ನಮ್ ಸಂಕ್ರಾಂತಿ ಸಕತ್, ಆಚರಣೆ ಸೂಪರ್, ನಿಮ್ಮೂರಿನಲ್ಲಿ ಹೇಗಿತ್ತು?
ದೇಶದ ವಿವಿಧೆಡೆಯ ಸಂಕ್ರಾಂತಿ ಆಚರಣೆ ವಿಶೇಷದ ಫೋಟೋಗಳು ಇಲ್ಲಿವೆ. ರಾಸುಗಳ ಅಲಂಕಾರ, ಕಿಚ್ಚು ಹಾಯಿಸುವುದು, ಹಬ್ಬದಡುಗೆ ತಯಾರಿ..ಸಂಕ್ರಾಂತಿ ಸಂಭ್ರಮದಲ್ಲಿ ಎಷ್ಟೆಲ್ಲ ಖುಷಿ!
ಸಂಕ್ರಾಂತಿ ಅಂದರೆ ಬದಲಾವಣೆ. ಏಕೆಂದರೆ ಸೂರ್ಯನೇ ಪಥ ಬದಲಿಸುತ್ತಾನೆ. ಇದರ ಜತೆಗೆ ರಾಸುಗಳ ಸಂಭ್ರಮ. ಸಿಹಿ-ಖಾರ ಹುಗ್ಗಿ ವಿಶೇಷ. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡುವ ಆಶೀಸ್ಸು. ದೇಶದ ನಾನಾ ಭಾಗಗಳಲ್ಲಿ ಸಂಕ್ರಾಂತಿ ಆಚರಣೆಯ ಚಿತ್ರಗಳು ಇಲ್ಲಿವೆ. ಈ ಬಾರಿ ಶನಿವಾರ ಬಂದಿರುವ ಹಬ್ಬಕ್ಕೆ ಭಾನುವಾರದ ರಜಾ ಎಂಬುದು ಸೇರಿ ಇನ್ನಷ್ಟು ಖುಷಿ ಪಡಲು ಕಾರಣ ಸಿಕ್ಕಿದೆ.
ಜಾನುವಾರುಗಳ ಕಿಚ್ಚು ಹಾಯಿಸುವ ಸಂಭ್ರಮ ಹಸು-ಎತ್ತುಗಳ ಪಾಲನೆಯಲ್ಲಿ ತೊಡಗಿದವರಿಗೆ. ಕೆಲವು ಕಡೆಯಂತೂ ಹಲವು ಸ್ಪರ್ಧೆಗಳನ್ನು ಏರ್ಪಡಿಸಿರುತ್ತಾರೆ. ಮನೆಯ ಮಕ್ಕಳಂತೆ ನೋಡಿಕೊಂಡಿರುವ ರಾಸುಗಳಿಗೆ ಮೈ ತೊಳೆದು, ಅವುಗಳಿಗೆ ಬಣ್ಣಬಣ್ಣದ ಬಲೂನು ಕಟ್ಟಿ, ರಸ್ತೆಯಲ್ಲಿ ನಡೆದುಹೋಗುವಾಗ ಅದರ ಒಡೆಯನ ಸಂತೋಷಕ್ಕೆ ಎಣೆಯುಂಟೆ?[2016ರಲ್ಲಿ ಗಮನ ಸೆಳೆದ 24 ಚಿತ್ರಗಳು]
ಕರ್ನಾಟಕ, ತಮಿಳುನಾಡು, ಕೇರಳ-ದಕ್ಷಿಣ ಭಾರತದ ರಾಜ್ಯಗಳಲ್ಲಿ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಸಂಭ್ರಮ. ಇನ್ನು ವಲಸೆ ಹೋದವರು ಹೇಗೆ ಸಂಕ್ರಾಂತಿ ಆಚರಿಸಿದ್ದಾರೆ ಎಂಬ ಸಣ್ಣ ಕುತೂಹಲಕ್ಕೆ ಮುಂಬೈನ ಚಿತ್ರವೊಂದನ್ನು ಇಲ್ಲಿ ಕೊಡಲಾಗಿದೆ. ಉಳಿದಂತೆ ಸಂಕ್ರಾಂತಿಯಲ್ಲಿ ನಡೆಯುವ ಆಚರಣೆ, ನಂಬಿಕೆಗಳನ್ನು ಪ್ರತಿನಿಧಿಸುವಂಥ ಫೋಟೋಗಳು ನಿಮ್ಮೆದುರಿಗಿವೆ.
ಭಕ್ತಿ ಸಮರ್ಪಣೆ
ಕೇರಳದ ತಿರುವನಂತಪುರದಲ್ಲಿ ನಡೆದ ಅಟ್ಟುಕಾಲ್ ಪೊಂಗಲ್ ಸಂಭ್ರಮದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಪಾಲ್ಗೊಂಡಿದ್ದರು. ತಮಿಳುನಾಡಿನಿಂದಲೂ ಬಂದಿದ್ದ ಭಕ್ತರು ಅಟ್ಟುಕಾಲ್ ದೇವಿಗೆ ಭಕ್ತಿ ಸಮರ್ಪಿಸಿದರು.
ಜಾನುವಾರುಗಳಿಗೆ ಅಲಂಕಾರ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಕ್ರಾಂತಿ ಪ್ರಯುಕ್ತ ಶನಿವಾರ ಹಸು, ಎತ್ತುಗಳಿಗೆ ಅಲಂಕಾರ ಮಾಡಿದ್ದು ಕಂಡುಬಂದಿದ್ದು ಹೀಗೆ.
ಮಾಟ್ಟು ಪೊಂಗಲ್
'ಮಾಟ್ಟು ಪೊಂಗಲ್' ಪ್ರಯುಕ್ತ ಶನಿವಾರ ಯುವತಿಯರು ತಮಿಳುನಾಡಿನ ಚೆನ್ನೈನಲ್ಲಿ ಹಸು, ಎತ್ತುಗಳಿಗೆ ಮೇವುಣಿಸಿದರು.
ಸಾಂಪ್ರದಾಯಿಕ ಆಚರಣೆ
ಮುಂಬೈನಲ್ಲಿರುವ ಧಾರಾವಿಯ ಕೊಳಗೇರಿ ಪ್ರದೇಶದಲ್ಲಿ ಮಹಿಳೆಯರು ಸಾಂಪ್ರದಾಯಿಕ ಅಡುಗೆಯಲ್ಲಿ ತೊಡಗಿದ್ದಾಗ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.
ಕೊಯಂಬೀಡಿನ ಕಬ್ಬು
ಸಂಕ್ರಾಂತಿ ಪೂರ್ವಭಾವಿಯಾಗಿ ಚೆನ್ನೈನ ಕೊಯಂಬೀಡಿನ ಮಾರುಕಟ್ಟೆಯಲ್ಲಿ ಕಬ್ಬಿನ ಜಲ್ಲೆಗಳನ್ನು ಟ್ರಕ್ ಗಳಿಂದ ಇಳಿಸುತ್ತಿದ್ದ ಕಾರ್ಮಿಕರು.
ಸಂಕ್ರಾಂತಿ ಕಿಚ್ಚು
ಮೈಸೂರಿನ ಸಮೀಪದ ಸಿದ್ದಲಿಂಗ ಪುರದಲ್ಲಿ ಸಂಕ್ರಾಂತಿ ಪ್ರಯುಕ್ತ ರಾಸುಗಳಿಗೆ ಕಿಚ್ಚು ಹಾಯಿಸಿದ ದೃಶ್ಯ ಕಂಡುಬಂದಿದ್ದು ಹೀಗೆ.