ದೇಶಾದ್ಯಂತ ಆಕ್ಸಿಜನ್ ಲಭ್ಯತೆ ಪರಿಶೀಲನೆಗೆ ಸಭೆ ನಡೆಸಿದ ಪ್ರಧಾನಿ ಮೋದಿ
ನವದೆಹಲಿ, ಜು.09: ಭಾರತದಾದ್ಯಂತ 1,500 ಕ್ಕೂ ಹೆಚ್ಚು ಆಮ್ಲಜನಕ ಸ್ಥಾವರಗಳ ನಿರ್ಮಾಣದ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಆಕ್ಸಿಜನ್ ಲಭ್ಯತೆ ಪರಿಶೀಲಿಸಲು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಅನಿಲದ ಹೆಚ್ಚಳ ಮತ್ತು ಲಭ್ಯತೆಯ ಪ್ರಗತಿಯನ್ನು ಪರಿಶೀಲಿಸಿದ್ದಾರೆ.
''ಶುಕ್ರವಾರ ನಡೆದ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಧಿಕಾರಿಗಳು ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್ಎ) ಆಕ್ಸಿಜನ್ ಪ್ಲಾಂಟ್ಗಳ ಸ್ಥಾಪನೆಯ ಪ್ರಗತಿಯ ಬಗ್ಗೆ ವಿವರಿಸಿದ್ದಾರೆ,'' ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಚಾಮರಾಜನಗರ ಆಕ್ಸಿಜನ್ ದುರಂತ: ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ
"ಪಿಎಂ ಕೇರ್ಸ್ ಅಡಿ ಬರುವ ಆಕ್ಸಿಜನ್ ಸ್ಥಾವರಗಳು ಕಾರ್ಯ ನಿರ್ವಹಿಸಲು ಆರಂಭಿಸಿದ ಬಳಿಕ ನಾಲ್ಕು ಲಕ್ಷಕ್ಕೂ ಹೆಚ್ಚು ಹಾಸಿಗೆಗಳಿಗೆ ಆಕ್ಸಿಜನ್ ಬೆಂಬಲ ನೀಡಬಹುದಾಗಿದೆ" ಎಂದು ಎಂದು ಪ್ರಧಾನಿಗೆ ತಿಳಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಈ ಆಮ್ಲಜನಕ ಸ್ಥಾವರಗಳ ನಿರ್ಮಾಣ ಕಾರ್ಯ ಶೀಘ್ರ ಮಾಡುವಂತೆ ಹಾಗೂ ಅದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಮ್ಲಜನಕ ಸ್ಥಾವರಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಆಸ್ಪತ್ರೆಯ ಸಿಬ್ಬಂದಿಗೆ ಸಮರ್ಪಕ ತರಬೇತಿ ನೀಡುವಂತೆ ಪ್ರಧಾನಿ ಇಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ತರಬೇತಿ ಪಡೆದ ಸಿಬ್ಬಂದಿಗಳು ಲಭ್ಯವಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.
ಚಾಮರಾಜನಗರ: ಆಕ್ಸಿಜೆನ್ ದುರಂತದ ಸಂಪೂರ್ಣ ಚಿತ್ರಣ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್!
ತಜ್ಞರು ಸಿದ್ಧಪಡಿಸಿದ ತರಬೇತಿ ಮಾಡ್ಯೂಲ್ ಇದೆ. "ದೇಶಾದ್ಯಂತ ಸುಮಾರು 8000 ಜನರಿಗೆ ತರಬೇತಿ ನೀಡಲು ಸಿದ್ದರಾಗಿದ್ದಾರೆ" ಎಂದು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು.
23,123 ಕೋಟಿ ರು. ಕೋವಿಡ್ -19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಪೂರ್ವಸಿದ್ಧತೆ ಪ್ಯಾಕೇಜ್ ಹಂತ II ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಒಂದು ದಿನದ ನಂತರ ಸಭೆ ನಡೆಯಿತು.
ವೈದ್ಯಕೀಯ ಅನಿಲ ಪೈಪ್ಲೈನ್ ವ್ಯವಸ್ಥೆಯೊಂದಿಗೆ 1,050 ದ್ರವ ವೈದ್ಯಕೀಯ ಆಮ್ಲಜನಕ ಸಂಗ್ರಹ ಟ್ಯಾಂಕ್ಗಳನ್ನು ಸ್ಥಾಪಿಸಲು ಈ ಸ್ಥಾವರ ಅವಕಾಶ ಹೊಂದಿದೆ. ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ಘಟಕವನ್ನಾದರೂ ಸ್ಥಾಪಿಸುವ ಗುರಿ ಹೊಂದಿದೆ.
ಈ ಎರಡನೇ ಕೊರೊನಾ ಅಲೆ ಆರಂಭದಲ್ಲಿ ದೇಶದಾದ್ಯಂತ ಆಮ್ಲಜನಕದ ಕೊರತೆ ಉಂಟಾಗಿ, ಅದೇಷ್ಟೋ ಜನ ಸಾವನ್ನಪ್ಪಿದ್ದಾರೆ. ಬಿಕ್ಕಟ್ಟು ಉತ್ತುಂಗಕ್ಕೆ ಏರಿದಾಗ ಭಾರತ ಹಲವಾರು ದೇಶಗಳಿಂದ ನೆರವು ರೂಪದಲ್ಲಿ ಆಮ್ಲಜನಕವನ್ನು ಪಡೆಯಬೇಕಾಯಿತು.
(ಒನ್ಇಂಡಿಯಾ ಸುದ್ದಿ)