Winter Session Day 2 Roundup; ಮಂಗಳವಾರದ ಮುಖ್ಯಾಂಶಗಳು
ನವದೆಹಲಿ, ನವೆಂಬರ್ 30; ಸಂಸತ್ ಚಳಿಗಾಲದ ಅಧಿವೇಶನದ ಎರಡನೇ ದಿನವು ಹಲವು ವಿಚಾರಗಳಲ್ಲಿ ಜಟಾಪಟಿ ಏರ್ಪಟ್ಟಿತು. ರಾಜ್ಯಸಭೆಯ 12 ಸದಸ್ಯರ ಅಮಾನತು ಆದೇಶವನ್ನು ವಾಪಸ್ ಪಡೆಯಲು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಒಪ್ಪಿಗೆ ಕೊಟ್ಟಿಲ್ಲ. ಬುಧವಾರದಿಂದ ಧರಣಿ ಆರಂಭಿಸುವುದಾಗಿ ಸದಸ್ಯರು ಹೇಳಿದ್ದಾರೆ.
ಮಂಗಳವಾರ ಹಲವು ವಿಚಾರಗಳ ಕುರಿತು ಚರ್ಚೆಗಳು ನಡೆದವು. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ದಾಳಿಗಳ ಬಗ್ಗೆ ಚರ್ಚೆ ನಡೆಯಿತು. ಆಗ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಉತ್ತರ ನೀಡಿದರು.
ಸಂಸತ್ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆ ಅಂಗೀಕಾರ
"ಈ ವರ್ಷದ ನವೆಂಬರ್ 15ರ ತನಕ 40 ಜನರು ಮೃತಪಟ್ಟಿದ್ದಾರೆ. 72 ಜನರು ಭಯೋತ್ಪಾದಕ ದಾಳಿಗಳಿಂದ ಗಾಯಗೊಂಡಿದ್ದಾರೆ. ಜಮ್ಮ ಮತ್ತು ಕಾಶ್ಮೀರದ ಪೊಲೀಸರು ಸೇರಿ 35 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 86 ಜನರು ಗಾಯಗೊಂಡಿದ್ದಾರೆ" ಎಂದು ಸಚಿವರು ಮಾಹಿತಿ ನೀಡಿದರು.
ಸಂಸತ್ ಅಧಿವೇಶನದಲ್ಲಿ ಪ್ರಶ್ನೆ ಕೇಳಿ, ಗದ್ದಲ ಬೇಡ ಎಂದ ಪ್ರಧಾನಿ ಮೋದಿ
ಸಂಸದರ ಅಮಾನತು ಆದೇಶ; ಚಳಿಗಾಲದ ಅಧಿವೇಶದ ಮೊದಲ ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಅಮಾನತು ಆದೇಶವನ್ನು ವಾಪಸ್ ಪಡೆಯಲು ಸಭಾಪತಿ ವೆಂಕಯ್ಯ ನಾಯ್ಡು ನಿರಾಕರಿಸಿದ್ದು, ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸದಸ್ಯರ ವರ್ತನೆ ಬಗ್ಗೆ ಮಾತನಾಡಿದ ಸಭಾಪತಿ ವೆಂಕಯ್ಯ ನಾಯ್ಡು ಅವರು, "ಕಳೆದ ಮುಂಗಾರು ಅಧಿವೇಶನದ ಕಹಿ ಅನುಭವವು ನಮ್ಮನ್ನು ಇನ್ನೂ ಕಾಡುತ್ತಿದೆ. ಈ ವಿಷಯವನ್ನು ಸೂಕ್ತವಾಗಿ ನಿಭಾಯಿಸುತ್ತೇವೆ ಅಂದುಕೊಂಡಿದ್ದೆ. ಆದರೆ ದುರದೃಷ್ಟವಶಾತ್ ಅದು ಆಗುತ್ತಿಲ್ಲ" ಎಂದು ಎಂ. ವೆಂಕಯ್ಯ ನಾಯ್ಡು ಹೇಳಿದರು.
ರಾಜ್ಯಸಭೆ ಪ್ರವೇಶಿಸದಂತೆ ಟಿಎಂಸಿ ಸಂಸದರಿಗೆ ತಡೆ; ಇದೆಂಥಾ ಪ್ರಜಾಪ್ರಭುತ್ವವೇ?
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಭಾಪತಿಗಳನ್ನು ಸಂಸದರ ಅಮಾನತು ವಾಪಸ್ ಪಡೆಯುವಂತೆ ಮನವಿ ಮಾಡಿದರು. "ಕಳೆದ ಮುಂಗಾರು ಅಧಿವೇಶನದ ಸಮಯದಲ್ಲಿ ಘಟನೆ ನಡೆದಿದೆ. ಈಗ ಹೇಗೆ ಸದಸ್ಯರನ್ನು ಅಮಾನತು ಮಾಡುತ್ತೀರಿ?" ಎಂದು ಪ್ರಶ್ನಿಸಿದರು.
ವಿರೋಧ ಪಕ್ಷಗಳ ಸಭಾತ್ಯಾಗ; 12 ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯದ ಕಾರಣ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಡಿಸೆಂಬರ್ 1ರಿಂದ ಅಮಾನತುಗೊಂಡ ಸದಸ್ಯರು ಧರಣಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಳಿಗಾಲದ ಅಧಿವೇಶನದ ಮುಗಿಯುವ ತನಕ 12 ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯುವುದಿಲ್ಲ ಎಂದು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು. ಅವರು ತಮ್ಮ ಅಮಾನತು ಆದೇಶವನ್ನು ಸಹ ಸಮರ್ಥಿಸಿಕೊಂಡರು. ಅಮಾನತುಗೊಂಡ ಸದಸ್ಯರಿಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಬೆಂಬಲ ಘೋಷಿಸಿ ಸಭಾತ್ಯಾಗ ಮಾಡಿದವು.
ಎನ್ಆರ್ಸಿ ಕುರಿತು ಚರ್ಚೆ; ಮಂಗಳವಾರ ರಾಜ್ಯಸಭೆಯಲ್ಲಿ ಎನ್ಆರ್ಸಿ ಕುರಿತು ಚರ್ಚೆ ನಡೆಯಿತು. ರಾಷ್ಟ್ರಮಟ್ಟದಲ್ಲಿ ಎನ್ಆರ್ಸಿ ಸಿದ್ಧಗೊಳಿಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿತು.
ಕೇಂದ್ರ ಗೃಹ ಇಲಾಖೆ, ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ 20201ರ ಜನವರಿ1ರಿಂದ ಜಾರಿಗೆ ಬಂದಿದೆ. ಸಿಎಎ ವ್ಯಾಪ್ತಿಗೆ ಒಳಪಡುವ ಜನರು ನಿಯಮಗಳನ್ನು ರೂಪಿಸಿದ ಬಳಿಕವೇ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಉತ್ತರ ನೀಡಿತು.
ರಾಷ್ಟ್ರಮಟ್ಟದಲ್ಲಿ ಎನ್ಆರ್ಸಿ ತಯಾರಿಯ ಕುರಿತು ಕೇಂದ್ರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಅಸ್ಸಾಂ ರಾಜ್ಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಎನ್ಆರ್ಸಿಯಲ್ಲಿನ ಸೇರ್ಪಡೆಗೆ ಪೂರಕಪಟ್ಟಿಯನ್ನು ತಯಾರು ಮಾಡಲಾಗಿದೆ. 2021ರಲ್ಲಿ 1,11,287 ಜನರು ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಗೃಹ ಇಲಾಖೆ ಉತ್ತರದಲ್ಲಿ ತಿಳಿಸಿದೆ.
ಓಮಿಕ್ರಾನ್ ಭೀತಿ; ರಾಜ್ಯಸಭೆಯಲ್ಲಿ ಮಂಗಳವಾರ ಕೋವಿಡ್ ರೂಪಾಂತರಿ ಓಮಿಕ್ರಾನ್ ಕುರಿತು ಸಹ ಚರ್ಚೆ ನಡೆಯಿತು. ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಓಮಿಕ್ರಾನ್ ರೂಪಾಂತರದ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವರು ಸ್ಪಷ್ಟಪಡಿಸಿದರು.
ಪ್ರಶೋತ್ತರ ಅವಧಿಯಲ್ಲಿ ಸಚಿವ ಮನ್ಸುಖ್ ಮಾಂಡವಿಯಾ, "ಭಾರತದಲ್ಲಿ ಹೊಸ ಕೋವಿಡ್ 19 ರೂಪಾಂತರದ ಓಮಿಕ್ರಾನ್ನ ಯಾವುದೇ ಪ್ರಕರಣವನ್ನು ಇಲ್ಲಿಯವರೆಗೆ ವರದಿಯಾಗಿಲ್ಲ. ಹೊಸ ರೂಪಾಂತರಿ ಭಾರತವನ್ನು ತಲುಪದಂತೆ ನೋಡಿಕೊಳ್ಳಲು ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಾಗತಿಕವಾಗಿ ಬೆಳವಣಿಗೆಗಳನ್ನು ಗಮನಿಸಿ ಬಂದರುಗಳ ಮೇಲೆ ನಿಗಾ ಇರಿಸಲಾಗಿದೆ" ಎಂದರು.
ಸಾಲ ನೀಡದಂತೆ ನಿಯಮವಿಲ್ಲ; ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕುಗಳ ಸಾಲದ ಬಗ್ಗೆ ಹೇಳಿಕೆ ನೀಡಿದರು, "ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರರಿಗೆ ಸಾಲ ನೀಡದಂತೆ ಯಾವುದೇ ಸೂಚನೆ ನೀಡಿಲ್ಲ" ಎಂದು ಸ್ಪಷ್ಟಪಡಿಸಿದರು.
Recommended Video
ಪ್ರತ್ಯೇಕ ವಿದರ್ಭ ರಾಜ್ಯವಿಲ್ಲ; ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, "ಪ್ರತ್ಯೇಕ ವಿದರ್ಭ ರಾಜ್ಯ ರಚನೆ ಮಾಡುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ" ಎಂದು ಲೋಕಸಭೆಗೆ ತಿಳಿಸಿದರು.