ಸಂಸತ್ನಲ್ಲಿ ಇಂದು: ಕೃಷಿ ಕಾನೂನುಗಳ ವಾಪಸಾತಿ ಮಸೂದೆ ಮಂಡನೆ
ನವದೆಹಲಿ, ನವೆಂಬರ್ 29:ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19ರಂದು ಘೋಷಿಸಿದಂತೆ ಮೂರು ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು(ನವೆಂಬರ್ 29) ಮಂಡನೆಯಾಗಲಿದೆ.
ಅಧಿವೇಶನವು ಡಿಸೆಂಬರ್ 23ರಂದು ಕೊನೆಗೊಳ್ಳಲಿದೆ. ಜತೆಗೆ ಇನ್ನಿತರೆ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಮಿತಿ ರಚನೆ ಮಾಡಲಾಗುತ್ತಿದೆ, ಇದರಲ್ಲಿ ರೈತರ ಪ್ರತಿನಿಧಿಗಳು ಇರುತ್ತಾರೆ.
Parliament Winter Session Live : ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು 2021 ರ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಲೋಕಸಭೆಯಲ್ಲಿ ಅಧಿವೇಶನದ ವೇಳೆ ಮಂಡಿಸಲಿದ್ದಾರೆ ಎನ್ನಲಾಗಿದೆ.
ಮೂರು ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದ್ದರೂ ಸಹ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾನೂನಿಗೆ ರೈತರ ಬೇಡಿಕೆಯ ವಿಚಾರವಾಗಿ ಸಂಸತ್ತಿನ ಅಧಿವೇಶನ ಬಿರುಸಿನ ಕಲಾಪವಾಗಲಿದೆ ಎಂದು ನಿರೀಕ್ಷಿಸಲಾಗಿದೆ.ವಿರೋಧ ಪಕ್ಷಗಳು ಈಗಾಗಲೇ ರೈತರ ಬೇಡಿಕೆಗೆ ಒಲವು ತೋರಿದ್ದು, ಈ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಲಿವೆ.
ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತಮ್ಮ ಸಂಸದರಿಗೆ ಅಧಿವೇಶನದ ದಿನದಂದು ಹಾಜರಾಗುವಂತೆ ಈಗಾಗಲೇ ವಿಪ್ ಜಾರಿಗೊಳಿಸಿವೆ.ಏತನ್ಮಧ್ಯೆ,ಸಂಸತ್ತಿನ ಅಧಿವೇಶನದ ಮುನ್ನಾದಿನದಂದು ನಡೆದ ಸರ್ವಪಕ್ಷ ಸಭೆಯಲ್ಲಿ 31 ಪಕ್ಷಗಳ 42 ಸಂಸದರು ಭಾಗವಹಿಸಿದ್ದರು.
ತಿಂಗಳ ಅವಧಿಯ ಅಧಿವೇಶನದಲ್ಲಿ 26 ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಪಟ್ಟಿ ಮಾಡಲಾಗಿದೆ.ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 29 ರಿಂದ ಡಿಸೆಂಬರ್ 23 ರ ನಡುವೆ ನಡೆಯಲಿದೆ.
ಉತ್ತರಪ್ರದೇಶ, ಪಂಜಾಬ್ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದ್ದು, ಇಂತಹ ಸಂದರ್ಭದಲ್ಲಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳದಿರಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಕೃಷಿ ಕಾಯಿದೆಗಳ ರದ್ದು ವಿಧೇಯಕವನ್ನು ಉಭಯ ಸದನಗಳಲ್ಲಿ ಅಧಿವೇಶನದ ಮೊದಲ ದಿನವೇ ಮಂಡಿಸಿ, ಪ್ರತಿಭಟನಾನಿರತ ರೈತ ಸಂಘಟನೆಗಳನ್ನು ಸಮಾಧಾನಪಡಿಸುವುದು ಸರಕಾರದ ಉದ್ದೇಶವಾಗಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೂತನ ವಿಧೇಯಕ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿಅಧಿವೇಶನದ ಮೊದಲ ದಿನ ಕಡ್ಡಾಯವಾಗಿ ಹಾಜರಿರುವಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ತಮ್ಮ ಸಂಸದರಿಗೆ ವಿಪ್ ಜಾರಿಗೊಳಿಸಿವೆ.
ಪಂಜಾಬ್ನಲ್ಲಿ ಶುರುವಾದ ನೂತನ ಕೃಷಿ ಕಾಯಿದೆ ವಿರೋಧಿ ಪ್ರತಿಭಟನೆ ಹರಿಯಾಣ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ವ್ಯಾಪಿಸಿದೆ. ಪ್ರತಿಭಟನಾನಿರತ 700 ರೈತರು ಮೃತಪಟ್ಟಿದ್ದಾರೆ. ರೈತರು ಹಲವು ಸುತ್ತಿನ ಮಾತುಕತೆಯಲ್ಲಿ ರದ್ದು ಬೇಡಿಕೆಯೊಂದನ್ನೇ ಮುಂದಿಟ್ಟು ಹಠ ಸಾಧಿಸಿದ್ದಾರೆ.
ಲೋಕಸಭೆಯಲ್ಲಿ ಏನು ನಡೆಯಲಿದೆ?: ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಾ ಸಿಂಗ್ ಹಾಗೂ ಗ್ಯಾನೇಶ್ವರ್ ಪಾಟೀಲ್ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಸದರಾದ ಸೆಂಗುಟ್ಟುವನ್, ಕಲ್ಯಾಣ್ ಸಿಂಗ್, ಆಸ್ಕರ್ ಫರ್ನಾಂಡಿಸ್, ಗೋಡಿಲ್ ಪ್ರಸಾದ್ ಅನುರಾಗಿ, ಶ್ಯಾಮ್ಸುಂದರ್ ಸೋಮಾನಿ, ಬುಧೋಲಿಯಾ, ದೇವವ್ರತ್ ಸಿಂಗ್ ಹಾಗೂ ಹರಿ ದಾನ್ವೆ ಪುಂಡ್ಲಿಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಅವರು ಅಲಹಾಬಾದ್ ವಿಶ್ವವಿದ್ಯಾಲಯಕ್ಕೆ ಇಬ್ಬರು ಸದಸ್ಯರ ಆಯ್ಕೆಗೆ ಪ್ರಸ್ತಾವನೆ ಮಂಡಿಸಲಿದ್ದಾರೆ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, 2020- Farmers' Produce Trade and Commerce (Promotion and Facilitation) Act, 2020
2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, 2020 -Farmers (Empowerment and Protection) Agreement on Price Assurance and Farm Services Act, 2020
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ, 2020 - Essential Commodities (Amendment) Act, 2020
Recommended Video
ರಾಜ್ಯಸಭೆಯಲ್ಲಿ ನಡೆಯುವುದೇನು?: ರಾಜ್ಯಸಭೆಯಲ್ಲಿ ಇತ್ತೀಚೆಗಷ್ಟೇ ಅಗಲಿದ ಆಸ್ಕರ್ ಫರ್ನಾಂಡಿಸ್, ಕೆಬಿ ಶಾನಪ್ಪ, ಡಾ. ಚಂದನ್ ಮಿತ್ರ, ಹರಿ ಸಿಂಗ್ ನಾಲ್ವಾ, ಮೋನಿಕಾ ಹಾಗೂ ಅಬನಿರಾಯ್ಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅಣೆಕಟ್ಟು ಸುರಕ್ಷಣಾ ಮಸೂದೆ 2019ನ್ನು ಮಂಡಿಸಲಿದ್ದಾರೆ.