"ಪ್ರಧಾನಿ ಮೋದಿ ಹೇಡಿಯಂತೆ ವರ್ತಿಸಿದ್ದಾರೆ" - ಪ್ರಿಯಾಂಕಾ ಗಾಂಧಿ ಟೀಕೆ
ನವದೆಹಲಿ, ಜೂ.12: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ವಿಚಾರದಲ್ಲಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೀವ್ರ ದಾಳಿ ನಡೆಸಿದ್ದಾರೆ. "ಪ್ರಧಾನಿ ಮೋದಿ ಹೇಡಿಯಂತೆ ವರ್ತಿಸಿದ್ದಾರೆ" ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ಸರ್ಕಾರದ ಪ್ರಶ್ನೆಗಳನ್ನು ಕೇಳುತ್ತಿರುವ ಕಾಂಗ್ರೆಸ್ನ "ಜಿಮ್ಮೆದಾರ್ ಕೌನ್ (ಯಾರು ಜವಾಬ್ದಾರರು)" ಅಭಿಯಾನದ ಭಾಗವಾಗಿ, ಪ್ರಿಯಾಂಕ ಗಾಂಧಿ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿರ್ವಹಣೆಯಲ್ಲಿ "ಆಡಳಿತದಲ್ಲಿ ಅಸಮರ್ಥತೆ"ಯನ್ನು ತೋರಿದೆ ಎಂದು ಬೊಟ್ಟು ಮಾಡಿದ್ದಾರೆ.
'ಕೋವಿಡ್ ಸಂದರ್ಭ ವೈದ್ಯಕೀಯ ಉತ್ಪನ್ನಗಳ ಮೇಲಿನ ಜಿಎಸ್ಟಿ ರದ್ದು ಮಾಡಿ' - ಪ್ರಿಯಾಂಕ ಆಗ್ರಹ
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಭಾರತದ ಪ್ರಧಾನಿ ಹೇಡಿಗಳಂತೆ ವರ್ತಿಸಿದ್ದಾರೆ. ಮೋದಿ ನಮ್ಮ ದೇಶವನ್ನು ನಿರಾಸೆಗೊಳಿಸಿದ್ದಾರೆ. ಪ್ರಧಾನಿ ಮೋದಿ ಭಾರತೀಯರು ಮೊದಲಲ್ಲಿ ಬರುವುದಿಲ್ಲ. ಮೋದಿ ಬರೀ ರಾಜಕೀಯ ಮಾಡುತ್ತಾರೆ. ಸತ್ಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮೋದಿ ವರ್ತಿಸುತ್ತಾರೆ. ಬರೀ ಪ್ರಚಾರ ಮಾಡುತ್ತಾರೆ" ಎಂದು ದೂರಿದ್ದಾರೆ. ಹಾಗೆಯೇ "ಈಗ ನಾವು ಪ್ರಧಾನಿ ಮೋದಿಯನ್ನು ಪ್ರಶ್ನಿಸುವ ಸಮಯ ಬಂದಿದೆ, ಇದಕ್ಕೆ ಯಾರು ಜವಾಬ್ದಾರರು?" ಎಂದು ಪ್ರಶ್ನಿಸಿದ್ದಾರೆ.
"ಮೋದಿ ಸರ್ಕಾರವು ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಈವರೆಗೂ ಸರಿಯಾಗಿ ಪರಿಸ್ಥಿತಿ ನಿಭಾಯಿಸಿಲ್ಲ. ಸರ್ಕಾರ ಬರೀ ಸತ್ಯವನ್ನು ಮರೆಮಾಡಲು ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನವನ್ನು ಮಾತ್ರ ಮಾಡಿದೆ" ಎಂದು ಆರೋಪಿಸಿದರು.
The Prime Minister of India has behaved like a coward. He has let our country down.
— Priyanka Gandhi Vadra (@priyankagandhi) June 12, 2021
Indians do not come first for him. Politics does.
Truth does not concern him, propaganda does.
The time has come for us to ask him: ZIMMEDAAR KAUN?#ZimmedarKaun pic.twitter.com/GE1SFHijVp
"ಸರ್ಕಾರದ ಈ ಕೆಟ್ಟ ನಿರ್ವಹಣೆಯಿಂದಾಗಿ ಎರಡನೇ ಕೊರೊನಾ ಅಲೆಯು ದೇಶಕ್ಕೆ ಅಪ್ಪಳಿಸಿತು. ಆದರೆ ಆ ಸಂದರ್ಭದಲ್ಲಿ ಸರ್ಕಾರ ನಿಷ್ಕ್ರಿಯವಾಯಿತು. ಸರ್ಕಾರದ ಈ ನಿಷ್ಕ್ರಿಯತೆ ವೈರಸ್ ಮತ್ತಷ್ಟು ತೀವ್ರವಾಗಿ ಹೆಚ್ಚಲು ದಾರಿ ಮಾಡಿಕೊಟ್ಟಿತು. ಹೇಳಲಾಗದ ದುಃಖಕ್ಕೆ ಕಾರಣವಾಯಿತು" ಎಂದು ಸರ್ಕಾರದ ವಿರುದ್ದ ಗುಡುಗಿದ್ದಾರೆ.
ಇನ್ನು ಕೋವಿಡ್ ಹರಡುವಿಕೆಯ ಹಿನ್ನೆಲೆಯಲ್ಲಿ ಪ್ರಧಾನಿ ಕೈಗೊಳ್ಳಬೇಕಾದ ಕ್ರಮಗಳ ಪಟ್ಟಿಯನ್ನೂ ಪ್ರಿಯಾಂಕಾ ಗಾಂಧಿ ಮಾಡಿದ್ದಾರೆ. "ಭಾರತ ಮತ್ತು ಪ್ರಪಂಚದಾದ್ಯಂತದ ತಜ್ಞರು ನೀಡಿದ ಅಸಂಖ್ಯಾತ ಎಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಂಡು ಪ್ರಧಾನಿ ನಡೆದುಕೊಂಡಿದ್ದರೆ, ತಮ್ಮದೇ ಆದ 'ಸಶಕ್ತ ಗುಂಪಿನ' ಶಿಫಾರಸುಗಳನ್ನು ಆಲಿಸಿದ್ದರೆ, ದೇಶದಲ್ಲಿ ನಮಗೆ ಬೆಡ್, ಆಮ್ಲಜನಕ ಮತ್ತು ಔಷಧಿಗಳ ಭಾರೀ ಕೊರತೆ ಆಗುತ್ತಿರಲಿಲ್ಲ ಎಂದು ಗಾಂಧಿ ಅಭಿಪ್ರಾಯಿಸಿದ್ದಾರೆ.
ಇನ್ನು ಲಸಿಕೆ ವಿಚಾರದಲ್ಲಿ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ ಗಾಂಧಿ, "ನಮ್ಮ ಭಾರತೀಯರಿಗೆ ಲಸಿಕೆ ಕೊರತೆ ಆಗುತ್ತದೆಯೇ ಎಂಬ ಲೆಕ್ಕಾಚಾರವನ್ನು ಮಾಡಿಕೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಲಸಿಕೆ, ಔಷಧಿಗಳನ್ನು ರಫ್ತು ಮಾಡಿದ್ದಾರೆ. ಪ್ರಧಾನ ಮಂತ್ರಿ ತಮ್ಮದೇ ಆದ ಇಮೇಜ್ ಬಿಲ್ಡ್ ಮಾಡುವುದೇ ದೊಡ್ಡದಾಗಿದೆ. ಅದರ ಬದಲಾಗಿ ಮೋದಿ ಭಾರತದ ಜನರಿಗೆ ಆದ್ಯತೆ ನೀಡಿದ್ದರೆ, ನಮ್ಮಲ್ಲಿ ಇಂದು ಲಸಿಕೆಗಳ ಕೊರತೆ ಇರುತ್ತಿರಲಿಲ್ಲ" ಎಂದು ಹೇಳಿದರು.
ಕೊರೊನಾ ಅಂಕಿಅಂಶಗಳನ್ನು ಮುಚ್ಚಿಡಲಾಗುತ್ತಿದೆ: ಪ್ರಿಯಾಂಕಾ ಗಾಂಧಿ ಟೀಕೆ
"ಈಗ ಪ್ರಧಾನಿ ಮೋದಿ ನಿದ್ರೆಯಿಂದ ಎಚ್ಚರಗೊಂಡಿದ್ದು 2021 ರ ಬೇಸಿಗೆಯಲ್ಲಿ ಲಸಿಕೆಯನ್ನು ಘೋಷಿಸುವ ಬದಲಾಗಿ, 2020 ರ ಬೇಸಿಗೆಯಲ್ಲಿ ಘೋಷಿಸಿದ್ದರೆ ಈಗ ಅಸಂಖ್ಯಾತ ಜೀವಗಳನ್ನು ಉಳಿಸಬಹುದಿತ್ತು" ಎಂದಿದ್ದಾರೆ.
ಇನ್ನು "ಪ್ರಧಾನಿ ಮೋದಿ ಟಿವಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಬದಲು ಕೊರೊನಾ ನಿರ್ವಹಣೆಯಲ್ಲಿ ತನ್ನ ಪ್ರಯತ್ನವನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕು" ಎಂದು ಟಾಂಗ್ ನೀಡಿದ ಪ್ರಿಯಾಂಕ ಗಾಂಧಿ, "ತನ್ನದೇ ಆದ ಜವಾಬ್ದಾರಿಗಳನ್ನು ತ್ಯಜಿಸುವ ಪ್ರಯತ್ನದಲ್ಲಿ ಪ್ರಧಾನಿ ಮೋದಿ ಇದ್ದಾರೆ" ಎಂದು ಆರೋಪಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)