ಹೊಟ್ಟೆ ತುಂಬಾ ತಿಂದು ಉಪವಾಸ ಸತ್ಯಾಗ್ರಹ ಕುಳಿತರಾ ಕಾಂಗ್ರೆಸಿಗರು?
ನವದೆಹಲಿ, ಏಪ್ರಿಲ್ 9: ಹೊಟ್ಟೆ ತುಂಬಾ ತಿಂದು ಕಾಂಗ್ರೆಸ್ ನಾಯಕರು ಉಪವಾಸ ಕುಳಿತರಾ? ಹೀಗೊಂದು ಪ್ರಶ್ನೆಯನ್ನು ಬಿಜೆಪಿ ಎತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಇಂದು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ನಾಯಕರು ದೆಹಲಿಯ ರಾಜಘಾಟ್ ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಆದರೆ ಈ ಉಪವಾಸ ಸತ್ಯಾಗ್ರಹಕ್ಕೆ ಹೋಗುವ ಮೊದಲು ಕಾಂಗ್ರೆಸ್ ನಾಯಕರು ಹೊಟ್ಟೆ ತುಂಬಾ ತಿಂಡಿ ಸೇವಿಸಿದ್ದರು ಎಂಬುದು ವಿವಾದಕ್ಕೆ ಕಾರಣವಾಗಿದೆ.
ಕೇಂದ್ರದ ವೈಫಲ್ಯ ಖಂಡಿಸಿ ರಾಹುಲ್ ಗಾಂಧಿ ಉಪವಾಸ ಸತ್ಯಾಗ್ರಹ
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಹಿರಿಯ ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್, ಶೀಲಾ ದೀಕ್ಷಿತ್ ಹಾಗೂ ಇತರ ನಾಯಕು ಭಾಗವಹಿಸಿದ್ದರು.
|
ರೆಸ್ಟೋರೆಂಟ್ ನಲ್ಲಿ ಊಟ, ಇಲ್ಲಿ ಉಪವಾಸ ಪ್ರತಿಭಟನೆ
ದೆಹಲಿಯಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುವ ಮೊದಲು ಕಾಂಗ್ರೆಸ್ ನಾಯಕರು ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಆಹಾರ ಸೇವಿಸುತ್ತಿದ್ದರು ಎಂಬುದಾಗಿ ಬಿಜೆಪಿ ನಾಯಕ ಹರೀಶ್ ಖುರಾನಾ ಹೇಳಿದ್ದಾರೆ. ಇದಾದ ನಂತರ ಈ ನಾಯಕರು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದೆಹಲಿಯ ರಾಜಘಾಟ್ ನಲ್ಲಿ ಪ್ರತಿಭಟನೆ ನಡೆಸಿದ್ದರು.
ಕಾಂಗ್ರೆಸ್ ದ್ವಂದ್ವ ನೀತಿ
"ಪ್ರತಿಭಟನೆಗೂ ಮುನ್ನ ಆಹಾರ ಸೇವಿಸುತ್ತಿರುವ ಕಾಂಗ್ರೆಸ್ ನಾಯಕರ ಚಿತ್ರಗಳು ಅವರ ದ್ವಂದ್ವ ನೀತಿಯನ್ನು ತೋರಿಸುತ್ತಿವೆ. ಒಂದು ಕಡೆ ತಾವು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎನ್ನುತ್ತಾರೆ. ಇನ್ನೊಂದು ಕಡೆ ರೆಸ್ಟೋರೆಂಟ್ ನಲ್ಲಿ ತಿಂದು ಬರುತ್ತಾರೆ. ಈ ಚಿತ್ರಗಳು ನಿಜವಾದ ಚಿತ್ರಗಳು. ತಾಕತ್ತಿದ್ದರೆ ಅವರು ಇದು ನಕಲಿ ಚಿತ್ರಗಳು ಎನ್ನಲಿ ನೋಡೋಣ," ಎಂದು ಹರೀಶ್ ಖುರಾನಾ ಸವಾಲು ಹಾಕಿದ್ದಾರೆ
ಕೈ ಪಕ್ಷದಿಂದ ಸಮಜಾಯಿಷಿ
"ಈ ಚಿತ್ರಗಳನ್ನು 8 ಗಂಟೆ ಮೊದಲು ತೆಗೆಯಲಾಗಿದೆ. ಇದೊಂದು ಬೆಳಿಗ್ಗೆ 10.30ರಿಂದ ಸಂಜೆ 4.30ರ ವರೆಗೆ ನಡೆಯುವ ಸಾಂಕೇತಿಕ ಪ್ರತಿಭಟನೆ. ಇದು ಅಮರಣಾಂತ ಉಪವಾಸ ಸತ್ಯಾಗ್ರಹವಲ್ಲ. ಇದು ಬಿಜೆಪಿಯವರ ಸಮಸ್ಯೆ. ದೇಶ ನಡೆಸಿ ಎಂದರೆ ನಾವೇನು ತಿನ್ನುತ್ತೇವೆ ಎಂಬುಬುದನ್ನು ನೋಡುತ್ತಾರೆ," ಎಂದು ಕಾಂಗ್ರೆಸ್ ನಾಯಕ ಎ.ಎಸ್ ಲವ್ಲೀ ಕಿಡಿಕಾರಿದ್ದಾರೆ.
|
ಸ್ಪೂರ್ತಿದಾಯಕ ರಾಜಕೀಯ!
ರಾಹುಲ್ ಗಾಂಧಿ ಚೆನ್ನಾಗಿ ಮಾಡಿದ್ದೀರಿ. 5 ಗಂಟೆಗಳ ಉಪವಾಸ ಕೂರಲು ನಿಮಗೆ ಆಗುತ್ತಿಲ್ಲ ಜೊತೆಗೆ 1984 ರ ಗಲಭೆಯ ಆರೋಪಿಗಳನ್ನು "ಕೋಮು ಸಾಮರಸ್ಯ"ದ ಕಾರ್ಯಕ್ರಮವೊಂದಕ್ಕೆ ಕರೆ ತಂದಿದ್ದೀರಿ. ನಿಜವಾಗಿಯೂ ನಿಮ್ಮದು ಸ್ಪೂರ್ತಿದಾಯಕ ರಾಜಕೀಯ! ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಲೇವಡಿ ಮಾಡಿದ್ದಾರೆ.