ಸುದ್ದಿ ಸ್ಫೋಟ: ದಿನಸಿಯನ್ನು ಕಳ್ಳತನದಿಂದ ಮಾರಿಕೊಳ್ಳುವ ಬಿಎಸ್ಎಫ್
ಶ್ರೀನಗರ, ಜ. 11: ಗಡಿ ಕಾಯುವ ಸೈನಿಕರಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಬಿಎಸ್ಎಫ್ ಯೋಧ ಯಾದವ್ ವೀಡಿಯೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ್ದ ಮಾಹಿತಿಗೆ ಪೂರಕವಾಗಿ ಜಮ್ಮು ಕಾಶ್ಮೀರದ ಗಡಿ ಭಾಗದ ಜನತೆ ಬಿಎಸ್ಎಫ್ ಅಧಿಕಾರಿಗಳೇ ಖುದ್ದಾಗಿ ದಿನಸಿ ಸಾಮಾನು ಮಾರಾಟ ಮಾಡುತ್ತಿರುವ ಸುಳಿವು ನೀಡಿದ್ದಾರೆ.
ಜಮ್ಮು ಕಾಶ್ಮೀರ ಗಡಿ ಭಾಗದಲ್ಲಿರುವ ಕೆಲವಾರು ಜನರು ಬಿಎಸ್ಎಫ್ ಅಧಿಕಾರಿಗಳು ಸರ್ಕಾರದಿಂದ ತಮಗೆ ಸರಬರಾಜಾಗುವ ಅಕ್ಕಿ, ಬೇಳೆ, ಅಡುಗೆ ತೈಲ ಮತ್ತಿತರ ಪಡಿತರ ಸಾಮಾನುಗಳು ಸೇರಿದಂತೆ ತರಕಾರಿಗಳು, ಪೆಟ್ರೋಲು, ಡೀಸೆಲ್ ಗಳನ್ನು ಮಾರುಕಟ್ಟೆ ದರದ ಅರ್ಧದಷ್ಟು ದರಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.
ಶ್ರೀನಗರದ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಹುಮ್ ಹಮಾ ಬಿಎಸ್ಎಫ್ ಕ್ಯಾಂಪಿನ ಬಳಿಯೇ ಇಂಥ ಅವ್ಯವಹಾರಗಳು ನಡೆಯುತ್ತಿವೆ ಎಂದು ಜನರು ಹೇಳುತ್ತಿದ್ದಾರೆ.
ಮಾಹಿತಿ ಕೊಟ್ಟವರಾರೂ ತಮ್ಮ ಹೆಸರನ್ನು ಹೇಳಲು ಇಚ್ಛಿಸಿಲ್ಲ. ಮತ್ತೂ ಕೆಲವರು ಹೆಸರುಗಳನ್ನು ಹೇಳಿದ್ದಾರಾದರೂ ಗೌಪ್ಯತೆ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಇದೇ ಪ್ರದೇಶದಲ್ಲಿ ಪೀಠೋಪಕರಣದ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬ, ಕ್ಯಾಂಪಿನಲ್ಲಿರುವ ಬಿಎಸ್ಎಫ್ ಅಧಿಕಾರಿಗಳ ಕಛೇರಿ ಬಳಕೆಗಾಗಿ ಆಗಾಗ ಪೀಠೋಪಕರಣಗಳನ್ನು ಕೊಂಡೊಯ್ಯುವ ಅಧಿಕಾರಿಗಳು, ಇದರಲ್ಲಿ ಸಿಕ್ಕಾಬಟ್ಟೆ ಕಮೀಷನ್ ಹೊಡೆಯುತ್ತಾರೆಂದು ಆರೋಪಿಸಿದ್ದಾನೆ.
ಇದನ್ನೇ, ಬಿಎಸ್ಎಫ್ ಯೋಧ ಯಾದವ್ ಹೇಳಲು ಯತ್ನಿಸಿದ್ದರು. ಆದರೆ, ಆತನ ವಿರುದ್ಧವೇ ಹರಿಹಾಯ್ದಿದ್ದ ಬಿಎಸ್ಎಫ್, ಯಾದವ್ ಒಬ್ಬ ಮದ್ಯವ್ಯಸನಿ, ಅವಿಧೇಯ ಹಾಗೂ ಹುಚ್ಚ ಎಂದು ದೂರಿತ್ತು.