ಕ್ಷೀಣಿಸುತ್ತಿರುವ ಹಾರ್ದಿಕ್ ಪಟೇಲ್ ಆರೋಗ್ಯ, ಆಸ್ಪತ್ರೆಗೆ ರವಾನೆ
ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ನಾಯಕ ಹಾರ್ದಿಕ್ ಪಟೇಲ್ ರ ಆರೋಗ್ಯ ಕ್ಷೀಣವಾದ ಹಿನ್ನೆಲೆಯಲ್ಲಿ ಶುಕ್ರವಾರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪಾಟೀದಾರ್ ಸಮುದಾಯದವರಿಗೆ ಮೀಸಲಾತಿ ಹಾಗೂ ರೈತರ ಸಾಲ ಮನ್ನಾಕ್ಕಾಗಿ ಒತ್ತಾಯಿಸಿ ಆಗಸ್ಟ್ 25ರಿಂದ ಹಾರ್ದಿಕ್ ಪಟೇಲ್ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಯಾವ ಕ್ಷಣವೂ ಪ್ರಾಣ ಹೋಗಬಹುದೆಂದು 'ವಿಲ್' ಘೋಷಿಸಿದ ಹಾರ್ದಿಕ್ ಪಟೇಲ್
ಸರಕಾರವು ಬೇಡಿಕೆಗಳನ್ನು ಈಡೇರಿಸುವ ಮಾತುಕತೆಗೆ ಮುಂದಾಗದಿದ್ದರೆ ಗುರುವಾರದಿಂದ ನೀರು ಸೇವಿಸುವುದನ್ನು ಸಹ ನಿಲ್ಲಿಸುತ್ತಾರೆ ಎಂದು ಬುಧವಾರ ರಾತ್ರಿ ಸಮಿತಿಯ ನಾಯಕರು ತಿಳಿಸಿದ್ದರು. ಹಾರ್ದಿಕ್ ಪಟೇಲ್ ಆರೋಗ್ಯ ಸ್ಥಿತಿ ವಿಷಮಿಸುತ್ತಿದೆ ಎಂಬ ವರದಿಗಳು ಬರುತ್ತಿರುವುದರ ಹೊರತಾಗಿಯೂ ಗುಜರಾತ್ ಸರಕಾರ ಯಾವುದೇ ಮಾತುಕತೆಗೆ ಮುಂದಾಗಿಲ್ಲ.
ಹಾರ್ದಿಕ್ ಪಟೇಲ್ ರ ಈ ಉಪವಾಸ ಸತ್ಯಾಗ್ರಹ ಹೋರಾಟವು ಕಾಂಗ್ರೆಸ್ ಪ್ರಾಯೋಜಿತವಾದದ್ದು ಅಂತಲೇ ಗುಜರಾತ್ ಸರಕಾರ ಹೇಳುತ್ತಾ ಬಂದಿದೆ. ಈ ಹೋರಾಟದ ಮಧ್ಯೆ ತನ್ನ ಪ್ರಾಣ ಹೋದರೆ ಮುಂದೆ ಏನು ಮಾಡಬೇಕು ಎಂಬ 'ವಿಲ್' ಕೂಡ ಹಾರ್ದಿಕ್ ಪಟೇಲ್ ಘೋಷಣೆ ಮಾಡಿದ್ದು, ಗುಜರಾತ್ ನ ವಿವಿಧೆಡೆಯಿಂದ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಅಹ್ಮದಾಬಾದ್ ಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬೆಂಬಲ ಸೂಚಿಸಲು ಬರುತ್ತಿದ್ದಾರೆ.