ರಾಮನ ಭಾರತದಲ್ಲಿ 93, ರಾವಣನ ಲಂಕಾದಲ್ಲಿ 51: ಪೆಟ್ರೋಲ್ ದರಕ್ಕೆ ಸ್ವಾಮಿ ಹೋಲಿಕೆ!
ನವದೆಹಲಿ, ಫೆಬ್ರವರಿ 2: ದೇಶದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ನೂರು ರೂಪಾಯಿ ಗಡಿ ಸಮೀಪಿಸುತ್ತಿದೆ. ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗುತ್ತಲೇ ಇದೆ. ಇದರಿಂದ ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗ ತೀವ್ರವಾಗಿ ತತ್ತರಿಸುತ್ತಿದೆ. ಜನಸಾಮಾನ್ಯರು ತೈಲ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಇದರ ನಡುವೆ ತೈಲ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಮತ್ತಷ್ಟು ಸೆಸ್ ವಿಧಿಸಿದೆ. ಇದರಿಂದ ತೈಲ ಬೆಲೆ ಮತ್ತಷ್ಟು ಹೆಚ್ಚಾಗುವ ಭೀತಿ ಮೂಡಿದೆ. ವಿವಿಧ ಅಬಕಾರಿ ಸುಂಕಗಳನ್ನು ಕಡಿತಗೊಳಿಸಿರುವುದರಿಂದ ಬೆಲೆ ಏರಿಕೆಯಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದರೂ, ಜನರಲ್ಲಿ ಆ ನಂಬಿಕೆ ಉಳಿದಿಲ್ಲ.
ಬಜೆಟ್ 2021: ಸೆಸ್ ಹೆಚ್ಚಾದರೂ ಪೆಟ್ರೋಲ್, ಡೀಸೆಲ್, ಮದ್ಯದ ದರದಲ್ಲಿ ಬದಲಾವಣೆ ಇಲ್ಲ
ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ಬಳಿಕ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ತೀವ್ರ ಆಕ್ಷೇಪಕ್ಕೆ ಒಳಗಾಗಿದೆ. ಮುಖ್ಯವಾಗಿ ತೈಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಸ್ವತಃ ಎನ್ಡಿಎದ ಸದಸ್ಯರೇ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಒಳಗಿದ್ದೇ ಅದನ್ನು ಕಟುವಾಗಿ ಟೀಕಿಸುವ ಸಂಸದ ಸುಬ್ರಮಣಿಯನ್ ಸ್ವಾಮಿ ರಾಮಾಯಣದ ಪಾತ್ರಗಳಿಗೆ ಪೆಟ್ರೋಲ್ ದರವನ್ನು ಥಳುಕು ಹಾಕಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಮುಂದೆ ಓದಿ.
ರಾಮನ ಭಾರತದಲ್ಲಿ ಪೆಟ್ರೋಲ್ ದರ
'ರಾಮನ ಭಾರತದಲ್ಲಿ ಪೆಟ್ರೋಲ್ ದರ 93 ರೂಪಾಯಿ. ಸೀತೆಯ ನೇಪಾಳದಲ್ಲಿ 53 ರೂಪಾಯಿ ಮತ್ತು ರಾವಣನ ಲಂಕಾದಲ್ಲಿ 51 ರೂಪಾಯಿ' ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ರಾಮಾಯಣ ಪುರಾಣದಲ್ಲಿನ ಮೂರು ಪ್ರಮುಖ ಪಾತ್ರಗಳೊಂದಿಗೆ ನಂಟು ಹೊಂದಿರುವ ದೇಶಗಳಲ್ಲಿನ ಪೆಟ್ರೋಲ್ ದರ ಹೋಲಿಕೆ ಜನರಿಗೆ ವಿಶಿಷ್ಟ ಎನಿಸಿದೆ.
ಬಜೆಟ್ 2021 ನಂತರದ ಪರಿಣಾಮ: ಪೆಟ್ರೋಲ್ ಬೆಲೆ ಕಥೆಯೇನು?
ರಾಮನಿಗೆ ಖರ್ಚು ಜಾಸ್ತಿ!
ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಕೆಲವರು ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. 'ನೀವು ಅರ್ಥಶಾಸ್ತ್ರಜ್ಞರು. ಹಾಗಾಗಿ ಇಲ್ಲಿ ಬೇಡಿಕೆ ಮತ್ತು ಪೂರೈಕೆಯ ಆಟವನ್ನು ಗಮನಿಸಬೇಕು. ಭಾರತದ ರಾಮ, ಸೀತಾಳನ್ನು ಮದುವೆಯಾಗಲು ನೇಪಾಳಕ್ಕೆ ಪ್ರಯಾಣಿಸಬೇಕಾಯಿತು. ಆಮೇಲೆ ರಾವಣನನ್ನು ಸಂಹರಿಸಲು ಶ್ರೀಲಂಕಾಕ್ಕೆ ಹೋಗಬೇಕಾಯಿತು. ಇಷ್ಟೆಲ್ಲ ಓಡಾಟದ ಕಾರಣ ಭಾರತದ ರಾಮನಿಗೆ ಬೆಲೆ ಜಾಸ್ತಿ' ಎಂದು ಹೇಳಿದ್ದಾರೆ.
ಭಾರತದ ಅನುದಾನ ವೆಚ್ಚ ಹೆಚ್ಚು
ಇನ್ನು ಕೆಲವರು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ತೈಲ ಬೆಲೆ ಏರಿಕೆಯನ್ನು ಕೂಡ ಬೆಂಬಲಿಸಿದ್ದಾರೆ. ನೇಪಾಳ ಮತ್ತು ಶ್ರೀಲಂಕಾಗಳು ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ರಕ್ಷಣೆಗೆ 4.7 ಲಕ್ಷ ಕೋಟಿ ವ್ಯಯಿಸಬೇಕಿಲ್ಲ. ಶೇ 50ರಷ್ಟು ಜನತೆಗೆ ಉಚಿತ ಊಟ ನೀಡುವ ಅಗತ್ಯವಿಲ್ಲ. ಅವರು ಒಂದು ವರ್ಷದಲ್ಲಿ 11,000 ಕಿಮಿ ಹೆದ್ದಾರಿ ನಿರ್ಮಿಸಬೇಕಿಲ್ಲ ಎಂದು ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕಿ ಅದನ್ನು ರಕ್ಷಣೆ ಮತ್ತು ಮೂಲಸೌಕರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಪೆಟ್ರೋಲ್ 100ರು ಗಡಿದಾಟಿದ ಬಳಿಕ ಕೊನೆಗೂ ತೆರಿಗೆ ಇಳಿಕೆ
ತೈಲ ಬೆಲೆ ಹೆಚ್ಚಳಕ್ಕೆ ಸಮರ್ಥನೆ
ಬಿಜೆಪಿಯ ಅನೇಕ ಬೆಂಬಲಿಗರು ಸುಬ್ರಮಣಿಯನ್ ಸ್ವಾಮಿ ವಿರುದ್ಧ ಮುಗಿಬಿದ್ದಿದ್ದಾರೆ. ನೇಪಾಳದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 110 ರೂ ಇದೆ. ಸತ್ಯ ಗೊತ್ತಿಲ್ಲದೆ ಸುಳ್ಳು ಸುಳ್ಳೇ ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನುಕೆಲವರು ವಾಹನಗಳ ಬೆಲೆಯನ್ನು ಪ್ರಕಟಿಸಿ, ಈ ವಾಹನದ ಬೆಲೆ ಭಾರತದಲ್ಲಿಯೇ ಕಡಿಮೆ ಇದೆ ಎಂದಿದ್ದಾರೆ. ಭಾರತದ ಜನಸಂಖ್ಯೆ ದೊಡ್ಡದಿದೆ. ಇಷ್ಟು ಜನರಿಗೆ ಅಗತ್ಯ ಸೌಕರ್ಯ, ಅನುದಾನಗಳನ್ನು ನೀಡಲು ತೈಲ ಬೆಲೆ ಹೆಚ್ಚಳ ಅಗತ್ಯವಾಗಿದೆ ಎಂದಿದ್ದಾರೆ.