ಕಲಾವಿದನ ಪ್ರತಿಭೆಯಲ್ಲಿ ಮರುಜೀವ ಪಡೆದ ಹುತಾತ್ಮ ಯೋಧರು
ಬೆಂಗಳೂರು, ಜನವರಿ,06: ದೇಶದ ಸೇನಾ ನೆಲೆಯಾದ ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರಿಂದ ದಾಳಿ ನಡೆದ ಸಂದರ್ಭದಲ್ಲಿ ಹಲವಾರು ಯೋಧರು ಪ್ರಾಣ ಬಲಿದಾನ ಮಾಡಿದ್ದಾರೆ. ಇವರ ಕುಟುಂಬಗಳಲ್ಲಿ ತುಂಬಿದ್ದ ಸಂತಸಕ್ಕೆ ಉಗ್ರರ ದಾಳಿಯಿಂದಾಗಿ ನೋವಿನ ಪರದೆ ಕವಿದಿದೆ.
ಪಠಾಣ್ ಕೋಟ್ ಮೇಲೆ ನಡೆದ ಉಗ್ರರ ಅಟ್ಟಹಾಸದಿಂದಾಗಿ ಕೇರಳ ಮೂಲದ ನಿರಂಜನ್.ಇ ಸೇರಿದಂತೆ ದೇಶದ ಏಳು ಯೋಧರು ವೀರ ಮರಣವನ್ನಪ್ಪಿದ್ದಾರೆ. ನಿರಂಜನ್.ಇ ಅವರು ರಾಷ್ಟೀಯ ಭದ್ರತಾ ಪಡೆಯ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಯೋಧರ ಸಾವಿಗಾಗಿ ಮಕ್ಕಳು, ದೊಡ್ಡವರು ಸೇರಿದಂತೆ ಇಡೀ ದೇಶದ ಜನರೇ ಕಂಬನಿ ಮಿಡಿದಿದ್ದು, ದೀಪ, ಕ್ಯಾಂಡಲ್ ಹಚ್ಚುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಇವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.[ಪಠಾಣ್ ಕೋಟ್ ಗೆ ಬಂದ ಉಗ್ರರು ಗಡಿ ದಾಟಿದ್ದು ಹೇಗೆ?]
ಹೀಗೆ ಇಡೀ ದೇಶ, ಪ್ರಪಂಚದಾದ್ಯಂತ ಕ್ಷಣ ಕ್ಷಣಕ್ಕೂ ಹಲವಾರು ಘಟನೆಗಳು ಘಟಿಸುತ್ತಲೇ ಇರುತ್ತವೆ. ನೋವನ್ನು ತಂದೊಡ್ಡುತ್ತಲೇ ಇರುತ್ತವೆ. ಮಣಿಪುರದ ರಾಜಧಾನಿ ಇಂಫಾಲ್ ನಲ್ಲಿ ಭೂಕಂಪ ಸಂಭವಿಸಿ ಹಲವಾರು ಕಟ್ಟಡಗಳು, ಮನೆಗಳು ಧರೆಗುರುಳಿದಿವೆ. ಅಲ್ಲಿನ ಜನ ನೆಲೆ ಇಲ್ಲದೆ ಬೀದಿಗೆ ಬಂದಿದ್ದಾರೆ. ಇನ್ನೂ ನಿಮಗೆ ಹೆಚ್ಚಿನ ಸುದ್ದಿಗಳನ್ನು ಪಿಟಿಐ ನ ಕೆಲವು ಚಿತ್ರಗಳ ಮೂಲಕ ಹೇಳುತ್ತೇವೆ.
ಮರಳಲ್ಲಿ ಯೋಧರು
ಮರಳು ಕಲಾವಿದನಾದ ಸುದರ್ಶನ್ ಪಟ್ನಾಯಕ್ ಪಠಾಣ್ ಕೋಟ್ ವಾಯುನೆಲೆ ದಾಳಿಯಲ್ಲಿ ಸಾವನ್ನಪ್ಪಿದ ಯೋಧರನ್ನು ಮರಳಿನಲ್ಲಿ ರೂಪ ಕೊಡುವುದರ ಮೂಲಕ Salute Our Heroes R.I.P ಎಂದು ಬರೆದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ತಂದೆ ಕಳೆದುಕೊಂಡ ಮಗಳನ್ನು ಸಂತೈಸುತ್ತಿರುವ ತಾತಾ
ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಯಿಂದ ಸಾವನ್ನಪ್ಪಿದ್ದ ಲೆಫ್ಟಿನೆಂಟ್ ಕರ್ನಲ್ ನಿರಂಜನ್. ಇ ಅವರ ಮಗಳನ್ನು ತಾತಾ ಮುತ್ತು ನೀಡುವುದರ ಮೂಲಕ ಸಂತೈಸಿದರು. ತಂದೆಯನ್ನು ಕಳೆದುಕೊಂಡ ನೋವು ಏನು ಅರಿಯದ ಆ ಮಗುವಿನ ಮೊಗದಲ್ಲಿ ಕಾಣಿಸಿಕೊಂಡಿತು.
ಯೋಧರೇ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ
ಪಠಾಣ್ ಕೋಟ್ ವಾಯುನೆಲೆ ದಾಳಿ ಮಾಡಿದ ಉಗ್ರರಿಂದ ವೀರ ಮರಣವನ್ನಪ್ಪಿದ ಯೋಧರಿಗಾಗಿ ಅಹಮದಾಬಾದ್ ಶಾಲೆಯ ಮಕ್ಕಳು ಕ್ಯಾಂಡಲ್ ಹಚ್ಚುವ ಮೂಲಕ ಯೋಧರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.[ಪಠಾಣ್ ಕೋಟ್ ಕಾರ್ಯಾಚರಣೆ ಅಂತ್ಯ, 6 ಉಗ್ರರ ಹತ್ಯೆ]
ರೆಡಿ, ಒನ್, ಟೂ, ತ್ರೀ..ಗೋ...
ನಮ್ಮಲ್ಲಿ ಯಾವುದಾದರೂ ಪ್ರತಿಭೆ ಇದ್ದರೆ ಅದು ಜೀವನಾಂತ್ಯದವರೆಗೂ ನಮ್ಮ ಜೊತೆಯಲ್ಲಿರುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದ 200ಮೀಟರ್ ಓಟದಲ್ಲಿ ಹಿರಿಯ ಕ್ರೀಡಾಪಟುಗಳು ಪಾಲ್ಗೊಂಡಿರುವುದೇ ಸಾಕ್ಷಿ. ಇವರು ವಿಧಿಶಾದಲ್ಲಿ ನಡೆದ 37ನೇ ರಾಷ್ಟ್ರೀಯ ಮಾಸ್ಟರ್ ಅಥ್ಮೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ನಡೆಎದ 200ಮೀಟರ್ ಓಟದಲ್ಲಿ ಪಾಲ್ಗೊಂಡಿದ್ದರು.
ಇಂಫಾಲದಲ್ಲಿ ಭೂಕಂಪ,ವಾಸಕ್ಕೆ ಪರದಾಟ
ಮಣಿಪುರದ ರಾಜಧಾನಿ ಇಂಫಾಲದಲ್ಲಿ ಮಂಗಳವಾರ ಭೂಕಂಪ ಸಂಭವಿಸಿದ್ದು, ಹಲವಾರು ಕಟ್ಟಡಗಳು, ಮನೆಗಳು ಧರೆಗುರುಳಿದಿವೆ. ಜನರು ವಾಸಕ್ಕಾಗಿ ಪರದಾಡುವಂತಾಗಿದೆ
ತಾಯಿಯಿಂದ ಸಿಹಿ ಸ್ವೀಕರಿಸಿದ ಮಗ ಪ್ರಣವ್
ಪ್ರಣವ್ ಧನವಾಡೆ ನಿರ್ಮಿಸಿದ ವಿಶ್ವದಾಖಲೆಗೆ ಸಂತೋಷಗೊಂಡ ತಾಯಿ ಮಗನಿಗೆ ಸಿಹಿ ತಿನ್ನಿಸಿ ತಮ್ಮ ಸಂತಸ ವ್ಯಕ್ತ ಪಡಿಸಿದರು. ಪ್ರಣವ್ ಧನವಾಡೆ ಸೋಮವಾರ ಭಂಡಾರಿ ಕಪ್ ಅಂತರ್ ಶಾಲಾ ಪಂದ್ಯಾವಳಿಯಲ್ಲಿ ಆರ್ಯ ಗುರುಕುಲ ಶಾಲೆ ವಿರುದ್ಧ ಆಡಿದ್ದು, 1009ರನ್ ಗಳಿಸುವ ಮೂಲಕ 116 ವರ್ಷಗಳ ದಾಖಲೆ ಮುರಿದಿದ್ದಾನೆ.[652ರನ್ ಚೆಚ್ಚಿ ವಿಶ್ವ ದಾಖಲೆ ಬರೆದ ರಿಕ್ಷಾ ಚಾಲಕನ ಮಗ!]
ಸದ್ಯದಲ್ಲೇ ಬಾಲಿವುಡ್ ನಲ್ಲಿ 'ಬಾಲಿ ಬ್ರಿಡ್ಜ್' ಸಿನಿಮಾ
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ನವಾಜುದ್ದೀನ್ ಸಿದ್ದಿಕ್ ಬಾಲಿ ಬ್ರಿಡ್ಜ್ ಎಂಬ ಹೊಸ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ
ಕೊನೆಯ ವಿದಾಯ ಹೇಳಿದ ಯೋಧರು
ಪಠಾಣ್ ಕೋಟ್ ವಾಯುನೆಲೆ ದಾಳಿಯ ಸಂದರ್ಭದಲ್ಲಿ ಉಗ್ರರು ಇಟ್ಟಿದ್ದ ಬಾಂಬ್ ನ್ನು ನಿಷ್ಕ್ರೀಯಗೊಳಿಸಲು ಹೋಗಿ ಸಾವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರ ಪೂರ್ವಜರ ಊರಾದ ಕೇರಳದ ಎಳಂಬುಶ್ಯೇರಿಯಲ್ಲಿ ಸರ್ಕಾರದ ಸಕಲ ಗೌರವಗಳೊಂದಿಗೆ ಭಾವುಕ ವಿದಾಯ ಹೇಳಲಾಯಿತು.