'ಪಿಕೆ ಯೋಜನೆಯಲ್ಲಿ ನಾಯಕತ್ವ ವಿಚಾರ ಇಲ್ಲ, ಅಂಕಿ-ಅಂಶಗಳೇ ಎಲ್ಲ'
ನವದೆಹಲಿ, ಏ. 28: ಕಾಂಗ್ರೆಸ್ ಪುನಶ್ಚೇತನಕ್ಕೆ ಪ್ರಶಾಂತ್ ಕಿಶೋರ್ ಕೊಟ್ಟ ಸಲಹೆಗಳ ಬಗ್ಗೆ ಹಿರಿಯ ಮುಖಂಡ ಪಿ ಚಿದಂಬರಂ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಿಕೆ ಸಲಹೆಗಳನ್ನ ಪರಾಮರ್ಶಿಸಲು ಪಕ್ಷ ರಚಿಸಿದ್ದ ಸಮಿತಿಯಲ್ಲಿ ಚಿದಂಬರಂ ಅವರೂ ಇದ್ದರು. ಈ ಬಗ್ಗೆ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಶಾಂತ್ ಕಿಶೋರ್ ಪ್ರಸ್ತುತಪಡಿಸಿದ ಮಂಡನೆಯಲ್ಲಿ ಯಾವ್ಯಾವ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ, ಯಾವ್ಯಾವ ಸಲಹೆಗಳನ್ನು ಕಾರ್ಯಗತಗೊಳಿಸಬಹುದು ಎಂಬಿತ್ಯಾದಿ ಅಂಶಗಳನ್ನು ಚರ್ಚಿಸಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಡುವಾಗ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಆಗಬೇಕು ಎಂದು ಹೇಳಿದ್ದುಂಟು. ಆದರೆ, ಕಾಂಗ್ರೆಸ್ ಪುನಃಶ್ಚೇತನಕ್ಕೆ ಅವರು ರೂಪಿಸಿದ ಯೋಜನೆಯಲ್ಲಿ ನಾಯಕತ್ವದ ವಿಷಯ ಇರಲಿಲ್ಲ ಎಂದು ಚಿದಂಬರಂ ಹೇಳುತ್ತಾರೆ.
ಕಾಂಗ್ರೆಸ್ ಆಫರ್ ರಿಜೆಕ್ಟ್ ಮಾಡಿ ಚಾಣಕ್ಯ ಪ್ರಶಾಂತ್ ಕಿಶೋರ್ ರಿಯಾಕ್ಟ್
"ಪಿಕೆ ಪ್ಲಾನ್ನಲ್ಲಿ ನಾಯಕತ್ವ ವಿಚಾರದಲ್ಲಿ ಏನೂ ಇರಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಹೆಸರು ಬರಲಿಲ್ಲ" ಎಂದು ಹೇಳಿದ ಚಿದಂಬರಂ ಅವರು, ಪಿಕೆ ಯೋಜನೆಯಲ್ಲಿ ಕಂಡು ಬಂದ ದತ್ತಾಂಶಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
"ಅಭ್ಯರ್ಥಿಗಳು, ಜನಸಂಖ್ಯೆ ಪರಿಮಾಣ ಇತ್ಯಾದಿಗೆ ಅನುಸಾರವಾಗಿ ಚುನಾವಣೆ, ವೋಟಿಂಗ್ ಪ್ಯಾಟರ್ನ್ನ ದತ್ತಾಂಶಗಳನ್ನ ಪಿಕೆ ನಮ್ಮ ಮುಂದಿಟ್ಟಿದ್ದಾರೆ. ನಮ್ಮ ಪಕ್ಷದಲ್ಲಿ ಅಂಥದ್ದೊಂದು ರೀತಿ ಸ್ಪಷ್ಟತೆ ಇರುವ ಡಾಟಾ ಇಲ್ಲ. ಆ ಮಾಹಿತಿ ಇಟ್ಟುಕೊಂಡು ಅವರು ಮಾಡಿರುವ ವಿಶ್ಲೇಷಣೆ ಗಮನಾರ್ಹವಾದುದು. ಅವರು ಇಟ್ಟಿರುವ ಕೆಲ ಪ್ರಸ್ತಾವಗಳನ್ನ ಜಾರಿಗೆ ತರುವ ಉದ್ದೇಶ ಹೊಂದಿದ್ದೇವೆ" ಎಂದು ಮಾಜಿ ಹಣಕಾಸು ಸಚಿವರೂ ಆದ ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ಗೆ ಬಗೆಹರಿಯದ ಪಿಕೆ ಕಗ್ಗಂಟು: ಮತ್ತೊಂದು ತಂಡ ರಚನೆ ಗುಟ್ಟು
ಚುನಾವಣಾ ರಣತಂತ್ರಗಳ ನಿಪುಣರಾಗಿರುವ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪುನಶ್ಚೇತನಕ್ಕೆ ಸಲಹೆಗಳನ್ನ ಕೊಟ್ಟಿರುವುದಷ್ಟೇ ಅಲ್ಲ ತಾವೇ ಖುದ್ದಾಗಿ ಪಕ್ಷಕ್ಕೆ ಸೇರಲು ಬಯಸಿದ್ದಾರೆ ಎಂಬಂತಹ ಸುದ್ದಿಗಳಿದ್ದವು. ಕಾಂಗ್ರೆಸ್ ಪಕ್ಷ ಮೊನ್ನೆ ಅವರಿಗೆ ಉನ್ನತಾಧಿಕಾರದ ಕ್ರಿಯಾ ತಂಡಕ್ಕೆ ಸೇರಬೇಕೆಂದು ಆಹ್ವಾನಿಸಿತ್ತು. ಆದರೆ, ಕಾಂಗ್ರೆಸ್ನ ಈ ಆಹ್ವಾನವನ್ನು ಪ್ರಶಾಂತ್ ಕಿಶೋರ್ ನಯವಾಗಿಯೇ ತಿರಸ್ಕರಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿ ಚಿದಂಬರಂ, "ಕಾಂಗ್ರೆಸ್ ಪಕ್ಷ ಕೊಟ್ಟ ಆಫರ್ ಅನ್ನು ಯಾಕೆ ಒಪ್ಪಲಿಲ್ಲ ಎಂದು ಪ್ರಶಾಂತ್ ಕಿಶೋರ್ ಅವರನ್ನ ಪ್ರಶ್ನಿಸಲಿಲ್ಲ. ಬಹುಶಃ ಅವರು ಸಮಾಲೋಚಕರಾಗಿ ಉಳಿಯಬಯಸಿರಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಅವರು ಟಿಆರ್ಎಸ್, ಟಿಎಂಸಿ ಮತ್ತು ಜಗನ್ಮೋಹನ್ ರೆಡ್ಡಿ ಅವರಿಗೆ ಸಲಹೆಗಳನ್ನು ನೀಡುತ್ತಿರಬಹುದು. ಈ ಪಕ್ಷಗಳಿಗೆ ಸಲಹೆಗಾರರಾಗಿ ಮುಂದುವರಿಯುವ ಇರಾದೆ ಅವರಿಗಿರಬೇಕು. ಒಂದು ವೇಳೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರೆ ಐಪ್ಯಾಕ್ ಕಂಪನಿಯೊಂದಿಗಿನ ಅವರ ಸಂಬಂಧವನ್ನು ಮರುಪರಿಶೀಲಿಸಬೇಕಾಗುತ್ತಿತ್ತು" ಎಂದು ಹೇಳಿದ ಅವರು, ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಜೊತೆ ಐಪ್ಯಾಕ್ ಒಪ್ಪಂದ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ಗೆ ಏನು ಸಮಸ್ಯೆ ಇಲ್ಲ ಎಂದಿದ್ದಾರೆ.
ಪ್ರಶಾಂತ್ ಕಿಶೋರ್ ತಮ್ಮ ಪ್ರೆಸೆಂಟೇಶನ್ನಲ್ಲಿ ನಾಯಕತ್ವ ವಿಚಾರವನ್ನು ಎತ್ತಿತೋರಿಸಿಲ್ಲವಾದರೂ ಚಿದಂಬರಮ್ ಅವರು ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ನಾಯಕತ್ವ ಸಮಸ್ಯೆಗೆ ತೀರಾ ಬಣ್ಣ ಕಟ್ಟಿ ಹೇಳಲಾಗುತ್ತಿದೆ ಎಂದು ಬೇಸರಿಸಿದ ಅವರು ಆಗಸ್ಟ್ ತಿಂಗಳೊಳಗೆ ನಾಯಕತ್ವ ಸಮಸ್ಯೆ ಬಗೆಹರಿಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended Video
ಪ್ರಶಾಂತ್ ಕಿಶೋರ್ ಅವರು ನೀಡಿದ ಸಲಹೆಗಳನ್ನ ಪರಾಮರ್ಶಿಸಲು ರಚಿಸಿದ್ದ ಸಮಿತಿ ತನ್ನ ಕೆಲಸಗಳನ್ನು ಮುಗಿಸಿ ವರಿಷ್ಠರಿಗೆ ವರದಿ ಸಲ್ಲಿಸಿದೆ. ಅದರ ಮೇಲೆ ಕ್ರಮ ತೆಗೆದುಕೊಳ್ಳಲು ಕ್ರಿಯಾ ತಂಡವೊಂದನ್ನು ರಚಿಸಲಾಗಿದೆ. ತಾನು ಕೊಟ್ಟಿರುವ ಎಲ್ಲಾ ಸಲಹೆಗಳನ್ನ ಜಾರಿಗೊಳಿಸುವ ಬದ್ಧತೆಯನ್ನು ಕಾಂಗ್ರೆಸ್ ತೋರಿಲ್ಲ ಎಂಬುದು ಪಿಕೆಗೆ ಇರುವ ಅಸಮಾಧಾನವಾದರೆ, ಪ್ರಶಾಂತ್ ಕಿಶೋರ್ ಬೇರೆ ಪಕ್ಷಗಳ ನಂಟನ್ನು ಬಿಟ್ಟು ಕಾಂಗ್ರೆಸ್ ಜೊತೆ ಮಾತ್ರ ಮುಡಿಪಾಗುವ ಮನಸು ಮಾಡಿಲ್ಲ ಎಂಬುದು ಕೈ ಪಾಳಯಕ್ಕೆ ಇರುವ ಅನುಮಾನ. ಹೀಗಾಗಿ, ಪಿಕೆ ಮತ್ತು ಕಾಂಗ್ರೆಸ್ ನಡುವೆ ವ್ಯಾವಹಾರಿಕ ಮತ್ತು ವೃತ್ತಿಪರ ಒಪ್ಪಂದ ಮಾತ್ರ ನಡೆದಂತೆ ತೋರುತ್ತಿದೆ. ಪಿಕೆ ಪಕ್ಕಾ ಕಾಂಗ್ರೆಸ್ಸಿಗರಾಗುವುದು ಅನುಮಾನವೇ ಸರಿ.
(ಒನ್ಇಂಡಿಯಾ ಸುದ್ದಿ)