ಒಂದು ' ಭಾರತ್ ಬಂದ್' ನಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಹಾಗಿದ್ದರೆ!?
ಜನವಿರೋಧಿ ನೀತಿಯ ವಿರುದ್ದ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತಾ, ಭಾರತ್ ಬಂದ್, ಕರ್ನಾಟಕ ಬಂದ್ ಮಾಡುವ ಪದ್ದತಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆದುಕೊಂಡು ಬರುತ್ತಿದೆ. ಆದರೆ, ಬಂದ್ ನಿಂದ ಜನಸಾಮಾನ್ಯರ ಬೇಡಿಕೆ ಈಡೇರುತ್ತಾ ಅಥವಾ ಆಡಳಿತ ಪಕ್ಷದ ವಿರುದ್ದ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಂದ್ ಒಂದು ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗುತ್ತಿದೆಯಾ?
ಅದೇನೆ ಇರಲಿ, ತೈಲ ಉತ್ಪನ್ನಗಳ ಬೆಲೆಗಳನ್ನು ದೈನಂದಿನ ಪರಿಪಾಠದಂತೆ ಕೇಂದ್ರ ಸರಕಾರ ಹೆಚ್ಚಿಸುತ್ತಿರುವುದನ್ನು ವಿರೋಧಿಸಿ, ಕಾಂಗ್ರೆಸ್ ಸೋಮವಾರ (ಸೆ 10) ಭಾರತ್ ಬಂದ್ ಗೆ ಕರೆನೀಡಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದು. ಜೆಡಿಎಸ್ ಕೂಡಾ ಬಂದ್ ಗೆ ಬೆಂಬಲ ನೀಡಿದೆ. ಅಲ್ಲಿಗೆ, ಆಡಳಿತ ಪಕ್ಷವೇ ಬಂದ್ ಗೆ ಬೆಂಬಲ ನೀಡಿದ ಅಪರೂಪದ ಉದಾಹರಣೆಗೆ ಇದು ಸೇರ್ಪಡೆಯಾಗಲಿದೆ.
ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?
ಬಂದ್ ಅನ್ನೋದು, ಕನ್ನಡಿಗರಿಗೆ ಹೊಸದೇನಲ್ಲ. ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳ ನಾಚಿಸುವಂತೆ ರಾಜ್ಯದಲ್ಲಿ ಬಂದ್ ನಡೆದೆಕೊಂಡು ಬರುತ್ತಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೂತು ಬಂದ್ ಗೆ ಕರೆನೀಡುವವರಿಗೆ ಇದೊಂದು ಹವ್ಯಾಸದಂತಾಗಿ ಹೋಗಿದೆ. ಇದುವರೆಗಿನ ಬಂದ್ ನಿಂದಾಗಿ, ರಾಜ್ಯಕ್ಕೆ ಏನಾದರೂ ಲಾಭವಾಗಿದೆಯಾ ಎನ್ನುವುದು ಯಾರಿಗೂ ಬೇಕಾಗಿಲ್ಲ.
ರಕ್ತ ಕೊಟ್ಟೇವು, ನೀರು ಕೊಡೆವು ಎಂದು ಕಾವೇರಿ, ಮಹದಾಯಿ, ಹೊಗೇನಿಕಲ್ ವಿಚಾರದಲ್ಲಿ ಎಷ್ಟೊಂದು ಬಂದ್ ಗಳು ರಾಜ್ಯದಲ್ಲಿ ನಡೆದು ಹೋಯಿತು. ಆದರೆ, ಇದರಿಂದ ಕನ್ನಡಿಗರಿಗೆ ಏನಾದರೂ ಲಾಭವಾಗಿದೆಯಾ, ತಮಿಳುನಾಡು, ಮಹಾರಾಷ್ಟ್ರಕ್ಕೆ ಈಗಲೂ ಹರಿದು ಹೋಗುತ್ತಿರುವುದು ನೀರೇ ಹೊರತು ರಕ್ತವಲ್ಲ.
ಭಾರತ್ ಬಂದ್ ಬಿಸಿ ಜನಸಾಮಾನ್ಯರಿಗೆ ಮಾತ್ರ ತಟ್ಟುತ್ತದೆ- ಟ್ವೀಟ್ಸ್
ಹಿಂದಿನ ಯುಪಿಎ ಸರಕಾರ ತೈಲ ಬಾಂಡ್ ಮೂಲಕ ಮಾಡಿದ್ದ 2 ಲಕ್ಷ ಕೋಟಿ ರೂ. ಸಾಲವನ್ನು 70,000 ಕೋಟಿ ಬಡ್ಡಿ ಸಮೇತ ಹಾಲೀ ಕೇಂದ್ರ ತೀರಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ ಎನ್ನುವುದು, ತಮ್ಮ ಸರಕಾರವನ್ನು ಸಮರ್ಥಿಸಿಕೊಳ್ಳುವ ಹೇಳಿಕೆ ಎಂದು ಒಂದು ಹಂತದಲ್ಲಿ ಒಪ್ಪಿಕೊಳ್ಳಬಹುದಾದರೂ, ತೈಲ ಉತ್ಪನ್ನಗಳ ಬೆಲೆ ಗಗನಕ್ಕೇರಿರುವುದಕ್ಕೆ ಬರೀ ಕೇಂದ್ರವನ್ನು ದೂಷಿಸುವುದು ಸರಿಯಾ, ರಾಜ್ಯದ ಪಾಲು ಇದರಲಿಲ್ಲವೇ?
ತೈಲ ಉತ್ಪನ್ನಗಳ ಮೂಲಕ ರಾಜ್ಯಕ್ಕೆ ಬೊಕ್ಕಸಕ್ಕೆ ಬಂದ ಹಣ
ಕಳೆದ ಮೂರು ಹಣಕಾಸು ಅವಧಿಯಲ್ಲಿ ತೈಲ ಉತ್ಪನ್ನಗಳ ಮೂಲಕ ರಾಜ್ಯಕ್ಕೆ ಬೊಕ್ಕಸಕ್ಕೆ ಸೇರಿದ ಜನಸಾಮಾನ್ಯರ ತೆರಿಗೆ ಹಣದ ಲೆಕ್ಕ ಹೀಗಿದೆ (ಕೋಟಿಯಲ್ಲಿ) 2014-15ರಲ್ಲಿ 8,668, 2015-16ರಲ್ಲಿ 8,652, 2016-17ರಲ್ಲಿ 11,103. ಜುಲೈ 2018ರ ವರೆಗೆ ಪೆಟ್ರೋಲ್ ಮೇಲೆ ಇದ್ದ ರಾಜ್ಯ ಸರಕಾರದ ತೆರಿಗೆ ಶೇ. 30 ಮತ್ತು ಡೀಸೆಲ್ ಮೇಲೆ ಇದ್ದ ತೆರಿಗೆ ಶೇ. 19. ಅಂದರೆ, ಸೆಂಟ್ರಲ್ ಎಕ್ಸೈಸ್ ಡ್ಯೂಟಿ ಹಾಕಿ ಕೇಂದ್ರ ರಾಜ್ಯಕ್ಕೆ ನೀಡಿದರೆ, ರಾಜ್ಯ ಸರಕಾರ ಅದರ ಮೇಲೆ ವ್ಯಾಟ್ ಮತ್ತು ಡೀಲರ್ಸ್ ಕಮಿಷನ್ ಅನ್ನು ಸೇರಿಸಿ ಗ್ರಾಹಕರಿಗೆ ನೀಡುತ್ತೆ.
ಸಾಲಮನ್ನಾಗೆ ಸಂಪನ್ಮೂಲ ಕ್ರೋಢೀಕರಿಸಲು ಬೆಲೆ ಏರಿಕೆ
ಆದರೆ, ಚುನಾವಣಾಪೂರ್ವ ಭರವಸೆಯನ್ನು ಈಡೇರಿಸಲು, ರೈತರ ಸಾಲಮನ್ನಾಗೆ ಸಂಪನ್ಮೂಲ ಕ್ರೋಢೀಕರಿಸುವ ಸಲುವಾಗಿ ಹಾಲೀ ಸರಕಾರ ಮತ್ತೆ ತೈಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ. 32 (ಪೆಟ್ರೋಲ್) ಮತ್ತು ಶೇ. 21ಕ್ಕೆ (ಡೀಸೆಲ್) ಜುಲೈ ತಿಂಗಳಿನಿಂದ ಏರಿಸಿತ್ತು. ಅಂದರೆ, ಉ.ದಾ. 63 ರೂಪಾಯಿಗೆ ಕೇಂದ್ರದಿಂದ ಸಿಗುವ ಪೆಟ್ರೋಲ್, ರಾಜ್ಯದ ಜನತೆಯ ವಾಹನದ ಟ್ಯಾಂಕಿಗೆ ತುಂಬುವಾಗ 83 ರೂಪಾಯಿ ಆಗಿರುತ್ತದೆ. ಅದೇ ರೀತಿ, 62 ರೂಪಾಯಿಗೆ ಸಿಗುವ ಡೀಸೆಲ್, 75 ರೂಪಾಯಿ ಆಗಿರುತ್ತದೆ.
ಖಂಡಿತಾ ಈ ಎಲ್ಲಾ ವಿಚಾರಗಳಿಗೆ ಭಾರತ ಬಂದ್ ಆಗಲೇಬೇಕು : ಟಿ.ಎ.ಶರವಣ
ಡಾಲರ್ಸ್ ವಿನಿಮಯ ಬೆಲೆ ಗಗನಕ್ಕೇರಿರುವುದು
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಗಳು ಪ್ರತೀದಿನವೂ ನಾಟ್ಯವಾಡುತ್ತಿರುವುದು ಒಂದು ಕಡೆ, ಡಾಲರ್ಸ್ ವಿನಿಮಯ ಬೆಲೆ ಗಗನಕ್ಕೇರಿರುವುದು ಇನ್ನೊಂದೆಡೆ. ಹೀಗಿರುವಾಗ, ತೈಲ ಉತ್ಪನ್ನಗಳ ಬೆಲೆಏರಿಕೆಗೆ ಬರೀ ಕೇಂದ್ರದ ಕಡೆಗೆ ಬೊಟ್ಟು ತೋರಿಸುವ ಬದಲು, ಜನಪರ ಸರಕಾರ ತಾವು ವಿಧಿಸುವ ತೆರಿಗೆ ಹಣವನ್ನು ಕಮ್ಮಿ ಮಾಡುವ ಬಗ್ಗೆ ಗಂಭೀರವಾಗಿ ಚಿಂತಿಸಬಹುದು. ತೈಲ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆಯ ಅಡಿಯಲ್ಲಿ ತರಲೂ ರಾಜ್ಯಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ.
ತೈಲ ಉತ್ಪನ್ನಗಳ ಮೇಲೆ ವ್ಯಾಟ್ ಕಮ್ಮಿಯಾಗುತ್ತಿಲ್ಲ
ಆದರೆ, ಇಲ್ಲಿ ಏನಾಗುತ್ತದೆ ಎಂದರೆ ದೇಶದಲ್ಲಿ ಬಹುತೇಕ ಇರುವುದು ಬಿಜೆಪಿ ಸರಕಾರ, ಮೊದಲು ಆ ರಾಜ್ಯದಲ್ಲಿ ಕಮ್ಮಿ ಮಾಡಲು ಹೇಳಿ, ಆಮೇಲೆ ಇಲ್ಲಿ ಮಾಡೋಣ ಎನ್ನುವ ರಾಜಕೀಯ ಲೆಕ್ಕಾಚಾರ ಒಂದು ಗುಂಪಿನಿಂದ, ಮನಮೋಹನ್ ಸಿಂಗ್ ಸರಕಾರದಲ್ಲಿ ಪೆಟ್ರೋಲ್ ಬೆಲೆ ಏನು ಕಮ್ಮಿಯಿತ್ತಾ, ನಿಮ್ಮ ಅವಧಿಯಲ್ಲಾದ ಸಾಲವನ್ನು ಈಗ ತೀರಿಸಲಾಗುತ್ತಿದೆ ಎನ್ನುವುದು ಇನ್ನೊಂದು ಗುಂಪಿನ ವಾದ. ತೈಲ ಉತ್ಪನ್ನಗಳ ಮೇಲೆ ವ್ಯಾಟ್ ಕಮ್ಮಿಯಾಗುತ್ತಿಲ್ಲ. ಇದರಿಂದಾಗಿ, end usersಗೆ ಬೆಲೆ ಇಳಿಕೆಯಾಗುವುದು ಸದ್ಯದ ಮಟ್ಟಿಗೆ ಗಗನ ಕುಸುಮವೇ..
ಸಾರ್ವಜನಿಕ ಅಸ್ತಿಪಾಸ್ತಿಗಳಿಗೆ ಹಾನಿ
ಒಂದು ದಿನದ ಬಂದ್ ನಿಂದ ದೇಶಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ, ಸಾರ್ವಜನಿಕ ಅಸ್ತಿಪಾಸ್ತಿಗಳಿಗೆ ಹಾನಿ, ಬಂದ್ ನ ರಜೆಯಿಂದಾಗಿ ಕಾರ್ಮಿಕನಿಗೆ ಭಾನುವಾರದಂದು ಕೆಲಸ ಮಾಡುವ ಅನಿವಾರ್ಯತೆ. ಅದನೆಲ್ಲಾ ಪಕ್ಕಕ್ಕಿಟ್ಟು, ದೇಶದ ಎಲ್ಲಾ ಸಮಸ್ಯೆಗಳಿಗೆ ಒಂದು ಬಂದ್ ಪರಿಹಾರ ನೀಡುವುದಾಗಿದ್ದರೆ, ಪಕ್ಷಾತೀತ ಬೆಂಬಲಿಗರಾಗಿ ಬಂದ್ ಗೆ ಬೆಂಬಲ ನೀಡುವುದರಲ್ಲಿ ತಪ್ಪೇನಿದೆ? ಆದರೆ, ಬಂದ್ ಕರೆಯ ಹಿಂದೆ ರಾಜಕೀಯ ಆಶೋತ್ತರಗಳು ಇರಬಾರದಷ್ಟೇ..