ಅನಧಿಕೃತ ಲಾಕ್ಡೌನ್ ಸಮಯದಲ್ಲಿ ಇಎಂಐ ಕಟ್ಟಲು ಸಾಧ್ಯವಾಗುತ್ತಿದೆಯೇ ಜನರ ಪ್ರತಿಕ್ರಿಯೆ ಹೀಗಿದೆ
ಬೆಂಗಳೂರು, ಮೇ 05: ಕೊರೊನಾ ಸೋಂಕಿನಿಂದಾಗಿ ಜನರ ಜೀವನ ತತ್ತರಿಸಿ ಹೋಗಿದೆ. ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮವೂ ನೆಲ ಕಚ್ಚಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲೇ ಪೆಟ್ಟು ತಿಂದಿದ್ದ ಮಂದಿ ಇದುವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ, ಈಗ ಕೊರೊನಾ ಎರಡನೇ ಅಲೆ ಬಂದಿದ್ದು ರಾಜ್ಯಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದ್ದು ಜನ ಜೀವನ ಮತ್ತಷ್ಟು ಹೈರಾಣಾಗಿದೆ.
ಪ್ರತಿಯೊಬ್ಬರೂ ಇಎಂಐ ನಂಬಿಯೇ ವಸ್ತುಗಳನ್ನು ಕೊಳ್ಳುತ್ತಾರೆ, ಪೂರ್ತಿ ಹಣ ಕೊಟ್ಟು ವಸ್ತುಗಳನ್ನು ಖರೀದಿ ಮಾಡುವಷ್ಟು ಎಲ್ಲರ ಬಳಿ ಹಣವಿಲ್ಲ. ಮೊಬೈಲ್, ವಾಷಿಂಗ್ ಮಷಿನ್, ಫ್ರಿಡ್ಜ್, ಬೈಕ್, ಆಟೋ, ಕಾರು ಎಲ್ಲಕ್ಕೂ ಇಎಂಐ ಕಟ್ಟಬೇಕು.
ಇದೀಗ ಇಎಂಐ ಕೊಟ್ಟಲು ವಿನಾಯಿತಿ ನೀಡಿ ಎನ್ನುವ ಒತ್ತಾಯವೂ ಕೇಳಿಬಂದಿದೆ. ದಿನದ ಕೂಲಿ ನಂಬಿ ಜೀವನ ಮಾಡುತ್ತಿದ್ದರೂ, ತನ್ನ ಶಕ್ತಿ ಬಗ್ಗೆ ಜನರಿಗೆ ನಂಬಿಕೆ ಹೆಚ್ಚು, ಇಂದು ಕೆಲಸ ಮಾಡುತ್ತೇನೆ ಹಣ ಸಂಪಾದನೆ ಮಾಡಿಯೇ ಮಾಡುತ್ತೇನೆ ಎನ್ನುವ ನಂಬಿಕೆ. ಆದರೆ ಈ ಅನಧಿಕೃತ ಲಾಕ್ಡೌನ್ ಎನ್ನುವುದು ಅವರ ಶಕ್ತಿಯ ಮೇಲೆಯೇ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.
ಕೆಲವು ಸಂಘ ಸಂಸ್ಥೆಗಳಿಂದ ಸಾಲ ಪಡೆದವರಿದ್ದಾರೆ, ಪುಟ್ಟ ಮನೆ ನಿರ್ಮಿಸಲು ಬ್ಯಾಂಕ್ನಿಂದ ಸಾಲ ಮಾಡಿದವರಿದ್ದಾರೆ. ಆದರೆ ಇವರ್ಯಾರಿಗೂ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಈ ಕುರಿತು ಒನ್ಇಂಡಿಯಾ ಕನ್ನಡವು 'ಈ ಅನಧಿಕೃತ ಲಾಕ್ಡೌನ್ ಸಮಯದಲ್ಲಿ ನಿಮ್ಮ ಇಎಂಐಗಳನ್ನು ಕಟ್ಟಲು ಸಾಧ್ಯವಾಗುತ್ತಿದೆಯೇ' ಎಂಬ ಪ್ರಶ್ನೆಯೊಂದನ್ನು ಜನರ ಮುಂದಿಟ್ಟಿತ್ತು, ಅದಕ್ಕೆ ಜನರು ನೀಡಿರುವ ಪ್ರತಿಕ್ರಿಯೆ ಹೀಗಿದೆ.
'ಜನರು ಇಎಂಐ ಎಲ್ಲಿಂದ ಕಟ್ಟುತ್ತಾರೆ, ದುಡಿಮೆಯೇ ಇಲ್ಲ, ಕಾರು ಲೋನ್, ಬೈಕ್ ಲೋನ್ , ಆಟೋ ಲೋನ್, ಮೊಬೈಲ್ ಲೋನ್, ಸಂಘ ಸಂಸ್ಥೆಗಳಿಂದ ಪಡೆದ ಸಾಲ, ದಿನದ ಸಂಬಳ ನಂಬಿ ಬದುಕುವವರಿದ್ದಾರೆ. ಕಂಪನಿಗಳ ತಿಂಗಳ ಸಂಬಳದವರಿಗೆ ಯಾವುದೇ ಚಿಂತೆ ಇಲ್ಲ ಆದರೆ ಅದೇ ಅವರಿಗೂ ಅರ್ಧ ಸಂಬಲ ಹಾಕಿದರೆ ಇವರಿಗೂ ಒದ್ದಾಟ ಆರಂಭವಾಗುತ್ತದೆ' ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಇಎಂಐ ಕಟ್ಟಲು ಹೇಗೆ ಸಾಧ್ಯ, ಎಲ್ಲಿಗೆ ಹೋಗಿ ದುಡಿಯಬೇಕು, ಎಲ್ಲಿಂದ ಹಣ ಒಟ್ಟು ಮಾಡಬೇಕು, , ತುಂಬಾ ಕಷ್ಟವಾಗುತ್ತಿದೆ ಜೀವನ ಎಂದು ನೋವು ತೋಡಿಕೊಂಡಿದ್ದಾರೆ.