ಗುಜರಾತ್ಗೆ ಆಯುರ್ವೇದ ಸಂಸ್ಥೆಗಳ ರಾಷ್ಟ್ರೀಯ ಮಹತ್ವ: ಪ್ರತಿಪಕ್ಷಗಳ ವಿರೋಧ
ನವದೆಹಲಿ, ಸೆಪ್ಟೆಂಬರ್ 16: ಗುಜರಾತ್ನ ಜಾಮ್ನಗರದಲ್ಲಿರುವ ಅಯುರ್ವೇದ ಸಂಸ್ಥೆಗಳ ಕ್ಲಸ್ಟರ್ಗೆ ರಾಷ್ಟ್ರೀಯ ಮಹತ್ವದ ಸಂಸ್ಥೆಯ ಮಾನ್ಯತೆ ನೀಡುವ ಮಸೂದೆಯನ್ನು ಸಂಸತ್ನಲ್ಲಿ ಬುಧವಾರ ಅನುಮೋದಿಸಲಾಯಿತು.
'ಆಯುರ್ವೇದ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮಸೂದೆ 2020'ಯನ್ನು ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಲಾಯಿತು. ಈ ಮಸೂದೆಯು ಲೋಕಸಭೆಯಲ್ಲಿ ಕಳೆದ ಅಧಿವೇಶನದಲ್ಲಿಯೇ ಅನುಮೋದನೆ ಪಡೆದುಕೊಂಡಿತ್ತು.
ಗುಜರಾತ್ನ ಜಾಮ್ನಗರ್ ಮೂಲದ ಮೂರು ಸಂಸ್ಥೆಗಳಾದ ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆ, ಗುಲಬ್ಕುನ್ವರ್ಬ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಯುರ್ವೇದ ಔಷಧ ವಿಜ್ಞಾನಗಳ ಸಂಸ್ಥೆಗಳು ಇದರಲ್ಲಿ ಸೇರಿಕೊಳ್ಳುತ್ತಿವೆ.
ಕೇರಳ; ಕೋವಿಡ್ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ
ಆಯುರ್ವೇದ ಮತ್ತು ಸಮಾಜಕ್ಕೆ ಅದರ ಪ್ರಯೋಜನವನ್ನು ಶ್ಲಾಘಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆಯುರ್ವೇದವು ಜಗತ್ತಿನ ಆರೋಗ್ಯ ಆರೈಕೆ ವ್ಯವಸ್ಥೆಯನ್ನು ಬಲಪಡಿಸಿದೆ ಎಂದಿದ್ದಾರೆ. 'ಆಯುರ್ವೇದವು ನಮ್ಮ ದೇಶದ ಪುರಾತನ ವೈದ್ಯಕೀಯ ಪದ್ಧತಿ. ಇದರಲ್ಲಿ ಬಹಳಷ್ಟು ಸಾಂಪ್ರದಾಯಿಕತೆ ಮತ್ತು ಬುದ್ಧಿವಂತಿಕೆ ಸೇರಿಕೊಂಡಿದೆ ಎಂದು ಹೇಳಿದ್ದಾರೆ. ಮುಂದೆ ಓದಿ.
ಗುಜರಾತ್ ಆಯ್ಕೆ ಸಮರ್ಥನೆ
'ಆತ್ಮನಿರ್ಭರ ಭಾರತ'ದ ಅಡಿಯಲ್ಲಿ ಸರ್ಕಾರವು ಔಷಧೀಯ ಸಸ್ಯಗಳನ್ನು ಬೆಳೆಸಲು ಮತ್ತು ರೈತರಿಗೆ ಪ್ರೋತ್ಸಾಹ ನೀಡಲು 4,000 ಕೋಟಿ ರೂ ಅನುದಾನ ಬಿಡುಗಡೆಗೆ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.
ಜಾಮ್ನಗರ ಸಂಸ್ಥೆಗಳನ್ನು ಆಯ್ಕೆ ಮಾಡಿರುವುದು ಪಕ್ಷಪಾತವಲ್ಲ. ಇದು 1956ರಲ್ಲಿ ಸ್ಥಾಪನೆಯಾಗಿದ್ದು, ಈ ವಿಭಾಗದಲ್ಲಿ ಬರುವ ಅತ್ಯಂತ ಪ್ರಾಚೀನ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಗುಜರಾತ್ ಸಂಸ್ಥೆಗಳ ಆಯ್ಕೆಯನ್ನು ಅವರು ಸಮರ್ಥಿಸಿಕೊಂಡರು.
65 ದೇಶಗಳಿಗೆ ತರಬೇತಿ
ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿರುವ ಅತ್ಯಂತ ಹಳೆಯ ಆಯುರ್ವೇದ ಸಂಸ್ಥೆ ಇದಾಗಿದೆ. ಕಳೆದ 20 ವರ್ಷಗಳಲ್ಲಿ 65 ದೇಶಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ಕಳೆದ 20 ವರ್ಷಗಳಲ್ಲಿ ವಿವಿಧ ದೇಶಗಳೊಂದಿಗೆ ಸುಮಾರು 30 ಒಪ್ಪಂದಗಳನ್ನು ಇದು ಮಾಡಿಕೊಂಡಿದೆ ಎಂದು ವಿವರಿಸಿದ್ದಾರೆ.
15 ಸದಸ್ಯರ ಸಮಿತಿ
ಈ ಸಂಸ್ಥೆಗಳ ಗುಚ್ಛದ ಪ್ರಸ್ತಾಪವು ಆಯುಷ್ ಸಚಿವರು, ಆಯುಷ್ ಕಾರ್ಯದರ್ಶಿ ಮತ್ತು ಗುಜರಾತ್ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಕಾರ್ಯದರ್ಶಿಯನ್ನು ಒಳಗೊಂಡ 15 ಸದಸ್ಯರ ಸಮಿತಿಯನ್ನು ಹೊಂದಿದೆ. ಇದರಲ್ಲಿ ಲೋಕಸಭೆಯ ಇಬ್ಬರು ಹಾಗೂ ರಾಜ್ಯಸಭೆಯ ಒಬ್ಬರು ಸಂಸದರನ್ನು ಒಳಗೊಂಡಿರಲಿದೆ.
ಆಯುರ್ವೇದ ಕೇಂದ್ರಗಳ ಸ್ಥಿತಿ
ಆದರೆ ಆಯುರ್ವೇದಕ್ಕೆ ಉತ್ತೇಜನ ನೀಡಲು ಗುಜರಾತ್ ಆಯ್ದುಕೊಂಡ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ದೇಶದ ಇತರೆ ಭಾಗಗಳಲ್ಲಿನ ಆಯುರ್ವೇದ ಕೇಂದ್ರಗಳು ಕೆಟ್ಟ ಸ್ಥಿತಿಯಲ್ಲಿವೆ. ಆದರೆ ಸರ್ಕಾರವು ಗುಜರಾತ್ ಮೇಲೆ ಮಾತ್ರ ಗಮನ ಹರಿಸಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡಾ. ಸಂತನು ಸೇನ್ ಆಕ್ಷೇಪಿಸಿದರು.
ಕೇರಳದಲ್ಲಿಯೂ ಘೋಷಿಸಿ
ಕೇರಳವು ಆಯುರ್ವೇದ ಔಷಧದ ತಾಣ. ಆದರೆ ನಿರ್ಧಾರ ತೆಗೆದುಕೊಳ್ಳುವಾಗ ಸರ್ಕಾರ ಕೇರಳದ ಬಗ್ಗೆ ಯೋಚನೆ ಕೂಡ ಮಾಡದಿರುವುದು ಏಕೆ? ಕೇರಳಕ್ಕೆ ಕೂಡ ಆಯುರ್ವೇದದ ರಾಷ್ಟ್ರೀಯ ಮಹತ್ವದ ಸಂಸ್ಥೆಯನ್ನು ನೀಡಬೇಕು ಎಂದು ಕೇರಳ ಸಿಪಿಎಂ ಸಂಸದ ಕೆ.ಕೆ. ರಾಜೇಶ್ ಹೇಳಿದರು.