ಮುಲಾಯಂ ಸಿಂಗ್-ಪ್ರಧಾನಿ ಮೋದಿ ಅದೆಷ್ಟು ಆತ್ಮೀಯರಪ್ಪೋ...
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಪದವಿ ಸ್ವೀಕಾರ ಸಮಾರಂಭವು ಹಲವು ಅಪರೂಪದ ಚಿತ್ರಗಳಿಗೆ ಸಾಕ್ಷಿಯಾಯಿತು. ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತೀರಾ ವಿಶೇಷವಾಗಿದೆ
ಇತ್ತೀಚೆಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅವರ ಒಂದು ಹೇಳಿಕೆ ಬಹಳ ಕುತೂಹಲ ಹಾಗೂ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಡಿಯೂರಪ್ಪನವರ ಕಾಲಿಗೆ ದುಬಕ್ ದುಬಕ್ ಅಂತ ಬಿದ್ದಿದ್ದ ಬಿಜೆಪಿ ಕಾರ್ಯಕರ್ತರ ಬಗ್ಗೆ ಕಿಡಿಕಿಡಿ ಆಗಿದ್ದ ಈಶ್ವರಪ್ಪ, ಇದೇನು ಸಂಸ್ಕೃತಿ ರೀ, ವಿಕೃತಿ ವಿಕೃತಿ ಅಂದಿದ್ದರು.
ನಿಜಕ್ಕೂ ಗೌರವ ಇದ್ದು, ತಮಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರೆ ನಮಸ್ಕಾರ ಮಾಡಲಿ. ಅದರೆ ಅಧಿಕಾರಕ್ಕೋಸ್ಕರ ಹೀಗೆ ಮಾಡಬಾರದು ಅಂತಲೂ ಹೇಳಿದ್ದರು. ಈಗ ಉತ್ತರಪ್ರದೇಶದಲ್ಲಿ ಏನಾಗಿದೆ ನೋಡಿ. ಮುಖ್ಯಮಂತ್ರಿ ಆಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿದ್ದಾರೆ. ಹೇಳಿ-ಕೇಳಿ ಈ ವ್ಯಕ್ತಿ ಸನ್ಯಾಸಿ. ಅಲ್ಲಿನ್ನು ಆದಿತ್ಯನಾಥ್ ಕಾಲಿಗೆ ಬೀಳೋರು ಅದೆಷ್ಟು ಮಂದಿ ಆಗ್ತಾರೋ ಏನೋ?[ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?]
ಹಿಂದುತ್ವದ ಅಜೆಂಡಾದಲ್ಲಿ ಉತ್ತರಪ್ರದೇಶ ಚುನಾವಣೆಯನ್ನು ಬಿಜೆಪಿ ಗೆದ್ದಿದೆ. ಬರೀ ಗೆದ್ದಿದೆ ಅನ್ನೋದಕ್ಕಿಂತ ಪ್ರಚಂಡ ಜಯವನ್ನೇ ಸಾಧಿಸಿದೆ. ಆ ಕಾರಣಕ್ಕೆ ಹಿಂದುತ್ವದ ಪ್ರಬಲ ಪ್ರತಿಪಾದಕರೊಬ್ಬರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿದೆ. ಭಾನುವಾರ ಯೋಗಿ ಆದಿತ್ಯನಾಥ್ ಗೆ ಮುಖ್ಯಮಂತ್ರಿ ಪಟ್ಟ ಕಟ್ಟಲಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ದಿನದ ಪ್ರಮಾಣ ವಚನ ಸ್ವೀಕಾರದ ವಿವಿಧ ಚಿತ್ರಗಳು ನಿಮ್ಮೆದುರಿಗಿವೆ.
ಯೋಗಿ ಅದಿತ್ಯನಾಥ್ ಆದ ನಾನು...
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಅಲ್ಲಿನ ರಾಜ್ಯಪಾಲ ರಾಮ್ ನಾಯಕ್ ಪ್ರಮಾಣ ವಚನ ಬೋಧಿಸಿದರು.
ಮಾತು, ಮೌನ, ಗಾಢಾಲೋಚನೆ
ಲಖನೌದಲ್ಲಿ ಭಾನುವಾರ ನಡೆದ ಪದವಿ ಪ್ರಮಾಣ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ, ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್, ವೆಂಕಯ್ಯ ನಾಯ್ಡು, ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂಸಿಂಗ್ ಯಾದವ್. ಅಡ್ವಾಣಿ ಅದೇನು ಆಲೋಚನೆಯಲ್ಲಿದ್ದಾರೋ..!
ಗುಟ್ಟೊಂದು ಹೇಳುವೆ
'ಇಷ್ಟೊಂದು ಸ್ಥಾನದಲ್ಲಿ ಗೆದ್ದರಲ್ಲಾ, ಅದು ಹೇಗೆ? ನನ್ನ ಮಗ ಕಾಂಗ್ರೆಸ್ ಜತೆ ಸೇರಿದ್ದರಿಂದ ನಿಮಗೆ ಸಹಾಯ ಆಯ್ತು ಅಲ್ವಾ' -ಎಂದೇನಾದರೂ ಪ್ರಧಾನಿ ಮೋದಿಯವರನ್ನು ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಕೇಳುತ್ತಿದ್ದಾರಾ? ಕಿವಿಯಲ್ಲೇ ಹೇಳುವಂಥ ಮಾತು ಯಾವುದು ಎಂದು ಹಿರಿಯ ರಾಜಕಾರಣಿ ಮುಲಾಯಂ ಅವರಿಗೆ ಗೊತ್ತಾಗಲ್ವಾ?
ಜವಾಬ್ದಾರಿ ವಹಿಸಿದ್ದಕ್ಕೆ ಯೋಗಿ ನಮಸ್ಕಾರ...
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಶವ್ ಪ್ರಸಾದ್ ಮೌರ್ಯ, ಅಮಿತಾ ಶಾ, ಪ್ರಧಾನಿ ನರೇಂದ್ರ ಮೋದಿ ಮತ್ತಿತರರು.
ಶುರು...ನಮಸ್ಕಾರ
ಸ್ವತಂತ್ರ ಖಾತೆ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸ್ವಾತಿ ಸಿಂಗ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಲಿಗೆ ನಮಸ್ಕರಿಸಿದರು.
ಅಮಿತ್ ಶಾ ವಿನ್ನರ್ ಕಣಪ್ಪ ಅಖಿಲೇಶ್...
ಕಣ್ಣು ಕಿರಿದಾಗಿಸಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ಮೋದಿ ಕೈ ಹಿಡಿದಿದ್ದಾರೆ. ಅಮಿತ್ ಶಾರ ಮತ್ತೊಂದು ಕೈ ಹಿಡಿದಿರುವ ಮೋದಿ. ಮುಷ್ಟಿ ಬಿಗಿ ಹಿಡಿದು, ಸ್ವಲ್ಪ ಬಾಯ್ತೆರೆದಿರುವ ಅಮಿತ್ ಶಾ. ಈ ಎಲ್ಲವನ್ನೂ ನೋಡುತ್ತಿದ್ದರೆ ಕುಸ್ತಿ ಮುಗಿದ ಮೇಲೆ ವಿಜಯಿಯಾದವರ ಕೈ ಮೇಲೆತ್ತಿ ಘೋಷಣೆ ಮಾಡುತ್ತಾರಲ್ಲಾ. ಅದಕ್ಕಿಂತ ಮುಂಚಿನ ಸನ್ನಿವೇಶದಂತಿದೆ ಈ ಫೋಟೋ.
ಚುನಾವಣೆಯ ದುಷ್ಮನಿ ಮರೆತು
ನಿಮ್ಮ ಗೆಲುವು ದೊಡ್ಡದು ಎಂದು ಅಖಿಲೇಶ್ ಹೇಳಿದರೆ, ಅಪ್ಪ-ಮಕ್ಕಳ ಜಗಳ, ಕಾಂಗ್ರೆಸ್ ಜತೆಗಿನ ನಿಮ್ಮ ದೋಸ್ತಿಯಿಂದ ಆದ ಅನುಕೂಲವೇ ದೊಡ್ಡದು ಎನ್ನುವಂತಿದೆ ಪ್ರಧಾನಿ ಮೋದಿ. ಜತೆಗೆ ಅಮಿತ್ ಶಾ ದೊಡ್ಡ ನಗುವೂ ಸೇರಿದೆ.
ವಿಶ್ವ ಹಿಂದೂ ಪರಿಷತ್ ಸಂಭ್ರಮ
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂಭ್ರಮ ಅಹ್ಮದಾಬಾದ್ ನಲ್ಲಿ ವಿಶ್ವ ಹಿಂದೂ ಪರಿಷತ್ ನ ಬೆಂಬಲಿಗರಲ್ಲಿ ಕಂಡುಬಂದಿದ್ದು ಹೀಗೆ.
ವಾರಣಾಸಿಯಲ್ಲಿ ಸಂಭ್ರಮಾಚರಣೆ
ಉತ್ತರಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಹಾಗೂ ಕೇಶವಪ್ರಸಾದ್ ಮೌರ್ಯ, ದಿನೇಶ್ ಶರ್ಮಾ ಉಪಮುಖ್ಯಮಂತ್ರಿಗಳು ಎಂದು ಘೋಷಣೆಯಾದ ನಂತರ ವಾರಣಾಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ.
ಗೆಲುವಿನ ಹಾರ
ಹಾರ ಹಾಕಿರುವ ಮೂವರನ್ನು ನೋಡಿಕೊಳ್ಳಿ. ಮಧ್ಯದಲ್ಲಿ ಇರೋದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಡ ಭಾಗದಲ್ಲಿ ಕೇಶವಪ್ರಸಾದ್ ಮೌರ್ಯ, ಬಲಕ್ಕೆ ದಿನೇಶ್ ಶರ್ಮಾ ಉಪ ಮುಖ್ಯಮಂತ್ರಿಗಳು. ಹಾರ ಇಲ್ಲದವರು ಕೇಂದ್ರ ಸಚಿವ ವೆಂಕಯ್ಯ ನಾಯ್ಡು.