Winter Session Day 5 Roundup; ಕಲಾಪದ ಮುಖ್ಯಾಂಶಗಳು
ನವದೆಹಲಿ, ಡಿಸೆಂಬರ್ 03; ಕೋವಿಡ್ 2ನೇ ಅಲೆ ಪರಿಸ್ಥಿತಿಯಲ್ಲಿ ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ರಾಜಕೀಯ ನಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ವಿರೋಧ ಪಕ್ಷಗಳ ವಿರುದ್ಧ ಲೋಕಸಭೆಯಲ್ಲಿ ಆರೋಪ ಮಾಡಿದರು.
ಸಂಸತ್ ಅಧಿವೇಶನ ಶುಕ್ರವಾರ 5ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಸಭೆಯ 12 ಸದಸ್ಯರ ಅಮಾನತು ವಿಚಾರರ 5ನೇ ದಿನವೂ ಸುದ್ದಿ ಮಾಡಿತು. ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ವಿರೋಧ ಪಕ್ಷಗಳು ಸದಸ್ಯರ ಅಮಾನತು ಆದೇಶ ಖಂಡಿಸಿ ಇಂದು ಸಹ ಧರಣಿ ಮುಂದುವರೆಸಿದರು.
ಪ್ರತಿಪಕ್ಷಗಳಿಂದ ಸಂಪೂರ್ಣ ಚಳಿಗಾಲ ಅಧಿವೇಶನ ಬಹಿಷ್ಕರಿಸುವ ಸಾಧ್ಯತೆ
ಶುಕ್ರವಾರ ಬಿಜೆಪಿ ಸದಸ್ಯರು ಸದನದಲ್ಲಿ ವಿರೋಧ ಪಕ್ಷಗಳ ಅಸಂವಿಧಾನಿಕ ವರ್ತನೆಯನ್ನು ಖಂಡಿಸಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. "ವಿರೋಧ ಪಕ್ಷಗಳ ದ್ವಂದ್ವ ನಿಲುವನ್ನು ಎತ್ತಿ ಹಿಡಿಯಲು ನಾವು ಇಲ್ಲಿದ್ದೇವೆ" ಎಂದು ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಚಳಿಗಾಲ ಅಧಿವೇಶನದ ಮೊದಲ ದಿನವೇ ಕೃಷಿ ಕಾಯ್ದೆ ರದ್ದು ಮಸೂದೆ ಮಂಡನೆ
ರಾಜ್ಯಸಭಾ ಸದಸ್ಯರ ಅಮಾನತು ವಿವಾದದ ಬಗ್ಗೆ ಮಾತನಾಡಿದ ಸಭಾನಾಯಕ ಪಿಯೂಷ್ ಗೋಯಲ್, "ಹಿಂದಿನ ಅಧಿವೇಶನದಲ್ಲಿನ ತಮ್ಮ ಅಶಿಸ್ತಿನ ವರ್ತನೆಗೆ ಸಂಸದರು ಕ್ಷಮೆಯಾಚಿಸಲು ಸಿದ್ಧರಿಲ್ಲ. ಹೀಗಿರುವಾಗ ರಾಜಿಯಾಗುವುದು ಹೇಗೆ?" ಎಂದು ಪ್ರಶ್ನಿಸಿದರು.
ಆಕ್ಸಿಜನ್ ಕೊರತೆ 4 ಸಾವು; ಲೋಕಸಭೆಯಲ್ಲಿ ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟ ಬಗ್ಗೆ ಚರ್ಚೆ ನಡೆಯಿತು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಾತನಾಡಿ, "ನಾವು ಎಲ್ಲಾ ರಾಜ್ಯಗಳಿಗೂ ಸಹ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೆವು. 19 ರಾಜ್ಯಗಳಿಂದ ವರದಿ ಬಂದಿದೆ. ಪಂಜಾಬ್ ರಾಜ್ಯದಲ್ಲಿ ಮಾತ್ರ ನಾಲ್ವರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ" ಎಂದರು.
"ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ರಾಜಕೀಯ ಆರಂಭವಾಯಿತು. ಕೆಲವು ರಾಜ್ಯಗಳು ಆಕ್ಸಿಜನ್ ಕೋಟಾ ಏರಿಕೆ ಮಾಡುವಂತೆ ಕೋರ್ಟ್ ಮೊರೆ ಹೋದವು. ಅವರ ಪರವಾಗಿ ತೀರ್ಪು ಬಂದಿತು" ಎಂದು ಆರೋಗ್ಯ ಸಚಿವರು ಲೋಕಸಭೆಯಲ್ಲಿ ಹೇಳಿದರು.
"ಆಮ್ಲಜನಕದ ಕೊರತೆಯ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯಗಳಲ ಆಕ್ಸಿಜನ್ ಕೋಟಾ ಹೆಚ್ಚಳದ ನಂತರ ಆಮ್ಲಜನಕದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಮತ್ತು ಉತ್ಪಾದನೆಯನ್ನು ಹೆಚ್ಚಿಸಿದೆ" ಎಂದು ವಿರೋಧ ಪಕ್ಷಗಳ ವಿರುದ್ಧ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಮಸೂದೆ ಮಂಡನೆ; ಸಿಬಿಐ ಮತ್ತು ಇಡಿ ಮುಖ್ಯಸ್ಥರ ಅಧಿಕಾರಾವಧಿಯನ್ನು 5 ವರ್ಷಗಳಿಗೆ ವಿಸ್ತರಣೆ ಮಾಡುವ ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.
ಭಾರತದಲ್ಲಿ ಸಾವುಗಳು ಕಡಿಮೆ; ಕೋವಿಡ್ ವಿಚಾರದ ಕುರಿತ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಲೋಕಸಭೆಯಲ್ಲಿ ಮಾತನಾಡಿ, "3.46 ಕೋಟಿ ಕೋವಿಡ್ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. 4.6 ಲಕ್ಷ ಜನರು ಮಾತ್ರ ಮೃತಪಟ್ಟಿದ್ದಾರೆ. ಇದು ಒಟ್ಟು ಪ್ರಕರಣಗಳ ಶೇ 1.36ರಷ್ಟಾಗಿದೆ. 25,000 ಪ್ರಕರಣಗಳು ಮತ್ತು 340 ಸಾವುಗಳು ಒಂದು ಮಿಲಿಯನ್ ಜನಸಂಖ್ಯೆಗೆ ದಾಖಲಾಗಿದೆ. ಇದು ವಿಶ್ವದಲ್ಲೇ ಅತಿ ಕಡಿಮೆ" ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ; "ನರೇಂದ್ರ ಮೋದಿ ನಾಯಕತ್ವದಲ್ಲಿ ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಕೆಲಸ ಮಾಡಲಾಗುತ್ತಿದೆ. ಹಿಂದಿನ ಸರ್ಕಾರಗಳು ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿತ್ತು. ಆದರೆ ನಾವು ಅವರ ವಿರುದ್ಧ ಆರೋಪ ಮಾಡದೇ ಕೆಲಸ ಮಾಡುತ್ತಿದ್ದೇವೆ" ಎಂದು ಮುನ್ಸುಖ್ ಮಾಂಡವೀಯ ಹೇಳಿದರು.