬದಲಾಯಿಸಿದ್ದಾರೆಯೇ" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕೊರೊನಾ ಕಾರಣದಿಂದಾಗಿ ಸಂಸದರಿಗಾಗಿ ನಾಲ್ಕು ಆನ್ಲೈನ್ ಅಧಿವೇಶನಗಳನ್ನು ಲೋಕಸಭೆ ಆಯೋಜಿಸಿದ್ದು ಈ ಪೈಕಿ ಒಂದು ಅಧಿವೇಶನದಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಮಾತನಾಡಲಿದ್ದಾರೆ. ಇದರ ವೇಳಾಪಟ್ಟಿಯನ್ನು ನಿನ್ನೆ ಎಲ್ಲಾ ಸಂಸದರಿಗೆ ಕಳುಹಿಸಲಾಗಿದೆ.
ನಾನು ದಿನಾ ಗಂಜಲ ಕುಡಿಯುತ್ತೇನೆ. ಹೀಗಾಗೇ ಕೊರೊನಾ ಬಂದಿಲ್ಲ; ಪ್ರಗ್ಯಾ ಸಿಂಗ್
ಈ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, "ಪ್ರಗ್ಯಾ ಸಿಂಗ್ ಠಾಕೂರ್ ವಿಚಾರದಲ್ಲಿ ಮೋದಿ ಸಾಹೀಬರು ಹೃದಯವನ್ನು ಬದಲಾಯಿಸಿದ್ದೀರಾ? ಯೋಗ ದಿನದಂದು ಪ್ರಧಾನ ಮಂತ್ರಿಯ ಯೋಜನೆಯಲ್ಲಿ ಈಗ ಎಲ್ಲಾ ಸಂಸದರಿಗೆ ಮುಖ್ಯ ಅತಿಥಿಯಾಗಲಿದ್ದಾರೆ. ಇದು ಹೃದಯದಿಂದ ಕ್ಷಮಿಸಲಾಗಿದೆ ಎಂಬುದನ್ನು ತೋರಿಸುತ್ತದೆ," ಎಂದಿದ್ದಾರೆ. ಹಾಗೆಯೇ ಇದರೊಂದಿಗೆ ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ "ದೇಶಭಕ್ತ" ಎಂದು ಹೇಳಿದ್ದ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿಕೆಯನ್ನು ಖಂಡಿಸಿ 2019 ರಲ್ಲಿ ಪ್ರಧಾನಿ ಮೋದಿ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.
2019 ರಲ್ಲಿ ಗಾಂಧಿಯ ಕೊಲೆಗಾರನನ್ನು ಹೊಗಳಿದ ಬಿಜೆಪಿ ನಾಯಕಿಯ ಬಗ್ಗೆ ಪಿಎಂ ಮೋದಿಯ ಬಳಿ ವರದಿಗಾರರು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೋದಿ, "ಗಾಂಧಿ ಮತ್ತು ಗೋಡ್ಸೆ ಬಗ್ಗೆ ಪ್ರಗ್ಯಾ ಸಿಂಗ್ ಠಾಕೂರ್ ನೀಡಿದ ಹೇಳಿಕೆಗಳು ಭಯಾನಕ, ತಿರಸ್ಕಾರಾರ್ಹ, ಖಂಡನೀಯ. ಈ ರೀತಿಯ ಮನಸ್ಥಿತಿಯು ಸುಸಂಸ್ಕೃತ ಸಮಾಜಕ್ಕೆ ಒಳ್ಳೆಯದಲ್ಲ. ಈ ರೀತಿ ಹೇಳಿಕೆ ನೀಡುವವರು ಭವಿಷ್ಯದಲ್ಲಿ 100 ಬಾರಿ ಯೋಚಿಸಬೇಕಾಗುತ್ತದೆ. ಈ ಬಗ್ಗೆ ಪ್ರಗ್ಯಾ ಕ್ಷಮೆಯಾಚಿಸಿದ್ದಾರೆ, ಅದು ಉತ್ತಮ. ಆದರೆ ನಾನು ಪ್ರಗ್ಯಾಳನ್ನು ನನ್ನ ಹೃದಯದಿಂದ ಕ್ಷಮಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದರು.
ಪ್ರಗ್ಯಾ ಸಿಂಗ್ ಠಾಕೂರ್ ಭೋಪಾಲ್ನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ರನ್ನು ಸೋಲಿಸಿ ಚುನಾವಣೆಯಲ್ಲಿ ಜಯಗಳಿಸಿದರು. ಅಂದಿನಿಂದ ಪ್ರಗ್ಯಾ ಸಿಂಗ್ ಹಲವಾರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಲ್ಲೇ ಬಂದಿದ್ದಾರೆ. ಈ ಪೈಕಿ ಪ್ರಗ್ಯಾ ಸಿಂಗ್ ಠಾಕೂರ್ ಗೋಡ್ಸೆ ಬಗ್ಗೆ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಹಾಗೂ ಟೀಕೆಗೆ ಕಾರಣವಾಗಿತ್ತು.
ಪ್ರಗ್ಯಾ ಸಿಂಗ್ಗೆ ಉಸಿರಾಟ ಸಮಸ್ಯೆ; ಏರ್ಲಿಫ್ಟ್ ಮೂಲಕ ಮುಂಬೈ ಆಸ್ಪತ್ರೆಗೆ ದಾಖಲು
2008 ರ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಉತ್ತರ ಮಹಾರಾಷ್ಟ್ರದ ಮುಂಬೈಯಿಂದ 200 ಕಿ.ಮೀ ದೂರದಲ್ಲಿರುವ ಮಾಲೆಗಾಂವ್ ಎಂಬ ಪಟ್ಟಣದ ಮಸೀದಿಯ ಬಳಿ ಮೋಟಾರ್ ಸೈಕಲ್ನಲ್ಲಿ ಸ್ಫೋಟಕ ಸಾಧನವೊಂದು ಸ್ಫೋಟಗೊಂಡ ಸಂದರ್ಭ ಆರು ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಪ್ರಕರಣದ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗುವುದನ್ನು ಪ್ರಗ್ಯಾ ನಿಲ್ಲಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)