ವಿರೋಧಕ್ಕೆ ಮಣಿದ ಪೆಪ್ಸಿಕೋ: ರೈತರ ಮೇಲಿನ ಕೇಸ್ ವಾಪಸ್
ನವದೆಹಲಿ, ಮೇ 2: ತನ್ನ ಅನುಮತಿ ಇಲ್ಲದೆ ನೋಂದಾಯಿತ ಆಲೂಗಡ್ಡೆಯನ್ನು ಬೆಳೆದಿದ್ದಕ್ಕಾಗಿ ಗುಜರಾತ್ನ ಅಹಮದಾಬಾದ್ನ ನಾಲ್ವರು ಬಡ ರೈತರ ಮೇಲೆ ಹೂಡಿದ್ದ ದಾವೆಯನ್ನು ಪೆಪ್ಸಿಕೋ ಇಂಡಿಯಾ ವಾಪಸ್ ಪಡೆದುಕೊಂಡಿದೆ.
ಇದರಿಂದ ಪೆಪ್ಸಿಕೋ ವಿರುದ್ಧ ವ್ಯಕ್ತವಾಗಿದ್ದ ಆಕ್ರೋಶ ಮತ್ತು ಅಭಿಯಾನಕ್ಕೆ ಯಶಸ್ಸು ಸಿಕ್ಕಿದೆ. ದಾವೆಯಿಂದ ಕಂಗಾಲಾಗಿದ್ದ ಬಡ ರೈತರು ನಿಟ್ಟುಸಿರುಬಿಟ್ಟಿದ್ದಾರೆ.
ಆಲೂಗಡ್ಡೆ ಬೆಳೆದ ರೈತರನ್ನು ಕೋರ್ಟಿಗೆಳೆದ ಪೆಪ್ಸಿಕೋ ಬಹಿಷ್ಕಾರಕ್ಕೆ ಅಭಿಯಾನ
'ಸರ್ಕಾರದೊಂದಿಗಿನ ಚರ್ಚೆಗಳ ಬಳಿಕ ರೈತರ ವಿರುದ್ಧ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ಕಂಪೆನಿ ನಿರ್ಧರಿಸಿದೆ' ಎಂದು ಪೆಪ್ಸಿಕೋ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
ಪೆಪ್ಸಿಕೋ ತನ್ನ ಉತ್ಪನ್ನವಾದ 'ಲೇಸ್' ಚಿಪ್ಸ್ ತಯಾರಿಕೆಗೆಂದೇ ಬಳಸುವ ಎಫ್ಸಿ5 ನೋಂದಾಯಿತ ಆಲೂಗಡ್ಡೆ ತಳಿಯನ್ನು ತನ್ನ ಅನುಮತಿಯಿಲ್ಲದೆ ಬೆಳೆದು ಮಾರಾಟ ಮಾಡುತ್ತಿರುವುದಕ್ಕೆ ನಾಲ್ವರು ರೈತರ ವಿರುದ್ಧ ಪ್ರಕರಣ ದಾಖಲಿಸಿತ್ತು. ತನ್ನ ಹೆಸರಿನಲ್ಲಿ ಇರುವ ಆಲೂಗಡ್ಡೆಯನ್ನು ನಿಮಯ ಮೀರಿ ಬೆಳೆದಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಪರಿಹಾರಕ್ಕಾಗಿ ನಾಲ್ವರು ರೈತರು ತಲಾ 1.05 ಕೋಟಿ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿತ್ತು.
ರೈತರ ಮೇಲೆ ಕೇಸ್: ಕೋರ್ಟ್ ಆಚೆ ಇತ್ಯರ್ಥಕ್ಕೆ ಮುಂದಾದ ಪೆಪ್ಸಿಕೋ
ಇದು ವಿವಾದಕ್ಕೆ ಕಾರಣವಾಗಿತ್ತು. ಪೆಪ್ಸಿಕೋ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪೆಪ್ಸಿಕೋ, ಈ ರೈತರು ತನ್ನೊಂದಿಗೆ ಒಪ್ಪಂದ ಮಾಡಿಕೊಂಡು ಆಲೂಗಡ್ಡೆ ಬೆಳೆದು ತನಗೆ ಮಾರಾಟ ಮಾಡಬೇಕು ಎಂದು ನ್ಯಾಯಾಲಯದ ಆಚೆಗೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಷರತ್ತು ಒಡ್ಡಿತ್ತು. ಆದರೆ, ಇದಕ್ಕೆ ಒಪ್ಪಂದ ರೈತ ಸಂಘಟನೆಗಳು ರೈತರ ಮೇಲಿನ ದಾವೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಪಟ್ಟು ಹಿಡಿದಿತ್ತು.