ಕಾಂಗ್ರೆಸ್ ನಾಯಕನ ಮಾತು ಕೇಳಿ ನಿಜಕ್ಕೂ ಆಶ್ಚರ್ಯವಾಯಿತು; ಮೋದಿ
ಪುದುಚೇರಿ, ಫೆಬ್ರವರಿ 25: ಬುಧವಾರ ಕೇರಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನುಗಾರಿಕೆಗೆ ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ ರಚನೆ ಕುರಿತು ಮಾತನಾಡಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ 2019ರಲ್ಲೇ ಮೀನುಗಾರಿಕೆಗೆ ಸಚಿವಾಲಯ ರೂಪಿಸಲಾಗಿದೆ. ಆದರೆ ಪಕ್ಷದ ಮುಖ್ಯಸ್ಥನಾದವನಿಗೆ ಈ ವಿಷಯ ತಿಳಿದಿಲ್ಲ ಎಂಬುದೇ ಆಶ್ಚರ್ಯವೆನಿಸುತ್ತಿದೆ ಎಂದಿದ್ದಾರೆ.
"ಖಾಲಿ ಬಲೆಯೊಂದಿಗೆ ವಾಪಸ್ಸಾಗುವ ನಿಮ್ಮ ನಿರಾಸೆ ಈಗ ಅರ್ಥವಾಯ್ತು"
ಪುದುಚೆರಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದು, ಈ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ರೂಪಿಸುವ ಕುರಿತು ಕಾಂಗ್ರೆಸ್ ನಾಯಕರು ಮಾತನಾಡಿರುವುದು ನನಗೆ ನಿಜಕ್ಕೂ ಆಶ್ಚರ್ಯ ತಂದಿದೆ. ನಿಜ ಏನೆಂದರೆ, ಈಗಾಗಲೇ ಮೀನುಗಾರಿಕೆಗೆ ಸಚಿವಾಲಯ ಇದೆ. 2019ರಲ್ಲಿಯೇ ಎನ್ಡಿಎ ಸರ್ಕಾರ ಮೀನುಗಾರಿಕೆಗೆ ಸಚಿವಾಲಯ ರಚನೆ ಮಾಡಿತ್ತು" ಎಂದು ಹೇಳಿದ್ದಾರೆ.
ನಮ್ಮ ವಸಾಹತುಶಾಹಿ ಆಡಳಿತ, ವಿಭಜಿಸಿ ಆಡಳಿತ ನಡೆಸುವ ನೀತಿಯನ್ನು ಪಾಲಿಸಬಹುದು. ಆದರೆ ಕಾಂಗ್ರೆಸ್ನದ್ದು ವಿಭಜಿಸಿ, ಸುಳ್ಳು ಹೇಳಿ ಆಡಳಿತ ನಡೆಸುವ ನೀತಿಯಾಗಿದೆ. ಕೆಲವೊಮ್ಮೆ ಕಾಂಗ್ರೆಸ್ನ ನಾಯಕರು ಪ್ರದೇಶದ ವಿರುದ್ಧ ಪ್ರದೇಶವನ್ನು, ಜನಾಂಗದ ವಿರುದ್ಧ ಜನಾಂಗವನ್ನು ಎತ್ತಿಕಟ್ಟುತ್ತಾರೆ ಎಂದು ದೂರಿದರು.
ಬುಧವಾರ ಕೇರಳಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಮೀನುಗಾರರೊಂದಿಗೆ ಕೆಲ ಕಾಲ ಸಂವಾದ ನಡೆಸಿದ್ದರು. ಈ ಸಂದರ್ಭ ಮಾತನಾಡಿದ್ದ ಅವರು, ಕೇಂದ್ರದಲ್ಲಿ ಮೀನುಗಾರಿಕೆಗೆಂದೇ ಪ್ರತ್ಯೇಕ ಸಚಿವಾಲಯ ರೂಪಿಸಬೇಕಿದೆ. ಹಾಗಾದಾಗ ಮೀನುಗಾರ ಸಮುದಾಯದ ಕಷ್ಟಗಳು ಗೊತ್ತಾಗುತ್ತದೆ. ಈ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯಬೇಕಿದೆ. ಅವರಿಗೆಂದೇ ಪ್ರತ್ಯೇಕ ಪ್ರಣಾಳಿಕೆಯನ್ನು ನಾವು ಸಿದ್ಧಪಡಿಸುತ್ತೇವೆ ಎಂದು ಹೇಳಿದ್ದರು. ರೈತರು ಭೂಮಿಯಲ್ಲಿ ಊಳುವಂತೆ, ನೀವು ಸಮುದ್ರದಲ್ಲಿ ಕೆಲಸ ಮಾಡುತ್ತೀರಿ. ರೈತರಿಗೆ ಪ್ರತ್ಯೇಕ ಸಚಿವಾಲಯವಿದೆ, ಆದರೆ ನಿಮಗಿಲ್ಲ. ಈ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ಜೊತೆಗೆ ತಮ್ಮ ಈಗಿನ ಲೋಕಸಭಾ ಕ್ಷೇತ್ರ ಕೇರಳದ ವಯನಾಡನ್ನು ಹಿಂದಿನ ಲೋಕಸಭಾ ಕ್ಷೇತ್ರ ಅಮೇಥಿಗೆ ಹೋಲಿಸಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿ, ರಾಹುಲ್ ಅವರದು ವಿಭಜನೆಯ ಮನಸ್ಥಿತಿ ಎಂದು ಟೀಕಿಸಿದ್ದರು. ಉತ್ತರ-ದಕ್ಷಿಣವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಅವಕಾಶವಾದಿ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.