ಕೊರೊನಾ ಎಚ್ಚರಿಕೆ: ಭಾರತೀಯ ರೈಲ್ವೆ ಸಂಚಾರಕ್ಕೂ ಮೊದಲು ನಿಯಮ ಓದಿ!
ನವದೆಹಲಿ, ಮೇ 06: ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹರಡುವಿಕೆ ವೇಗ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತೀಯ ರೈಲ್ವೆ ಸಚಿವಾಲಯ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಭಾರತೀಯ ರೈಲ್ವೆಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣ ಪ್ರವೇಶದಿಂದ ಆರಂಭಿಸಿದ ತಮ್ಮ ಪ್ರಯಾಣದ ಪೂರ್ಣ ಅವಧಿಯಲ್ಲಿ ಮಾಸ್ಕ್ ಧರಿಸುವುದನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಈ ಪೈಕಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಭಾರತೀಯ ರೈಲ್ವೆ ಇಲಾಖೆಯ ನಿಯಮ ಮತ್ತು ಮಾರ್ಗಸೂಚಿಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
ಕೊರೊನಾ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ತಜ್ಞರ ಎಚ್ಚರಿಕೆ
ಬುಧವಾರವಷ್ಟೇ ರೈಲ್ವೆ ಇಲಾಖೆಯ ಎಲ್ಲ ವಲಯಗಳಿಗೆ ನಿಮಯಗಳ ಕುರಿತು ಟಿಪ್ಪಣಿಯನ್ನು ರವಾನಿಸಲಾಗಿದೆ. ರೈಲು ಹತ್ತುವಾಗ ಮತ್ತು ಪ್ರಯಾಣದ ಸಂದರ್ಭಗಳಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ರೈಲ್ವೆ ಮಂಡಳಿಯ ಕಾರ್ಯ ನಿರ್ವಾಹಕ ನಿರ್ದೇಶಕ ನೀರಜ್ ಶರ್ಮಾ ತಿಳಿಸಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಸಿಗುವ ಅಗತ್ಯ ಸೇವೆಗಳ ಬಗ್ಗೆ ಮಾಹಿತಿ
ಭಾರತೀಯ ರೈಲ್ವೆ ಟಿಕೆಟ್ ದರದಲ್ಲಿ ಯಾವುದೇ ರೀತಿ ಊಟ-ಉಪಹಾರ ದರ ಸೇರಿಸಲಾಗಿರುವುದಿಲ್ಲ ಎಂದು ರೈಲ್ವೆ ಮಂಡಳಿ ಕಾರ್ಯ ನಿರ್ವಾಹಕ ನಿರ್ದೇಶಕ ನೀರಜ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಪೂರ್ವ ನಿಗದಿತ ಆಹಾರ ವಿತರಣೆ ಸೇವೆಯನ್ನು ರದ್ದುಗೊಳಿಸಲಾಗಿದೆ. ಪ್ಯಾಕ್ ಮಾಡಿರುವ ಆಹಾರ, ಪ್ಯಾಕ್ ಆಗಿರುವ ಕುಡಿಯುವ ನೀರಿನ ಬಾಟಲಿ, ಚಹಾ, ಕಾಫಿ ಮತ್ತು ಪಾನೀಯಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಸೀಟು ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ಅನುಮತಿ
ದೇಶದಲ್ಲಿ ಈಗಾಗಲೇ ಮೊದಲು ಸೀಟು ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ರೈಲುಗಳಲ್ಲಿ ಪ್ರಯಾಣಿಸುವುದಕ್ಕೆ ಅನುಮತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೇಟಿಂಗ್ ಲಿಸ್ಟ್ ನಲ್ಲಿ ಹೆಸರು ಉಲ್ಲೇಖ ಆಗಿರುವ ಪ್ರಯಾಣಿಕರ ಪ್ರಯಾಣಕ್ಕೆ ಯಾವುದೇ ಅನುಮತಿ ಇರುವುದಿಲ್ಲ. ಇದರ ಜೊತೆಗೆ ಮೊದಲು ಪ್ರಯಾಣಿಕರಿಗೆ ನೀಡುತ್ತಿದ್ದ ಬೆಡ್ ಶೀಟ್ ಮತ್ತು ಪರದೆಗಳನ್ನು ವಾಪಸ್ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಕೊವಿಡ್-19 ಸೋಂಕಿನ ಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮೂರು ಕಡೆಗಳಲ್ಲಿ ತಪಾಸಣೆ ನಡೆಸಿದ ನಂತರವಷ್ಟೇ ರೈಲ್ವೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು.
ರೈಲ್ವೆ ಇಲಾಖೆ ಸಿಬ್ಬಂದಿ ಮತ್ತು ಕುಟುಂಬಕ್ಕೆ ಎಚ್ಚರಿಕೆ
ಭಾರತದ ದಕ್ಷಿಣ ರೈಲ್ವೆ ವಲಯದ ತಿರುಚಿಯಲ್ಲಿ ಇರುವ ಗೋಲ್ಡನ್ ರಾಕ್ ಕಾರ್ಯಾಗಾರವು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಕುರಿತು ಆತಂಕಕಾರಿ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಭಾರತೀಯ ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಅವರ ಜೊತೆ ಸಿಬ್ಬಂದಿ ಕುಟುಂಬ ಸದಸ್ಯರು ಕೂಡಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಒತ್ತಾಯಿಸಲಾಗಿದೆ.
ರೈಲ್ವೆ ಇಲಾಖೆ ಸಿಬ್ಬಂದಿಯಲ್ಲೂ ಕೊರೊನಾವೈರಸ್ ಭಯ
ಬುಧವಾರ ಹೊರಡಿಸಿದ ಸಲಹೆಯಲ್ಲಿ ಉಪ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ 79 ಆರ್ ಟಿ-ಪಿಸಿಆರ್ ಪರೀಕ್ಷೆಗಳ ಪೈಕಿ 42 ಕಾರ್ಯಾಗಾರದ ಆಸ್ಪತ್ರೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಹೇಳಿದ್ದಾರೆ. ಮೇ 4, 202 ರ ಅಂಕಿ-ಅಂಶಗಳ ಪ್ರಕಾರ, 70 ರೈಲ್ವೆ ಇಲಾಖೆಯ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಹಾಮಾರಿ COVID-19ನಿಂದ ಈಗಾಗಲೇ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ 4 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 4,12,262 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, 3,980 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಒಂದು ದಿನದಲ್ಲಿ 3,29,113 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 2,10,77,410 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 1,72,80,844 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 23,01,68 ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 35,66,398 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Recommended Video