ದೇವರ ಶಾಪ: ಉತ್ತರಾಖಂಡ್ ವಿಕೋಪಕ್ಕೆ ಕಾರಣವೇ "ದೇವಿ"ಯ ಕೋಪ!?
ಡೆಹ್ರಾಡೂನ್, ಫೆಬ್ರವರಿ.11: ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದ ರೈನಿ ಗ್ರಾಮದ ಸುತ್ತಮುತ್ತಲಿನ ನದಿಗಳಲ್ಲಿ ಪ್ರವಾಹ ಸೃಷ್ಟಿಗೆ ದೇವರ ಶಾಪವೇ ಮುಖ್ಯ ಕಾರಣ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
Recommended Video
ಉತ್ತರಾಖಂಡ್ ನಲ್ಲಿ ಪ್ರವಾಹ ಸೃಷ್ಟಿಗೆ ಹಿಮನದಿಯ ಸ್ಫೋಟ ಕಾರಣವಲ್ಲ ಎಂದು ತಜ್ಞರ ತಂಡ ಸ್ಪಷ್ಟಪಡಿಸಿದೆ. ಹಿಮಪರ್ವತಗಳ ಸ್ಫೋಟದಿಂದ ಹಿಮನದಿ ಉಕ್ಕಿ ಹರಿಯುತ್ತಿಲ್ಲ. ಬದಲಿಗೆ ಹಿಮಪಾತದಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಹೇಳಲಾಗುತ್ತಿದೆ.
ರೋಚಕ ಸುದ್ದಿ: ಉತ್ತರಾಖಂಡ್ ಹಿಮಪಾತದ ಹಿಂದೆ 46 ವರ್ಷಗಳ ಹಿಂದಿನ ಕಥೆ!?
ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದ ರೈನಿ ಗ್ರಾಮದ ಸುತ್ತಮುತ್ತಲಿನಲ್ಲಿ ಹಿಮನದಿ ಪ್ರವಾಹಕ್ಕೆ ದೇವರ ಶಾಪವೇ ಮುಖ್ಯ ಕಾರಣ ಎಂದು ಗ್ರಾಮಸ್ಥರು ನಂಬುತ್ತಿದ್ದಾರೆ. ಪ್ರಕೃತಿ ವಿಕೋಪಕ್ಕೂ ದೇವರ ಕೋಪಕ್ಕೆ ಎಲ್ಲಿದೆಲ್ಲಿನ ನಂಟು. ಆದರೆ ಗ್ರಾಮಸ್ಥರು ಮಾತ್ರ ಇದೊಂದು ಕಾರಣವನ್ನು ಬಲವಾಗಿ ನಂಬಿದ್ದಾರೆ. ಅಷ್ಟಕ್ಕೂ ದೇವರಿಗೆ ಕೋಪ ತರಿಸುವಂತಾ ಕಾರ್ಯವಾದರೂ ಏಕೆ. ಜನರು ಇಂಥದೊಂದು ನಂಬಿಕೆ ಇಟ್ಟುಕೊಳ್ಳುವುದರ ಹಿಂದಿನ ರಹಸ್ಯವೇನು ಎನ್ನುವುದರ ಬಗ್ಗೆ ತಿಳಿಯಲು ಮುಂದೆ ಓದಿ.
"ದೇವಿ" ಕೋಪಕ್ಕೆ ದೇವಾಲಯ ತೆರವು ಕಾರಣ"
ಉತ್ತರಾಖಂಡ್ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದ ರೈನಿ ಗ್ರಾಮದ ಸಮೀಪದಲ್ಲಿ ಸ್ಥಾಪಿತಗೊಂಡಿದ್ದ ದೇವಿಯ ದೇವಸ್ಥಾನವನ್ನು ಹೈಡ್ರೋ ಪವರ್ ಪ್ರಾಜೆಕ್ಟ್ ಕಾರ್ಯಕ್ಕಾಗಿ ತೆರವುಗೊಳಿಸಲಾಗಿತ್ತು. ಇದೊಂದು ಕಾರ್ಯ ಈ ಪ್ರದೇಶ ವಿನಾಶಕ್ಕೆ ಕಾರಣವಾಯಿತು. ದೇವಿಯ ಕೋಪದಿಂದ ಪ್ರವಾಹವೇ ಸೃಷ್ಟಿಯಾಯಿತು ಎನ್ನುವುದು ಇಲ್ಲಿನ ಗ್ರಾಮಸ್ಥರ ವಾದವಾಗಿದೆ.
8 ವರ್ಷದ ಹಿಂದಿನ ಪ್ರವಾಹದ ಹಿಂದೆಯೂ ಇದೇ ನಂಬಿಕೆ
ಕಳೆದ 2013ರಲ್ಲಿಯೂ ಇಡೀ ದೇಶವೇ ಬೆಚ್ಚಿ ಬೀಳುವಂತಾ ಪ್ರವಾಹ ಪರಿಸ್ಥಿತಿ ಉತ್ತರಾಖಂಡ್ ನಲ್ಲಿ ಸೃಷ್ಟಿಯಾಗಿತ್ತು. ಅಂದು ಕೂಡಾ ಗ್ರಾಮಸ್ಥರು ದೇವರ ಶಾಪದಿಂದಲೇ ಈ ಪ್ರಕೃತಿ ವಿಕೋಪ ಉಂಟಾಗಿದೆ ಎಂದು ನಂಬಿಕೆ ಇಟ್ಟುಕೊಂಡಿದ್ದರು. ಅಂದು ರುದ್ರಪ್ರಯಾಗ್ ಜಿಲ್ಲೆಯ ಶ್ರೀನಗರ್ ಸಮೀಪದಲ್ಲಿ "ಧಾರಿ ದೇವಿಯ ದೇಗುಲ"ವಿತ್ತು. ಹೈಡಲ್ ಪವರ್ ಪ್ರಾಜೆಕ್ಟ್ ಯೋಜನೆಯಿಂದ ಈ ದೇವಸ್ಥಾನವು ಮುಳುಗುವ ಭೀತಿ ಹಿನ್ನೆಲೆ ಈ ದೇಗುಲವನ್ನು ಸ್ಥಳಾಂತರಿಸಲಾಗಿತ್ತು. ದೇವತೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಹೇಳಲಾಗುತ್ತಿತ್ತು. ಆದರೆ ತದನಂತರ ಸೃಷ್ಟಿಯಾದ ಪ್ರವಾಹದಲ್ಲಿ ದೇವಸ್ಥಾನವಿದ್ದ ಮುಖ್ಯ ಸ್ಥಳವೇ ಕೊಚ್ಚಿಕೊಂಡು ಹೋಯಿತು. ದೇವಿಯ ಕೋಪದಿಂದಲೇ ಇಂಥ ಯಮಸ್ವರೂಪ ಪ್ರವಾಹ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ನಂಬಿಕೆ ಇಟ್ಟುಕೊಂಡಿದ್ದರು ಮತ್ತು ಹಾಗೆಯೇ ಹೇಳಿದ್ದರು.
ಕಾರ್ಮಿಕರ ರಕ್ಷಣೆಗೆ ಡ್ರೋನ್ ಕ್ಯಾಮರಾ ಬಳಕೆ
ಉತ್ತರಾಖಂಡ್ ನಲ್ಲಿ ಸೃಷ್ಟಿಯಾಗಿರುವ ಹಿಮಪಾತ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಮೋಲಿ ಜಿಲ್ಲೆಯ ಸುರಂಗವೊಂದರಲ್ಲಿ 25 ರಿಂದ 35 ಕಾರ್ಮಿಕರು ಸಿಲುಕಿದ್ದು, ಇವರ ರಕ್ಷಣೆಗೆ ಡ್ರೋನ್ ಕ್ಯಾಮರಾ ಮತ್ತು ರಿಮೋಟ್ ಕಂಟ್ರೋಲ್ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಅವರೆಲ್ಲ ಜೀವಂತವಾಗಿಯೇ ಸಿಗಲಿ ಎಂದು ನಿರೀಕ್ಷಿಸಲಾಗುತ್ತಿದೆ.
ಉತ್ತರಾಖಂಡ್ ಪ್ರವಾಹದಿಂದಾದ ಸಾವು-ನೋವು
ಹಿಮಪಾತ ಮತ್ತು ಹಿಮನದಿ ಪ್ರವಾಹದಲ್ಲಿ ಇದುವರೆಗೂ 32 ಮಂದಿ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ 197 ಜನರು ನಾಪತ್ತೆಯಾಗಿದ್ದಾರೆ. ಹಿಮಪಾತದಿಂದಾಗಿ ಅಲಕ್ ನಂದ್ ನದಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ನೀರಿನ ಪ್ರಮಾಣ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಎನ್ ಟಿಪಿಸಿ 480 ಮೆಗಾ ವ್ಯಾಟ್ ತಪೋವನ-ವಿಷ್ಣುಗಢ್ ಹೈಡ್ರೋ ಪವರ್ ಪ್ರಾಜೆಕ್ಟ್ ಮತ್ತು 13.2 ಮೆಗಾ ವ್ಯಾಟ್ ನ ರಿಷಿಗಂಗಾ ಹೈಡಲ್ ಪ್ರಾಜೆಕ್ಟ್ ಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿನ ಹಲವು ಮನೆಗಳು ಕೊಚ್ಚಿ ಹೋಗಿರುವುದು ವರದಿಯಾಗಿದೆ.
600 ಭದ್ರತಾ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ
ಹಿಮಪಾತ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಉತ್ತರಾಖಂಡ್ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ರೇನಿ ಪಲ್ಲಿ, ಪಾಂಗ್, ಲಟಾ, ಸುರೈತೋಟಾ, ಸುಕಿ, ಭಲ್ಗೋನ್, ತೋಲ್ಮಾ, ಫಾಗ್ರಸು, ಲೊಂಗ್ ಸೇಗ್ದಿ, ಗಹಾರ್, ಭಂಗ್ಯೂಲ್, ಜುವಾಗ್ವಾಡ್, ಜುಗ್ಜು ಸೇರಿದಂತೆ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನಾ ಪಡೆಯ 600ಕ್ಕೂ ಹೆಚ್ಚು ಸಿಬ್ಬಂದಿಯು ಚಮೋಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.