ರೈತರ ಮೇಲೆ ಕೇಸ್: ಕೋರ್ಟ್ ಆಚೆ ಇತ್ಯರ್ಥಕ್ಕೆ ಮುಂದಾದ ಪೆಪ್ಸಿಕೋ
ನವದೆಹಲಿ, ಏಪ್ರಿಲ್ 27: ತನ್ನ ಅನುಮತಿಯಿಲ್ಲದೆ ಪೇಟೆಂಟ್ ಹೊಂದಿರುವ ತಳಿಯ ಆಲೂಗಡ್ಡೆ ಬೆಳೆದ ಕಾರಣಕ್ಕೆ ಗುಜರಾತ್ನ ನಾಲ್ವರು ರೈತರ ವಿರುದ್ಧ ದಾವೆ ಹೂಡಿರುವ ಪೆಪ್ಸಿಕೋ, ಪ್ರಕರಣವನ್ನು ನ್ಯಾಯಾಲಯದ ಆಚೆಗೆ ಇತ್ಯರ್ಥಪಡಿಸಿಕೊಳ್ಳಲು ಸಿದ್ಧ ಇರುವುದಾಗಿ ಹೇಳಿದೆ.
ಬಡ ರೈತರನ್ನು ನ್ಯಾಯಾಲಯಕ್ಕೆ ಎಳೆದ ಘಟನೆಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೆಪ್ಸಿಕೋ ಈ ತೀರ್ಮಾನ ಕೈಗೊಂಡಿದೆ.
ತನ್ನ ನೋಂದಣಿಯಾದ ಆಲೂಗಡ್ಡೆ ತಳಿಯನ್ನು ಅಕ್ರಮವಾಗಿ ಬಳಕೆ ಮಾಡಿರುವ ಜನರ ವಿರುದ್ಧದ ಪ್ರಕರಣವನ್ನು ಬಗೆಹರಿಸಿಕೊಳ್ಳಲು ಪೆಪ್ಸಿಕೋ ಇಂಡಿಯಾ ಪ್ರಸ್ತಾವ ಮಾಡಿದೆ. ಆದರೆ ತಾನು ನೋಂದಣಿ ಮಾಡಿಕೊಂಡಿರುವ ಎಫ್ಸಿ-5 ತಳಿಯ ಆಲೂಗಡ್ಡೆ ಬೀಜಗಳನ್ನು ಖರೀದಿ ಮಾಡಿ, ಉತ್ಪನ್ನವನ್ನು ತನಗೇ ಮಾರಾಟ ಮಾಡುವುದಾಗಿ ಒಪ್ಪಂದಕ್ಕೆ ಸಹಿಹಾಕಲು ಆಸಕ್ತಿ ತೋರಿಸಿದರೆ ಮಾತ್ರ ಖಟ್ಲೆಯನ್ನು ಹಿಂದಕ್ಕೆ ಪಡೆದುಕೊಳ್ಳಬಹುದು ಎಂಬ ಷರತ್ತನ್ನು ಮುಂದಿಟ್ಟಿದೆ.
'ಈ ರೈತರು ಆಲೂಗಡ್ಡೆ ಬೆಳೆಯುವುದಕ್ಕೆ ಕಂಪೆನಿಯೊಂದಿಗೆ ಸೇರಿಕೊಳ್ಳುವ ಒಪ್ಪಂದ ಮಾಡಿಕೊಳ್ಳುವ ಮೂಲಕ ಅದರ ಭಾಗವಾಗುವಂತಹ ಆಫರ್ಅನ್ನು ಈಗಾಗಲೇ ನೀಡಲಾಗಿದೆ. ಈ ಯೋಜನೆಯು ಅಧಿಕ ಫಸಲು, ಸಮೃದ್ಧ ಗುಣಮಟ್ಟ ಮತ್ತು ಅತ್ಯುತ್ತಮ ಬೆಲೆಯನ್ನು ಒದಗಿಸಲಿದೆ. ಈ ಕಾರ್ಯಕ್ರಮದ ಭಾಗವಾಗಲು ಅವರು ಬಯಸದೆ ಇದ್ದರೆ, ಅವರು ಒಪ್ಪಂದಕ್ಕೆ ಸರಳವಾಗಿ ಸಹಿ ಹಾಕಿ ಲಭ್ಯವಿರುವ ಬೇರೆ ತಳಿಯ ಆಲೂಗಡ್ಡೆಗಳನ್ನು ಬೆಳೆಯಬಹುದು' ಎಂದು ಪೆಪ್ಸಿಕೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆಲೂಗಡ್ಡೆ ಬೆಳೆದ ರೈತರನ್ನು ಕೋರ್ಟಿಗೆಳೆದ ಪೆಪ್ಸಿಕೋ ಬಹಿಷ್ಕಾರಕ್ಕೆ ಅಭಿಯಾನ
ಕಂಪೆನಿಯ ಸಹಭಾಗಿತ್ವದ ಆಲೂಗಡ್ಡೆ ಕೃಷಿ ಯೋಜನೆ ಅತ್ಯುತ್ತಮವಾಗಿದೆ. ಎಫ್ಸಿ-5 ಆಲೂಗಡ್ಡೆ ಬೀಜಗಳನ್ನು ಬಳಸಿ ಜೀವನೋಪಾಯ ಸುಧಾರಿಸಲು ಪ್ರಬಲವಾದ ನೆಲಗಟ್ಟನ್ನು ಒದಗಿಸಲಿದೆ ಎಂದು ಅದು ಹೇಳಿಕೊಂಡಿದೆ.
ಲೇಸ್ ಚಿಪ್ಸ್ಗಳನ್ನು ತಯಾರಿಸುವ ಆಲೂಗಡ್ಡೆಯ ತಳಿಯನ್ನು ಪೆಪ್ಸಿಕೋ ನೋಂದಾಯಿಸಿಕೊಂಡಿದ್ದು, ತನ್ನ ಅನುಮತಿಯಿಲ್ಲದೆ ಅದರ ಬೀಜಗಳನ್ನು ಮಾರುವಂತಿಲ್ಲ, ಅದನ್ನು ಬಳಸಿ ಬೆಳೆ ಬೆಳೆಯುವಂತಿಲ್ಲ ಹಾಗೂ ಮಾರುಕಟ್ಟೆಗೆ ಮಾರಾಟ ಮಾಡುವಂತಿಲ್ಲ ಎಂದು ಹೇಳಿದೆ.
ರೈತರು ಸಹಿ ಹಾಕಲಿ-ಪೆಪ್ಸಿಕೋ
ನೋಂದಾಯಿತ ಎಫ್ಸಿ-5 ಆಲೂಗಡ್ಡೆ ಬೀಜಗಳನ್ನು ಖರೀದಿ ಮಾಡಲು ಮತ್ತು ಬೆಳೆದ ಉತ್ಪನ್ನಗಳನ್ನು ಕಂಪೆನಿಗೇ ಮಾರಾಟ ಮಾಡಲು ಕಂಪೆನಿಯೊಂದಿಗೆ ಒಪ್ಪಂದಕ್ಕೆ ರೈತರು ಸಹಿಹಾಕಬೇಕು. ಇಲ್ಲದಿದ್ದರೆ, ಭವಿಷ್ಯದಲ್ಲಿ ಈ ತಳಿಯನ್ನು ಖರೀದಿಸುವುದಿಲ್ಲ ಮತ್ತು ಬೆಳೆಯುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ಪೆಪ್ಸಿಕೋ ಆಗ್ರಹಿಸಿದೆ.
ತನ್ನ ಸಹಭಾಗಿತ್ವದ ಆಲೂಗಡ್ಡೆ ಕೃಷಿ ಯೋಜನೆಯಲ್ಲಿ ತೊಡಗಿರುವ ಸಾವಿರಾರು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಒಯ್ದಿದ್ದಾಗಿ ಪೆಪ್ಸಿಕೋ ತಿಳಿಸಿದೆ.
12 ವರ್ಷ ಬಳಿಕ ಪೆಪ್ಸಿಕೋಗೆ 'ಸಿಇಒ' ಇಂದ್ರಾ ನೂಯಿ ಗುಡ್ ಬೈ!
ಮೊದಲು ಕೇಸ್ ವಾಪಸ್ ತೆಗೆದುಕೊಳ್ಳಿ
ಆದರೆ, ಪೆಪ್ಸಿಕೋದ ಆಫರ್ಅನ್ನು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ತಿರಸ್ಕರಿಸಿದೆ. ನಮಗೆ ನ್ಯಾಯಾಲಯದ ಆಚೆಗೆ ಇತ್ಯರ್ಥಪಡಿಸುವುದು ಬೇಡ. ರೈತರ ಮೇಲೆ ಹೂಡಿರುವ ದಾವೆಯನ್ನು ಮೊದಲು ಹಿಂದಕ್ಕೆ ಪಡೆದುಕೊಳ್ಳಿ ಎಂದು ಅದು ಆಗ್ರಹಿಸಿದೆ. ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಪ್ರವೇಶಕ್ಕೂ ಒತ್ತಾಯಿಸಲಾಗಿದೆ. ಪೆಪ್ಸಿಕೋ ಹೂಡಿರುವ ದಾವೆಯು 2001ರ ಸಸ್ಯ ವೈವಿಧ್ಯಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ.
ತಮಿಳುನಾಡಿನಲ್ಲಿ ಪೆಪ್ಸಿ, ಕೋಕಾಕೋಲಾಗೆ ನಿಷೇಧ
|
1.05 ಕೋಟಿ ರೂ. ದಂಡ ಕಟ್ಟಿ!
ಗುಜರಾತ್ನ ಸಬರ್ಕಾಂತಾದಲ್ಲಿ ನಾಲ್ವರು ರೈತರು ನೋಂದಾಯಿತ ಎಫ್ಎಲ್-2027 ಆಲೂಗಡ್ಡೆ ತಳಿಯನ್ನು ಅಕ್ರಮವಾಗಿ ಬೆಳೆಯುತ್ತಿದ್ದಾರೆ ಎಂದು ಆರೋಪಿಸಿ ಪೆಪ್ಸಿಕೋ ಇಂಡಿಯಾ ಏಪ್ರಿಲ್ 11ರಂದು ಖಟ್ಲೆ ಹೂಡಿತ್ತು. ಪ್ರತಿ ರೈತರೂ ಇದಕ್ಕೆ ಪರಿಹಾರವಾಗಿ ತಲಾ 1.05 ಕೋಟಿ ರೂ ದಂಡ ತೆರಬೇಕು ಎಂದು ಅದು ಒತ್ತಾಯಿಸಿತ್ತು.
ರೈತರು ಆಲೂಗಡ್ಡೆ ಬೆಳೆಯಲು ಕಂಪೆನಿಯಿಂದ ಬೀಜ ಖರೀದಿಸದ ಕಾರಣಕ್ಕೆ ತೀವ್ರ ನಷ್ಟವಾಗಿದೆ ಎಂದು ಪೆಪ್ಸಿಕೋ ಆರೋಪಿಸಿತ್ತು.
|
ತನಿಖೆಗೆ ಆಯುಕ್ತರ ನೇಮಕ
ಕಂಪೆನಿಯ ಅರ್ಜಿ ಪರಿಗಣಿಸಿದ್ದ ದೀಸಾ ನ್ಯಾಯಾಲಯ, ಈ ವಿವಾದದ ಬಗ್ಗೆ ವಿಚಾರಣೆ ನಡೆಸಲು ಕೋರ್ಟ್ನ ಹಿರಿಯ ಕ್ಲರ್ಕ್ ಅವರನ್ನು ಆಯುಕ್ತರನ್ನಾಗಿ ನೇಮಿಸಿತ್ತು. ಆ ಹಳ್ಳಿಯ ಇಬ್ಬರು ರೈತರ ಜಮೀನಿಗೆ ತೆರಳಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅಲ್ಲದೆ, ರೈತರು ಪೆಪ್ಸಿಕೋ ಬಳಸುತ್ತಿರುವ ಐದು ಬಗೆಯ ಬೀಜಗಳನ್ನು ಬಳಸಿ ಆಲೂಗಡ್ಡೆ ಬಿತ್ತನೆ ಮಾಡಬಾರದು ಎಂದು ಹೇಳಿತ್ತು.