ಭಾರತದಲ್ಲಿ ಜೀವ ರಕ್ಷಿಸುವ ವೈದ್ಯರ ಮೇಲೆಯೇ ಹೆಚ್ಚುತ್ತಿರುವ ಹಲ್ಲೆ!
ನವದೆಹಲಿ, ಜುಲೈ 21: ಭಾರತದಲ್ಲಿ ಕೊರೊನಾವೈರಸ್ ಕಾಲದಲ್ಲಿ ಆಪತ್ಬಾಂಧವರಿಗೆ ಆಪತ್ತು. ಈ ಸಾಲಿನ ಹಿಂದಿನ ಸತ್ಯವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ. ದೇಶದಲ್ಲಿ ತಮ್ಮ ಜೀವವನ್ನೇ ವೈದ್ಯಕೀಯ ಸೇವೆಗಾಗಿ ಮುಡಿಪಾಗಿಟ್ಟವರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸಾವಿರಾರು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ಜೀವ ಉಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂಥ ಸಂದರ್ಭದಲ್ಲಿ ವೈದ್ಯರಿಗೇ ರಕ್ಷಣೆ ಇಲ್ಲವೇ ಎನ್ನುವಂಥಾ ಪರಿಸ್ಥಿತಿ ಸೃಷ್ಟಿಯಾಗಿದೆ.
ಅಸ್ಸಾಂ ವೈದ್ಯೆಯಲ್ಲಿ ಏಕಕಾಲಕ್ಕೆ ಕೋವಿಡ್ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರ ಪತ್ತೆ
ಭಾರತೀಯ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಆರೋಗ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯಗಳ ಪಟ್ಟಿಗೆ ಸೇರುತ್ತದೆ. ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ನಡೆದಿರುವ ಹಿಂಸಾಚಾರ ಮತ್ತು ಹಲ್ಲೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರ ಸರ್ಕಾರ ನಿರ್ವಹಿಸುವುದಕ್ಕೆ ಬರುವುದಿಲ್ಲ ಎಂದು ವಾದಿಸುತ್ತಿದೆ. ಈ ಮಧ್ಯೆ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ವೈದ್ಯಕೀಯ ಸಿಬ್ಬಂದಿ ನಡೆಸಿದ ಪ್ರತಿಭಟನೆ ಹಾಗೂ ಅದರ ಪರಿಣಾಮಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ಆದ್ಯತೆ
ಭಾರತದಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಹಲ್ಲೆ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕಳೆದ ಜೂನ್ 18ರಂದೇ ಭಾರತದ ವೈದ್ಯಕೀಯ ಸಂಘದ ವತಿಯಿಂದ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಸಲಾಯಿತು. ವೈದ್ಯರಿಗೆ ರಕ್ಷಣೆ ಒದಗಿಸುವಂತಾ ಕಠಿಣ ನಿಯಮಗಳನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೆಲವು ಸೂಚನೆಗಳನ್ನು ನೀಡಿತ್ತು.
ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ಸುರಕ್ಷತೆಗೆ ಕ್ರಮ
* ಸೂಕ್ಷ್ಮ ಪ್ರದೇಶಗಳಲ್ಲಿನ ಆಸ್ಪತ್ರೆಗಳಿಗೆ ತರಬೇತಿ ಪಡೆದ ಸಿಬ್ಬಂದಿಯಿಂದ ಭದ್ರತೆ
* ಸಿಸಿ ಕ್ಯಾಮರಾ ಅಳವಡಿಕೆ ಜೊತೆಗೆ ಪರಿಣಾಮಕಾರಿ ಸಂವಹನಕ್ಕಾಗಿ ಎಚ್ಚರಿಕೆ ಗಂಟೆ. ತುರ್ತು ಸಂದರ್ಭಗಳಲ್ಲಿ ಪಾರಾಗುವುದಕ್ಕೆ ವಿಶೇಷ ಭದ್ರತೆ ಮತ್ತು ಕಾಲುದಾರಿಯ ವ್ಯವಸ್ಥೆ
* ಮೇಲ್ವಿಚಾರಣೆ ಮತ್ತು ತ್ವರಿತ ಪ್ರತಿಕ್ರಿಯೆಗಾಗಿ ಸುಸಜ್ಜಿತ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪನೆ
* ಅನಪೇಕ್ಷಿತ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧ ವಿಧಿಸುವುದು
* ಹಲ್ಲೆಕೋರರ ವಿರುದ್ಧ ಸಾಂಸ್ಥಿಕ ಎಫ್ಐಆರ್ ದಾಖಲಿಸುವುದು
* ಪ್ರತಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಯಲ್ಲಿ ವೈದ್ಯರನ್ನು ರಕ್ಷಿಸುವ ಶಾಸನವನ್ನು ಪ್ರದರ್ಶಿಸುವುದು
* ವೈದ್ಯಕೀಯ ನಿರ್ಲಕ್ಷ್ಯವನ್ನು ಮೇಲ್ವಿಚಾರಣೆ ಮಾಡಲು ನೋಡಲ್ ಅಧಿಕಾರಿಯ ನೇಮಿಸುವುದು
* ವೈದ್ಯರ ಮೇಲೆ ಹೆಚ್ಚಿನ ಹೊರೆ / ಒತ್ತಡವನ್ನು ತಪ್ಪಿಸಲು ಮತ್ತು ಜಾಗತಿಕ ವೈದ್ಯ-ರೋಗಿಗಳ ಅನುಪಾತವನ್ನು ಕಾಪಾಡಿಕೊಳ್ಳಲು ಆಸ್ಪತ್ರೆಗಳು / ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್ಸಿ) ಖಾಲಿ ಇರುವ ವೈದ್ಯರು ಮತ್ತು ಪ್ಯಾರಾ-ವೈದ್ಯಕೀಯ ಸಿಬ್ಬಂದಿಯ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದು.
* ಪ್ರಮುಖ ಮತ್ತು ಮೆಟ್ರೋ ನಗರಗಳಿಗೆ ಹೋಲಿಸಿದಂತೆ ಉತ್ತಮ ಮೂಲಸೌಕರ್ಯ ಸೌಲಭ್ಯಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸುವುದು. ದೂರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಪ್ಯಾರಾ ವೈದ್ಯಕೀಯ ಸಿಬ್ಬಂದಿಗೆ ಉತ್ತಮ ವೇತನದ ಮೂಲಕ ಪ್ರೋತ್ಸಾಹಿಸುವುದು.
ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ
ಭಾರತದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳು ತಮ್ಮ ಕರ್ತವ್ಯದ ಜೊತೆಗೆ ವೃತ್ತಿಪರ ಅನ್ವೇಷಣೆಗಳನ್ನು ಯಾವುದೇ ಭಯವಿಲ್ಲದೇ ನಡೆಸುವುದಕ್ಕೆ ಸೂಕ್ತವಾದ ವಾತಾವರಣವನ್ನು ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಪತ್ರ ಬರೆದರು. ವೈದ್ಯರ ಮೇಲೆ ಹಲ್ಲೆ ನಡೆಸುವ ಹಲ್ಲೆಕೋರರ ವಿರುದ್ಧ ಶಿಸ್ತುಬದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಜೈಲುಶಿಕ್ಷೆ + ದಂಡ!
ಕೊರೊನಾವೈರಸ್ ಕಾಲದಲ್ಲಿ ಕೇಂದ್ರ ಸರ್ಕಾರವು ಸಾಂಕ್ರಾಮಿಕ ರೋಗಗಳು (ತಿದ್ದುಪಡಿ) ಕಾಯ್ದೆ, 2000 ಅನ್ನು ಕಳೆದ 2020ರ ಸೆಪ್ಟೆಂಬರ್ 28ರಂದು ಜಾರಿಗೊಳಿಸಿತು. ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಶಿಸ್ತುಬದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಈ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಮುಂದೇನು?:
* ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆಯು ಜಾಮೀನುರಹಿತ ಅಪರಾಧ
* ಅಪರಾಧಿಗೆ 50,000 ದಿಂದ 2 ಲಕ್ಷ ರೂಪಾಯಿವರೆಗೂ ದಂಡ
* ಹಲ್ಲೆ ನಡೆಸಿದ ಅಪರಾಧಿಗೆ 3 ತಿಂಗಳಿನಿಂದ 5 ವರ್ಷದವರೆಗೂ ಜೈಲುಶಿಕ್ಷೆ
* ತೀವ್ರವಾಗಿ ಹಲ್ಲೆ ನಡೆಸಿದ ಅಪರಾಧಿಗೆ 6 ತಿಂಗಳಿನಿಂದ 7 ವರ್ಷದವರೆಗೂ ಸೆರೆವಾಸ
* ತೀವ್ರವಾದ ಹಲ್ಲೆಗೆ 1 ಲಕ್ಷದಿಂದ 5 ಲಕ್ಷ ರೂಪಾಯಿವರೆಗೂ ದಂಡ
* ಹಲ್ಲೆಗೆ ಒಳಗಾದ ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ತಿಪಾಸ್ತಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಎರಡು ಪಟ್ಟು ಪರಿಹಾರ
ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ 50 ಲಕ್ಷ ರೂ. ವಿಮೆ
ಭಾರತದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆಯಡಿ 50 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದೇಶದಲ್ಲಿ ಜುಲೈ 15ರ ಅಂಕಿ-ಅಂಶಗಳ ಪ್ರಕಾರ, "ಒಟ್ಟು 921 ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಆರೋಗ್ಯ ವಿಮೆ ಅಡಿಯಲ್ಲಿ 50 ಲಕ್ಷ ರೂಪಾಯಿ ನೀಡಲಾಗಿದೆ," ಎಂದು ರಾಜ್ಯಸಭೆಯಲ್ಲಿ ಕೇಂದ್ರ ರಾಜ್ಯ ಆರೋಗ್ಯ ಸಚಿವರಾದ ಭಾರತಿ ಪವಾರ್ ತಿಳಿಸಿದ್ದಾರೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಭದ್ರತೆ ಒದಿಗಸುವ ದೃಷ್ಟಿಯಿಂದ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರು ಕೇಳಿದ ಪ್ರಶ್ನೆಗೆ ಸಚಿವ ಭಾರತಿ ಪವಾರ್ ಉತ್ತರ ನೀಡಿದರು.
"ಮಹಾರಾಷ್ಟ್ರದಲ್ಲಿ 144 ಆರೋಗ್ಯ ಸಿಬ್ಬಂದಿ, ಆಂಧ್ರ ಪ್ರದೇಶ 90 ಮಂದಿ, ರಾಜಸ್ಥಾನ 78 ಮಂದಿ, ಕರ್ನಾಟಕ 71 ಮಂದಿ, ಗುಜರಾತ್ 66 ಮಂದಿ ಹಾಗೂ ಮಧ್ಯಪ್ರದೇಶ 57 ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿ ವಿಮೆ ಒದಗಿಸಲಾಗಿದೆ," ಎಂದು ತಿಳಿಸಿದ್ದಾರೆ.