ಜನ ವಿರೋಧಿ ಚಟುವಟಿಕೆ ಆರೋಪ, ಬಿಜೆಡಿಯಿಂದ ಶಾಸಕ ಉಚ್ಚಾಟನೆ
ಭುವನೇಶ್ವರ, ನ.29: ಜನ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಬಿಜು ಜನತಾದಳ(ಬಿಜೆಡಿ)ಯಿಂದ ಶಾಸಕರೊಬ್ಬರನ್ನು ಉಚ್ಚಾಟನೆ ಮಾಡಲಾಗಿದೆ. ಆಡಳಿತಾರೂಢ ಬಿಜೆಡಿಯ ಶಾಸಕ ಪ್ರದೀಪ್ ಪಾಣಿಗ್ರಾಹಿ ಮೇಲೆ ಇಂಥ ಆರೋಪ ಕೇಳಿ ಬಂದಿದ್ದು, ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವರಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಡಿ ವಕ್ತಾರರು ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಪಕ್ಷದಿಂದ ಹೊರ ಹಾಕುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಗೋಪಾಲ್ ಪುರ್ ಕ್ಷೇತ್ರದ ಶಾಸಕ ಪ್ರದೀಪ್ ಪ್ರಾಣಿಗ್ರಾಹಿ ಅವರನ್ನು ಜನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಸಿಎಂ ನವೀನ್ ಪಟ್ನಾಯಕ್ ಅವರು ಉಚ್ಚಾಟನೆ ಮಾಡಿದ್ದಾರೆ.
ಮೂರು ಬಾರಿ ಶಾಸಕ ಹಾಗೂ ಮಾಜಿ ಸಚಿವ ಪ್ರದೀಪ್ ಪ್ರಾಣಿಗ್ರಾಹಿ ಅವರು ಈ ರೀತಿ ಪ್ರಾದೇಶಿಕ ಪಕ್ಷವೊಂದರಿಂದ ಜನ ವಿರೋಧಿಯೆಂದು ಉಚ್ಚಾಟನೆಗೊಳ್ಳುತ್ತಿರುವ ಮೊದಲ ನಾಯಕರೆನಿಸಿಕೊಂಡಿದ್ದಾರೆ. ಈ ಮುನ್ನ ಕೆಲ ಸದಸ್ಯರನ್ನು ಇದೇ ಆರೋಪದ ಮೇಲೆ ತೆಗೆದು ಹಾಕಲಾಗಿತ್ತು. ಇದೇ ಮೊದಲ ಬಾರಿಗೆ ಶಾಸಕರ ತಲೆದಂಡವಾಗಿದೆ ಎಂದು ಬಿಜೆಡಿ ಪ್ರಧಾನ ಕಾರ್ಯದರ್ಶಿ ಮನಸ್ ರಂಜನ್ ಮಂಗರಾಜ್ ಅವರು ಹೇಳಿದ್ದಾರೆ.
ಇತ್ತೀಚೆಗೆ ಅಮಾನತುಗೊಂಡ ಅರಣ್ಯ ಸೇವಾ ಅಧಿಕಾರಿ(IFS) ಅಭಯ್ ಕಾಂತ್ ಪಾಠಕ್ ಹಾಗೂ ಅವರ ಪುತ್ರ ಆಕಾಶ್ ಕುಮಾರ್ ಪಾಠಕ್ ಅವರ ಜೊತೆ ಭ್ರಷ್ಟಾಚಾರದಲ್ಲಿ ಶಾಸಕ ಪ್ರದೀಪ್ ತೊಡಗಿದ್ದರು ಎಂದು ಭ್ರಷ್ಟಾಚಾರ ನಿಗ್ರಹ ದಳ ಪುರಾವೆ ಒದಗಿಸಿತ್ತು. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಅಭಯ್ ಕಾಂತ್ ಹಾಗೂ ಆಕಾಶ್ ಕುಮಾರ್ ಇಬ್ಬರು ಸದ್ಯ ಜೈಲಿನಲ್ಲಿದ್ದಾರೆ.
ಗಂಜಾಂ ಜಿಲ್ಲೆಯಲ್ಲಿ ಉದ್ಯೋಗ ಕೊಡಿಸುವ ವಂಚನೆ ಪ್ರಕರಣದಲ್ಲಿ ಇವರಿಬ್ಬರಿಗೆ ಶಾಸಕ ಪ್ರದೀಪ್ ನೆರವಾಗಿದ್ದರು ಎಂಬುದು ಸಾಬೀತಾಗಿದೆ.