ಮಹಾರಾಷ್ಟ್ರ 'ಕಲೆಕ್ಷನ್' ವಿವಾದ: ಲೋಕಸಭೆಯಲ್ಲಿ ಕೋಲಾಹಲ
ನವದೆಹಲಿ, ಮಾರ್ಚ್ 22: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರ ಆರೋಪ ಸಂಸತ್ನಲ್ಲಿ ಸೋಮವಾರ ಭಾರಿ ಕೋಲಾಹಲ ಸೃಷ್ಟಿಸಿತು. ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅನಿಲ್ ದೇಶ್ಮುಖ್ ಅವರ ರಾಜೀನಾಮೆಗೆ ಬೇಡಿಕೆ ಇರಿಸಿದ ವಿರೋಧಪಕ್ಷಗಳು, ಈ ಪ್ರಕರಣದಲ್ಲಿ ಕೇಂದ್ರ ಸಂಸ್ಥೆ ತನಿಖೆಗೆ ಒತ್ತಾಯಿಸಿದವು.
ಎನ್ಸಿಪಿ ಮುಖಂಡರನ್ನು ಇಲ್ಲಿ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿತು. ಇಂತಹ ಅರೋಪಗಳನ್ನು ಎಲ್ಲಕ್ಕಿಂತಲೂ ಅಧಿಕ ಭ್ರಷ್ಟರು ಮಾತ್ರ ಮಾಡಲು ಸಾಧ್ಯ ಎಂದು ಶಿವಸೇನಾ ಪ್ರತ್ಯಾರೋಪ ಮಾಡಿತು. ಮಹಾರಾಷ್ಟ್ರದ ಆಡಳಿತ ಮೈತ್ರಿಕೂಟ ಹಾಗೂ ವಿರೋಧಪಕ್ಷ ಬಿಜೆಪಿಯ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಅನಿಲ್ ದೇಶ್ಮುಖ್ ವಿರುದ್ಧ ತನಿಖೆ: ಸುಪ್ರೀಂಕೋರ್ಟ್ಗೆ ಪರಮ್ಬೀರ್ ಅರ್ಜಿ
ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರು, ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೇರಿದಂತೆ ಅನೇಕ ನಾಯಕರು ಈ ವಿಚಾರ ಪ್ರಸ್ತಾಪಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಹೇಳಿಕೆ ನೀಡಲು ಸಭಾಧ್ಯಕ್ಷರು ಅನುಮತಿ ನೀಡಲಿಲ್ಲ. ಈ ಗದ್ದಲದ ನಡುವೆ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
ಲೋಕಸಭೆಯಲ್ಲಿ ಜಬಲ್ಪುರ ಬಿಜೆಪಿ ಸಂಸದ ರಾಕೇಶ್ ಸಿಂಗ್, ಮಹಾರಾಷ್ಟ್ರವು ಹೊಂದಾಣಿಕೆಯೇ ಆಗದ ಸಮ್ಮಿಶ್ರ ಸರ್ಕಾರವನ್ನು ಹೊಂದಿದೆ. ಇಲ್ಲಿ ಗೃಹಸಚಿವರನ್ನು ರಕ್ಷಿಸುತ್ತಿರುವುದರ ಕಾರಣವೇನು? ಇದನ್ನು ಪಕ್ಷಾತೀತವಾಗಿ ಕೇಂದ್ರ ಸಂಸ್ಥೆಗಳಿಂದ ತನಿಖೆ ನಡೆಸುವ ಅಗತ್ಯವಿದೆ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
'ಮಹಾರಾಷ್ಟ್ರದಲ್ಲಿ ಇರುವುದು ವಸೂಲಿ ಸರ್ಕಾರ. ಇಲ್ಲಿ ಸುಲಿಗೆಯನ್ನು ಸಂಗ್ರಹ ಎಂದು ಸೌಮ್ಯ ಪದಗಳಲ್ಲಿ ಕರೆಯಲಾಗುತ್ತಿದೆ. ಈ ಆರೋಪವು ಬಹಳ ಗಂಭೀರ ಸ್ವರೂಪದ್ದಾಗಿದೆ. ಈ ವಿಚಾರ ಸದನಕ್ಕೆ ಸಂಬಂಧಿಸದೆ ಇರಬಹುದು. ಆದರೆ 100 ಕೋಟಿ ರೂ ಬಹುದೊಡ್ಡ ಮೊತ್ತ' ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದರು.