ತೈಲ ಬಳಕೆ ಕುರಿತು ಸಲಹೆ: ಸೌದಿ ವಿರುದ್ಧ ಭಾರತ ಅಸಮಾಧಾನ
ನವದೆಹಲಿ, ಮಾರ್ಚ್ 26: ಕಚ್ಚಾತೈಲದ ಬೆಲೆ ನಿಯಂತ್ರಿಸಲು ತೈಲ ಸಂಗ್ರಹವನ್ನು ತಗ್ಗಿಸಬೇಕು ಎಂಬ ಸೌದಿ ಅರೇಬಿಯಾದ ತೈಲ ಸಚಿವರ ಹೇಳಿಕೆಯು ಸಂವೇದನಾರಹಿತವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಖಂಡಿಸಿದ್ದಾರೆ.
'ನಮ್ಮ ಹಳೆಯ ಸ್ನೇಹಿತರಿಂದ ವ್ಯವಹಾರ ಜ್ಞಾನವಿಲ್ಲದ ಉತ್ತರ ಬಂದಿದೆ. ಈ ರೀತಿಯ ನಡವಳಿಕೆಗಳಿಗೆ ನಾನು ವಿನಮ್ರತೆಯಿಂದ ಅಸಮ್ಮತಿ ಸೂಚಿಸುತ್ತೇನೆ. ನಮ್ಮ ಸಂಗ್ರಹಗಳನ್ನು ಯಾವಾಗ ಮತ್ತು ಹೇಗೆ ಬಳಸಬೇಕು ಎಂಬ ಬಗ್ಗೆ ನಿಶ್ಚಿತವಾಗಿಯೂ ಭಾರತ ತನ್ನದೇ ಆದ ಕಾರ್ಯತಂತ್ರ ಹೊಂದಿದೆ. ನಮ್ಮ ಹಿತಾಸಕ್ತಿಗಳ ಬಗ್ಗೆ ನಾವು ಜಾಗ್ರತರಾಗಿದ್ದೇನೆ' ಎಂದು ಧರ್ಮೇಂದ್ರ ಪ್ರಧಾನ್ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಹೇಳಿದರು.
"ಎಷ್ಟು ದಿನ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮುಂದುವರೆಯುತ್ತೆ?"
ಬೆಂಬಲ ಬೆಲೆಗಳ ಗುರಿಯ ನಡುವೆ ಒಪೆಕ್ ಮತ್ತು ಸೌದಿ ತೈಲ ಉತ್ಪಾದನೆ ಕಡಿತಗೊಳಿಸಿರುವುದನ್ನು ಭಾರತ ಟೀಕಿಸಿತ್ತು. ತನ್ನ ಕಚ್ಚಾ ತೈಲದ ಮೂಲವಾದ ಗಲ್ಫ್ಗಳಾಚೆಗೆ ಪರ್ಯಾಯವಾಗಿ ತೈಲ ಪೂರೈಕೆಯನ್ನು ಹುಡುಕಬೇಕು ಎಂದು ಪ್ರಧಾನ್ ಸಲಹೆ ನೀಡಿದ್ದರು.
ಏರುತ್ತಿರುವ ತೈಲ ಬೆಲೆಗಳ ನಡುವೆ ಒಪೆಕ್ ಮತ್ತು ಅದರ ಮಿತ್ರ ದೇಶಗಳು ಪೂರೈಕೆ ನಿಯಂತ್ರಣಗಳನ್ನು ಸಡಿಲಿಸಬೇಕು ಎಂದು ಧರ್ಮೇಂದ್ರ ಪ್ರಧಾನ್ ಹಲವು ಬಾರಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೌದಿಯ ತೈಲ ಸಚಿವ ರಾಜಕುಮಾರ ಅಬ್ದುಲಾಜಿಜ್ ವಿನ್ ಸಲ್ಮಾನ್, ಕಳೆದ ವರ್ಷ ಕಡಿಮೆ ಮೊತ್ತಕ್ಕೆ ಖರೀದಿಸಿ ಸಂಗ್ರಹಿಸಿರುವ ಮೀಸಲು ತೈಲಗಳನ್ನು ಭಾರತ ಬಳಸಿಕೊಳ್ಳಲಿ ಎಂದು ಸಲಹೆ ನೀಡಿದ್ದರು.